ಎರಡನೇ ಮದುವೆ..ಪತಿ ಬಿಟ್ಟು ಹೋದ ಕಾರಣ..ಕೊನೆಗೂ ಮೌನ ಮುರಿದ ಕುಸುಮಾ
ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕಿ ಕುಸುಮಾ ಹನುಮಂತರಾಯಪ್ಪ ಜೀವನದಲ್ಲಿ ನೊಂದ ಮಹಿಳೆಯರಿಗೆ ಸ್ಫೂರ್ತಿ. ಕರ್ನಾಟಕದ ಜನಪ್ರಿಯ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಪತ್ನಿಯಾಗಿ ಐದು ವರ್ಷ ತುಂಬು ಜೀವನ ನಡೆಸಿದ್ದ ಕುಸುಮಾ ಅವರ ಜೀವನದಲ್ಲಿ ಯಾರೂ ಊಹಿಸದ ದುರಂತ ನಡೆದು ಹೋಗುತ್ತದೆ. ಗಂಡ, ಮನೆ, ಸಂಸಾರ ಎಂದುಕೊಂಡಿದ್ದ ಕುಸುಮಾ ಅವರನ್ನು ಬಿಟ್ಟು ಡಿ.ಕೆ ರವಿ ಇಹಲೋಕ ತ್ಯಜಿಸಿ ಬಿಡುತ್ತಾರೆ.
ಚಿಕ್ಕವಯಸ್ಸಿನಲ್ಲಿ ದೊಡ್ಡ ದುರಂತ ಕಂಡ ಕುಸುಮಾ ಜೀವನದಲ್ಲಿ ಮತ್ತೆ ಕಂಬ್ಯಾಕ್ ಮಾಡಿ, 2020ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡು, ಸಮಾಜ ಸೇವೆ ಜೊತೆಗೆ ಎರಡು ಬಾರಿ ಚುನಾವಣೆಗೆ ನಿಂತು ಘಟಾನುಘಟಿ ನಾಯಕರನ್ನು ಎದುರಿಸುತ್ತಾರೆ. ಸದ್ಯ ಕಾಂಗ್ರೆಸ್ ಪಕ್ಷದ ನಾಯಕಿಯಾಗಿರುವ ಕುಸುಮಾ ಹನುಮಂತರಾಯಪ್ಪ ಎದುರಾಳಿಗಳಿಗೆ ಎಂದಿಗೂ ಸಿಂಹಸ್ವಪ್ನವೇ. ರಾಜಕೀಯದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಕುಸುಮಾ ಅವರ ವೈಯಕ್ತಿಕ ಜೀವನ ಹೇಗಿದೆ? ಎರಡನೇ ಮದುವೆಯ ಆಲೋಚನೆ ಇದೆಯೇ?, ನೋವುಂಡು ಬದುಕು ಕಟ್ಟಿಕೊಂಡಿದ್ದೇಗೆ?

ಈ ಬಗ್ಗೆ ವಾರ್ತಾ ಭಾರತಿ ವಾಹಿನಿ ಜೊತೆಗೆ ಸ್ವತಃ ಅವರೇ ಮಾತನಾಡಿದ್ದಾರೆ. 'ನಾನು ಸತ್ಯವನ್ನು ಒಪ್ಪಿಕೊಂಡು ಅದರ ಜೊತೆ ಬದುಕಲು ಶುರು ಮಾಡಿದೆ. ಜೀವನದಲ್ಲಿ ಆಗಬಾರದ ಕಹಿ ಘಟನೆ ಆಗಿದೆ. ನನ್ನ ಜೀವನದ ರೀತಿ ಸಾಕಷ್ಟು ಜನರ ಜೀವನದಲ್ಲಿ ಆಗಿದೆ. ಆದರೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆ ಸಾಕಷ್ಟು ವಿವಿಧ ರೀತಿಯಲ್ಲಿ ತಿರುವುಗಳನ್ನು ಪಡೆದುಕೊಂಡಿತು. ನಾನು ಮಾತನಾಡಿದರೆ ಎಲ್ಲವನ್ನೂ ಮಾತನಾಡಬಹುದು ಆದರೆ ನಾನೇ ಅದನ್ನು ಮಾತನಾಡಬಾರದು ಅಂತಾ ನಿರ್ಧರಿಸಿದ್ದೇನೆ'.
