ಡಿಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿರುವ ನಾಲ್ವರು ಯಾರು?
Recommended Video
ಬೆಂಗಳೂರು, ಮೇ 21: ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಸರ್ಕಾರ ಸ್ಥಾಪನೆಗೂ ಮುನ್ನವೇ ಸಚಿವ ಸಂಪುಟ ಸೇರಲಿರುವ ಸಂಭಾವ್ಯ ಶಾಸಕರ ಪಟ್ಟಿ ಕುತೂಹಲ ಕೆರಳಿಸಿದೆ. ಅನುಭವ, ಜಾತಿ, ಪ್ರದೇಶದ ಆಧಾರ ಮೇಲೆ ಉಭಯ ಪಕ್ಷಗಳು ಖಾತೆ ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಈ ನಡುವೆ ಕಾಂಗ್ರೆಸ್ಸಿನಿಂದ ಯಾರು ಡಿಸಿಎಂ ಆಗಲಿದ್ದಾರೆ? ಇಬ್ಬರಿಗೆ ಡಿಸಿಎಂ ಯೋಗ ಲಭಿಸಲಿದೆಯೇ? ಕಾದು ನೋಡಬೇಕಿದೆ. ಸದ್ಯಕ್ಕೆ ಡಿಸಿಎಂ ಹುದ್ದೆಗೆ ನಾಲ್ವರ ಹೆಸರು ಕೇಳಿ ಬಂದಿದೆ.
ಜೆಡಿಎಸ್ ಖಾತೆ ಹಂಚಿಕೆ ಪಟ್ಟಿ ರೆಡಿ, ಯಾವ ಜಾತಿಗೆ ಎಷ್ಟು ಸ್ಥಾನ?
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದದಿಂದ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಾದ ಬಳಿಕ ವಿಶ್ವಾಸಮತ ಕೂಡ ಕೋರಲಿದ್ದಾರೆ. ವಿಶ್ವಾಸಮತ ಗಳಿಸಿದ ಬಳಿಕ, ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ.
ಲಿಂಗಾಯತ, ದಲಿತ, ಒಕ್ಕಲಿಗ ಕೋಟಾದಲ್ಲಿ ಯಾರಿಗೆ ಡಿಸಿಎಂ ಸಿಗಲಿದೆ ಎಂಬ ಕುತೂಹಲವಿದೆ. ಆದರೆ, ಬಹುತೇಕ ದಲಿತ ಕೋಟಾದಲ್ಲಿ ಜಿ ಪರಮೇಶ್ವರ ಅವರಿಗೆ ಡಿಸಿಎಂ ಸಿಗುವ ಸಾಧ್ಯತೆ ಬಹುತೇಕ ಹೆಚ್ಚಿದೆ. ಕಾಂಗ್ರೆಸ್ ಬಹುಮತ ಗಳಿಸಿದ್ದರೆ, ಜಿ ಪರಮೇಶ್ವರ ಅವರು ಸಿಎಂ ಕುರ್ಚಿ ಮೇಲೆ ಕೂರಲು ಮುಂದಾಗುತ್ತಿದ್ದರು ಎಂಬುದು ಸುಳ್ಳಲ್ಲ.
ಲಿಂಗಾಯತ ಕೋಟಾದಡಿಯಡಿಯಲ್ಲಿ ಡಿಸಿಎಂ
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಷಯದಲ್ಲಿ ಸಿದ್ದರಾಮಯ್ಯ ಸಂಪುಟವೇ ಇಬ್ಭಾಗವಾಗಿತ್ತು. ಬಸವರಾಜ ರಾಯರೆಡ್ಡಿ, ಡಾ. ಶರಣಪ್ರಕಾಶ್ ಪಾಟೀಲ್ ಸೋಲು ಕಂಡಿದ್ದರೆ, ಎಂಬಿ ಪಾಟೀಲ್ ಗೆದ್ದಿದ್ದಾರೆ.ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ 46ಕ್ಕೂ ಲಿಂಗಾಯತ ಸ್ಪರ್ಧಿಗಳ ಪೈಕಿ 17 ಮಂದಿ ಮಾತ್ರ ಗೆದ್ದಿದ್ದಾರೆ. ಉತ್ತರ ಕರ್ನಾಟಕದ ಪ್ರಾತಿನಿಧ್ಯ, ವೀರಶೈವ ಹಾಗೂ ಲಿಂಗಾಯತ ಹೀಗೆ ಸಮುದಾಯದವರು ಪ್ರತ್ಯೇಕವಾಗಿ ಲಾಬಿ ನಡೆಸಿದ್ದಾರೆ. ಸದ್ಯಕ್ಕೆ ಶಾಮನೂರು ಶಿವಶಂಕರಪ್ಪ ಹಾಗೂ ಎಂಬಿ ಪಾಟೀಲ್ ಅವರ ಹೆಸರು ಕೇಳಿ ಬಂದಿದೆ.
