ಪ್ಲಾಟ್ಫಾರಂ ಟಿಕೆಟ್ ದರ ಏರಿಸಿದ್ರೆ ಅಭಿವೃದ್ಧಿ, ಆಸ್ಪತ್ರೆ ರೇಟ್ ಹೆಚ್ಚಿಸಿದ್ರೆ ಗ್ಯಾರಂಟಿಗಾ?
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಏರಿಕೆ ಮಾಡುತ್ತಿರುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಸಮರ್ಥನೆ ನೀಡಿರುವುದಲ್ಲದೆ, ಬಿಜೆಪಿ ಆರೋಪಕ್ಕೆ ಖಡಕ್ ಕೌಂಟರ್ ಕೂಡ ನೀಡಿದೆ.
10 ರೂಪಾಯಿ ಇದ್ದ ರೈಲ್ವೇ ಪ್ಲಾಟ್ಫಾರಂ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಿಸಿದರೆ ಅದು ಅಭಿವೃದ್ಧಿಗೆ, ಅದೇ ಆಸ್ಪತ್ರೆಯಲ್ಲಿ 20 ರೂಪಾಯಿ ಇದ್ದ ಚಿಕಿತ್ಸಾ ದರವನ್ನು 30 ರೂಪಾಯಿಗೆ ಏರಿಕೆ ಮಾಡಿದರೆ ಅದು ಗ್ಯಾರಂಟಿಗೆ ಹಣ ಹೊಂದಿಸುವುದಕ್ಕಾ? ಎಂದು ತಿರುಗೇಟು ನೀಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ವಾಟರ್ ಚಾರ್ಜ್, ವಿದ್ಯುತ್ ದರ ಎಲ್ಲವನ್ನೂ ಪರಿಷ್ಕರಣೆ ಮಾಡಿ, ದರ ಹೆಚ್ಚಳ ಮಾಡಲಾಗಿತ್ತು. ಈಗ ನಮ್ಮ ಸರ್ಕಾರ ಅಲ್ಪ ಮೊತ್ತದ ದರ ಪರಿಷ್ಕರಣೆ ಮಾಡಿದರೆ ಜನಪರ ಗ್ಯಾರಂಟಿಗಳ ಮೇಲೆ ಗೂಬೆ ಕೂರಿಸುತ್ತಿದ್ದೀರ? ಎಂದು ವಾಗ್ದಾಳಿ ನಡೆಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧ, ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ.

ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸದ ಅಸಹನೆ, ಅಸೂಯೆಗೆ ಮೊಸರಲ್ಲೂ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರ ಎಂದು ಕುಟುಕಿದೆ.
ಬಿಜೆಪಿ ನಾಯಕರ ಆರೋಪವೇನು?
ಬಿಪಿಎಲ್ ಕಾರ್ಡು ಕ್ಯಾನ್ಸಲ್-ಸರ್ಕಾರಿ ಆಸ್ಪತ್ರೆ ಶುಲ್ಕ ಡಬಲ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ಮೂಲಕ ಬಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿದ್ದ ಉಚಿತ ವೈದ್ಯಕೀಯ ಸೇವೆಯನ್ನು ಕಸಿದುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈಗ ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು ದುಪ್ಪಟ್ಟು ಮಾಡುವ ಮೂಲಕ ಬಡವರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ ಎಂದಿದ್ದಾರೆ.
ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸವನ್ನ ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರ ಬಡವರಿಗೆ ಸಿಗುತ್ತಿದ್ದ ಒಂದೊಂದೇ ಸವಲತ್ತುಗಳನ್ನು ಕಿತ್ತುಕೊಂಡು ದ್ರೋಹ ಮಾಡುತ್ತಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯ ಆಡಳಿತ ಹಾಗೂ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರವನ್ನು ಹೆಚ್ಚಿಸಿ ನಾಡಿನ ಬಡ ರೋಗಿಗಳ ಜೇಬಿಗೂ ಕತ್ತರಿ ಹಾಕುವ ಗ್ಯಾರಂಟಿ ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.
ಬರಿದಾಗಿರುವ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಒಂದಿಲ್ಲೊಂದು ಬೆಲೆ ಏರಿಕೆಯ ದಾರಿ ಹುಡುಕುತ್ತಿರುವ ರಾಜ್ಯ ಸರ್ಕಾರ, ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ದರವನ್ನು ಶೇ 20ರಷ್ಟು ಹೆಚ್ಚಿಸಿದೆ. ಉಚಿತ ಭಾಗ್ಯಗಳ ಕೊಟ್ಟೆವೆಂದು ಆರೋಗ್ಯ ಭಾಗ್ಯವನ್ನೇ ಕಸಿದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.












Click it and Unblock the Notifications