'ಯಾಕೆಂದರೆ ಅವರು ಎಷ್ಟೋ ಜನಕ್ಕೆ ಸ್ಫೂರ್ತಿಯಾಗಿದ್ದಾರೆ. ಎಷ್ಟೋ ಮಕ್ಕಳು ಅವರ ರೀತಿ ಅಧಿಕಾರಿಯಾಗಬೇಕು ಅಂತಾ ಓದುತ್ತಿದ್ದಾರೆ. ಹೀಗಾಗಿ ಪಾಸಿಟಿವ್ನೆಸ್ ಅವರನ್ನು ಅವರಿಗೆ ಬಿಟ್ಟು ಬೇರೆ ಯಾವುದನ್ನೂ ಕೂಡ ಮಾತನಾಡಲು ಹೋಗಬಾರದು ಅಂತಾ ನನ್ನ ಮನಸ್ಸಿನೊಳಗೆ ನಾನೇ ನಿರ್ಧರಿಸಿಕೊಂಡಿದ್ದೇನೆ. ಎಷ್ಟೋ ಅವಮಾನಗಳನ್ನು ಮಾಡಿದರೂ, ಕೆಟ್ಟದಾಗಿ ಮಾತನಾಡಿದರೂ, ಅವಳಹೇಳನ ಮಾಡಿದರೂ ನಾನು ಅದರ ಬಗ್ಗೆ ಗಮನಕೊಡುತ್ತಿಲ್ಲ. ನೋವಾಗುತ್ತದೆ. ಆದರೆ ದೇವರು ಶಕ್ತಿಕೊಟ್ಟಿದ್ದಾರೆ'ಎಂದರು.
'ನಾನು ಚುನಾವಣೆಯಲ್ಲಿ ನಿಂತಹ ಸಂದರ್ಭದಲ್ಲಿ ಇದೇ ಎದುರಾಳಿಗಳ ಬಳಿ ಹೋಗಿ ಕೇಳಿದಾಗ ಆಕೆ ನಮಗೆ ಸ್ಪರ್ಧಿನೇ ಅಲ್ಲ ಎನ್ನುತ್ತಿದ್ದರು. ಆದರೆ ಈ ಪ್ರತಿನಿತ್ಯ ನನ್ನ ವಿಚಾರ ಇಲ್ಲದೇ ರಾಜಕೀಯವನ್ನೇ ಮಾಡುತ್ತಿಲ್ಲ. ನಾನು ಏನೂ ಅಲ್ಲ ಅಂದವರು ಇಂದು ನಾನು ಏನೋ ಆಗಿದ್ದೇನೆ ಅಂತಾ ಒಪ್ಪಿಕೊಂಡು ನನ್ನ ಹೆಸರು ಹೇಳದೇನೆ ರಾಜಕರಣನೇ ಮಾಡಲ್ಲ ಇವತ್ತು. ಪ್ರತಿ ನಿತ್ಯ ನನ್ನ ವಿಚಾರ, ನನ್ನ ವೈಯಕ್ತಿಕ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ' ಎಂದು ಹೇಳಿದರು.