ಒಕ್ಕಲಿಗ ಕೋಟಾದಡಿಯಲ್ಲಿ ಡಿಸಿಎಂ
ಒಕ್ಕಲಿಗ ಕೋಟಾದಡಿಯಲ್ಲಿ ಡಿಸಿಎಂಯಾಗಲು ಡಿಕೆ ಶಿವಕುಮಾರ್ ಹೆಸರು ಬಲವಾಗಿ ಕೇಳಿ ಬಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆ, ಶಾಸಕರ ಬಲವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿಕೊಂಡ ಡಿಕೆ ಶಿವಕುಮಾರ್ ಅವರಿಗೆ ಉನ್ನತ ಹುದ್ದೆ ನೀಡಬೇಕು ಎಂಬ ಕೂಗಿದೆ. ಆದರೆ, ಸಿಎಂ ಕುಮಾರಸ್ವಾಮಿ ಅವರು ಒಕ್ಕಲಿಗರಾಗಿರುವುದರಿಂದ ಡಿಸಿಎಂ ಹುದ್ದೆ ಈ ಬಾರಿ ಒಕ್ಕಲಿಗರಿಗೆ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ, ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬರುವ ಎಲ್ಲಾ ಲಕ್ಷಣಗಳಿವೆ.
ಅವಿಭಜಿತ ಲಿಂಗಾಯತ ವೀರಶೈವರ ಪ್ರತಿನಿಧಿ
ಅವಿಭಜಿತ ಲಿಂಗಾಯತ ವೀರಶೈವರ ಪ್ರತಿನಿಧಿಯಾಗಿ ಮಹಾಸಭಾದ ಮುಖಂಡರಾಗಿ, ಹಿರಿತನವನ್ನು ಪರಿಗಣಿಸಿ, ಲಿಂಗಾಯತ ಕೋಟಾದಡಿಯಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಹುದ್ದೆ ಒಲಿಯಬಹುದು. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಮುಂದಾದ ಸಿದ್ದರಾಮಯ್ಯ ಅವರ ಸರ್ಕಾರದ ಕ್ರಮವನ್ನು ವಿರೋಧಿಸಿದ್ದ ಶಾಮನೂರು ಅವರ ಬೆಂಬಲಿಗೆ ಪಂಚಪೀಠಗಳು, ಮಹಾಸಭಾ ಕೂಡಾ ಇದೆ. ಈಗಾಗಲೇ ಶಾಮನೂರು ಪರ ಲಾಬಿ ನಡೆಸಲಾಗಿದೆ. ಆದರೆ, ವಯೋಮಿತಿ ಕಾರಣದಿಂದ ಸಿದ್ದರಾಮಯ್ಯ ಅವರ ಸಂಪುಟದಲ್ಲೆ ಸ್ಥಾನ ಪಡೆಯದ ಶಾಮನೂರು ಅವರಿಗೆ ಡಿಸಿಎಂ ಸ್ಥಾನವಿರಲಿ, ಸಚಿವ ಸ್ಥಾನವೂ ಸಿಗುವ ಲಕ್ಷಣಗಳು ನಿಚ್ಚಳವಾಗಿಲ್ಲ.
ಉತ್ತರ ಕರ್ನಾಟಕದ ಕೋಟಾದಡಿಯಲ್ಲಿ ಡಿಸಿಎಂ
ಸಿದ್ದರಾಮಯ್ಯ ಅವರ ಆಪ್ತ, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಕರೆನಿಸಿಕೊಂಡಿರುವ ಎಂಬಿ ಪಾಟೀಲರಿಗೆ ಉತ್ತರ ಕರ್ನಾಟಕದ ಕೋಟಾದಡಿಯಲ್ಲಿ ಡಿಸಿಎಂ ಹುದ್ದೆ ಒಲಿಯ ಸಾಧ್ಯತೆ ನಿಚ್ಚಳವಾಗಿದೆ. ಆದರೆ, ದಲಿತರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಪಟ್ಟು ಹಿಡಿದರೆ ಮಾತ್ರ ಜಿ ಪರಮೇಶ್ವರ ಹೆಸರು ಮುಂದಕ್ಕೆ ಬರಲಿದೆ.
ದಲಿತ ಕೋಟಾದಡಿಯಲ್ಲಿ ಡಿಸಿಎಂ
ಸಿಎಂ ಆಗುವ ಕನಸು ಹೊತ್ತಿರುವ ಜಿ ಪರಮೇಶ್ವರ ಅವರಿಗೆ ಈ ಬಾರಿ ಡಿಸಿಎಂ ಹುದ್ದೆ ಸುಲಭವಾಗಿ ಒಲಿಯಲಿದೆ ಎಂಬ ಮಾತಿದೆ. ಕೆಪಿಸಿಸಿ ಸ್ಥಾನವನ್ನು ಬಿಟ್ಟು, ಡಿಸಿಎಂ ಅಥವಾ ಗೃಹ ಖಾತೆಗೆ ಪರಮೇಶ್ವರ ಅವರ ಹೆಸರು ಕೇಳಿ ಬಂದಿದೆ. ಇದಕ್ಕೆ ಹೆಚ್ಚಿನ ವಿರೋಧವೂ ವ್ಯಕ್ತವಾಗಿಲ್ಲ. ಸದ್ಯಕ್ಕೆ ಎಂಬಿ ಪಾಟೀಲ ಹಾಗೂ ಪರಮೇಶ್ವರ ನಡುವೆ ಯಾರಿಗೆ ಡಿಸಿಎಂ ಹುದ್ದೆ ಒಲಿಯಲಿದೆ ಕಾದುನೋಡಬೇಕಿದೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಬಯಸಿದರೆ ಇಬ್ಬರಿಗೂ ಬಂಪರ್ ಕೊಡುಗೆ ಸಿಗುವ ಸಾಧ್ಯತೆಯಿದೆ.