'ಮರು ಮದುವೆಯ ಬಗ್ಗೆ ಕುಟುಂಬಸ್ಥರ ಸಲಹೆ ಬಗ್ಗೆ ಮಾತನಾಡಿದ ಅವರು, ಸಹಜವಾಗಿ ಎಲ್ಲಾ ತಂದೆ-ತಾಯಿಗೂ ಆಸೆ ಇದ್ದೇ ಇರುತ್ತಲ್ಲಾ. ಮಗಳು ಬಹಳ ಸಣ್ಣ ವಯಸ್ಸಿಗೆ ಅಂದರೆ ಇಪ್ಪತೈದು ವರ್ಷಕ್ಕೆ ವಿಧವೆಯಾದಳು. ಮತ್ತೊಂದು ಜೀವನ ಸಿಗಬೇಕು ಎನ್ನುವ ಆಸೆ ಎಲ್ಲಾ ತಂದೆ-ತಾಯಿಗೂ ಇರುವ ರೀತಿ ನನ್ನ ತಂದೆ-ತಾಯಿಗೂ ಇದೆ. ನನ್ನ ತಂದೆಗಿಂತ ಹೆಚ್ಚಾಗಿ ನನ್ನ ತಾಯಿಗೆ ಆ ನೋವಿದೆ. ನಿನಗೆ ಯಾರಿದ್ದಾರೆ? ನಾವು ಇರುವವರೆಗೂ ನಿನ್ನನ್ನು ನೋಡಿಕೊಳ್ಳಬಹುದು ಆಮೇಲೆ ನಿನಗೆ ಯಾರಿರುತ್ತಾರೆ ಎನ್ನುವ ಕಾಳಜಿ ಯೋಚನೆ ಅವರಿಗೆ ಇದ್ದೇ ಇದೆ'.

'ಆದರೆ ನಾನು ಬಹಳ ಇಷ್ಟಪಟ್ಟು, ಬಹಳ ಕನಸು ಹೊತ್ತು ನಾನು ಮದುವೆಯಾಗಿದ್ದು. ನಾನು ಇಪ್ಪತ್ತನೇ ವಯಸ್ಸಿನಲ್ಲಿ ಮದುವೆಯಾದಾಗ ನನಗೆ ಮದುವೆ ಬಗ್ಗೆ ಕಲ್ಪನೇನೂ ಇರಲಿಲ್ಲ. ನಮ್ಮದು ಸಂಪೂರ್ಣ ಅರೆಂಜ್ ಮ್ಯಾರೇಜ್. ಹೀಗಾಗಿ ಬಹಳ ಆಸೆ ನನಗೆ. ನನ್ನ ಜೀವನ, ನನ್ನ ಸಂಸಾರ, ನನ್ನ ಗಂಡ, ನನ್ನ ಮನೆ ಅಂತಾ ಬಹಳ ಆಸೆ ಇಂದ ಇದ್ದೆ. ಆದರೆ ಅವರು ತೀರಿ ಹೋದ ಕಾರಣ ಇತ್ತಲ್ಲ, ಅದು ನನಗೆ ಮರೆಯಲಾಗದಂತಹ ವಿಚಾರ ಹಾಗೂ ವಾಸಿಯಾಗದೇ ಇರುವಂತಹ ಒಂದು ಗಾಯ. ಒಂದು ರೀತಿ ನಂಬಿಕೆನೇ ಹೊರಟು ಹೋಯಿತು. ಹೇಗೆ ಯಾರನ್ನಾದರೂ ನಂಬಲಿ ಎನ್ನುವುದು ತಲೆಗೆ ಬಂತು' ಎಂದರು.
'ಎಷ್ಟು ನಂಬಿಕೆ ಇಟ್ಟುಕೊಂಡು, ಎಷ್ಟು ಆಸೆ ಇಟ್ಟುಕೊಂಡು ನನ್ನ ಗಂಡ, ನನ್ನ ಜೀವನ, ನನ್ನ ಮನೆ ಅಂತಾ ಸಾಕಷ್ಟು ಆಸೆಗಳನ್ನು ಇಟ್ಟುಕೊಂಡು ಜೀವನ ಮಾಡಬೇಕಾದರೆ ಬಿಟ್ಟು ಹೋದ ಕಾರಣ ನೆನಪಿಸಿಕೊಂಡರೆ ಅಯ್ಯೋ ಈ ರೀತಿ ನನಗೆ ಆಯ್ತಾಲ್ಲ, ಹೇಗೆ ಇದು ಅಂತಾ ವಾಸಿ ಆಗಿದೇ ಇರುವ ಗಾಯ. ಆ ಗಾಯ ನನಗೆ ಎಷ್ಟು ಆಳವಾದ ನೋವು ಕೊಟ್ಟಿದೆ ಅಂದರೆ ಮದುವೆ ಅಂದರೆ ಇಷ್ಟೇನಾ? ಜೀವನ ಅಂದರೆ ಇಷ್ಟೇನಾ ಎನ್ನುವ ನಿರ್ಧಾರಕ್ಕೆ ಬರುವಂತೆ ಮಾಡಿತು' ಎಂದು ತಮಗಾದ ನೋವನ್ನು ಹೊರಹಾಕಿದ್ದಾರೆ.
'ನಮ್ಮ ತಂದೆ ತಾಯಿ ಹೇಳುತ್ತಾರೆ ನಿನಗೂ ಯಾರಾದರೂ ಬೇಕು ಅಂತಾ ಜೀವನದಲ್ಲಿ ಎಂದು ಬಹಳಷ್ಟು ಬಾರಿ ಹೇಳುತ್ತಾರೆ. ಆದರೆ ನನಗೆ ಈಗ ಅದರ ಅವಶ್ಯಕತೆ ಇದೆ ಅಂತಾ ಅನಿಸುತ್ತಿಲ್ಲ. ರಾಜಕೀಯಕ್ಕೆ ಬಂದಿರುವುದಕ್ಕೆ ಇರಬಹುದು ಅಥವಾ ಹಾಗೆನೇ ಇರಬಹುದು. ಆದರೆ ಎಲ್ಲೋ ಒಂದು ಕಡೆ ನಂಬಿಕೆ ಬರುತ್ತಿಲ್ಲ. ನನ್ನ ನಂಬಿಕೆಗೆ ಪೆಟ್ಟು ಬಿದ್ದ ಕಾರಣ ಯಾರನ್ನೋ ಒಬ್ಬರನ್ನು ಸಂಪೂರ್ಣವಾಗಿ ನಂಬುವುದು ಈಗ ಕಷ್ಟ. ನನ್ನನ್ನು ಮೀರಿ ಒಬ್ಬ ವ್ಯಕ್ತಿಯ ಮೇಲೆ ಸಂಪೂರ್ಣ ನಂಬಿಕೆ ನನಗೆ ಬರುತ್ತಿಲ್ಲ' ಎಂದು ತಮಗೆ ಎರಡನೇ ಮದುವೆ ಬಗ್ಗೆ ಸದ್ಯಕ್ಕೆ ಆಸಕ್ತಿ ಇಲ್ಲ ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದರು.
ಮಾತು ಮುಂದುವರಿಸಿದ ಅವರು, 'ಅಮ್ಮ ಈಗಲೂ ಹೇಳುತ್ತಾರೆ, ನೋಡಪ್ಪ..ಯೋಚನೆ ಮಾಡಪ್ಪ ಅಂತಾರೆ, ಆದರೆ ನಾನೇ ಇಲ್ಲ ಅಮ್ಮ ಜೀವನದಲ್ಲಿ, ರಾಜಕೀಯದಲ್ಲಿ ಬ್ಯೂಸಿಯಾಗಿದ್ದೇನೆ. ನಾನು ಕ್ಷೇತ್ರದಲ್ಲಿ ಎಲ್ಲೇ ಹೋದರು ಮಕ್ಕಳು ಬಂದು ತುಂಬಾ ಪ್ರೀತಿಯಿಂದ ಮಾತನಾಡುತ್ತಾರೆ. ಎಲ್ಲೋ ಒಂದು ಕಡೆ ಅವರೇ ನನ್ನ ಮಕ್ಕಳು ಎನ್ನುವ ಸಂತೋಷ, ಸಂತೃಪ್ತಿ ನನಗೆ ಇದೆ. ಜೊತೆಗೆ ನನ್ನ ಕುಟುಂಬ ಇದೆ. ಹೀಗಾಗಿ ನನಗೆ ಸದ್ಯಕ್ಕೆ ಎರಡನೇ ಮದುವೆ ಅವಶ್ಯಕತೆ ಇಲ್ಲ ಅಂತಾ ನನಗೆ ಅನಿಸುತ್ತದೆ. ಜೊತೆಗೆ ಅದರ ಬಗ್ಗೆ ನನಗೆ ಧೈರ್ಯ ಬರುತ್ತಿಲ್ಲ' ಎಂದು ಹೇಳಿದರು.












Click it and Unblock the Notifications