ಅನರ್ಹತೆಯ ಬೆದರಿಕೆಗೂ ಜಗ್ಗದ ಅತೃಪ್ತ ಶಾಸಕರು: ಮುಂಬೈನಿಂದ 'ರೆಬೆಲ್ಸ್' ಖಡಕ್ ಸಂದೇಶ

Recommended Video

      ಸಿದ್ದರಾಮಯ್ಯ ಬೆದರಿಕೆಗೆ ಜಗ್ಗಲಿಲ್ಲ ರೆಬೆಲ್ ಅತೃಪ್ತ ಶಾಸಕರು | Oneindia Kannada

      ಬೆಂಗಳೂರು, ಜುಲೈ 9: ಕಳೆದ ಒಂದು ವರ್ಷದಲ್ಲಿ ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಮ್ಮ ನೋವುಗಳಿಗೆ ಸರ್ಕಾರದ ಯಾವ ಮುಖಂಡರೂ ಕಿವಿಗೊಟ್ಟಿಲ್ಲ. ಆ ನೋವಿನಿಂದ ರಾಜೀನಾಮೆ ಕೊಟ್ಟಿದ್ದೇವೆ. ಅದನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಕಾಂಗ್ರೆಸ್-ಜೆಡಿಎಸ್ ದೋಸ್ತಿ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

      ಈ ಮೂಲಕ ರಾಜೀನಾಮೆ ನೀಡಿರುವ ಶಾಸಕರು ವಾಪಸ್ ಬಂದು ರಾಜೀನಾಮೆ ಹಿಂಪಡೆಯದೆ ಇದ್ದರೆ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಕ್ಕೆ ಅನರ್ಹತೆಯ ಕ್ರಮ ಜರುಗಿಸಲಾಗುವುದು ಎಂಬ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಎಚ್ಚರಿಕೆಗೆ ತಿರುಗೇಟು ನೀಡಿದ್ದಾರೆ.

      ಮಾಧ್ಯಮಗಳೊಂದಿಗೆ ಮಾತನಾಡಿರುವ ಅತೃಪ್ತ ಶಾಸಕರು ತಮ್ಮ ನಿರ್ಧಾರ ಅಚಲ. ಅದರಿಂದ ಹಿಂದಕ್ಕೆ ಸರಿಯುವ ಸಾಧ್ಯತೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದೇವೆ. ಯಾರ ಭಯದಲ್ಲಿಯೂ ಅಥವಾ ಆಶ್ರಯದಲ್ಲಿಯೂ ಇಲ್ಲ. ರಾಜೀನಾಮೆ ಸಲ್ಲಿಸಿರುವುದು ಶಾಸಕ ಸ್ಥಾನಕ್ಕೆ ಮಾತ್ರ, ಪಕ್ಷದ ಸದಸ್ಯತ್ವಕ್ಕೆ ಅಲ್ಲ. ನಾವು ಬಿಜೆಪಿ ಸೇರುತ್ತಿಲ್ಲ ಎಂದು ಹೇಳಿದ್ದಾರೆ.

      ಜನರಿಗೆ ಸಮ್ಮಿಶ್ರ ಸರ್ಕಾರ ಇಷ್ಟವಾಗಿಲ್ಲ

      ಜನರಿಗೆ ಸಮ್ಮಿಶ್ರ ಸರ್ಕಾರ ಇಷ್ಟವಾಗಿಲ್ಲ

      ರಾಜ್ಯದ ಶೇ 90ರಷ್ಟು ಜನರಿಗೆ ಈಗಿರುವ ಸಮ್ಮಿಶ್ರ ಸರ್ಕಾರ ಬೇಕಾಗಿಲ್ಲ. ಅವರು ಈ ಸರ್ಕಾರವನ್ನು ಇಷ್ಟಪಟ್ಟಿಲ್ಲ. ಅದಕ್ಕೆ ಕಾರಣ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ನಾವು ಯಾವುದೇ ಮಂತ್ರಿ ಪದವಿಗೆ ಬಯಸಿ ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಯ ಕಾರಣದಿಂದ ರಾಜೀನಾಮೆ ನೀಡಿದ್ದೇವೆ. ಅಭಿವೃದ್ಧಿಯಾಗುತ್ತಿಲ್ಲ ಎಂಬುದಾಗಿ ಜನರೂ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.

      ಸಿದ್ದರಾಮಯ್ಯ ಹೇಳಿರುವುದು ಸುಳ್ಳು

      ಸಿದ್ದರಾಮಯ್ಯ ಹೇಳಿರುವುದು ಸುಳ್ಳು

      ಸಿಎಲ್‌ಪಿ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಹೇಳಿರುವುದನ್ನು ಗಮನಿಸಿದ್ದೇವೆ. ಅವರ ಹೇಳಿಕೆ ಸುಳ್ಳು. ನಮ್ಮನ್ನು ಯಾರೂ ಇಲ್ಲಿಗೆ ಕರೆದು ತಂದಿಲ್ಲ. ನಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿ ಬಂದಿದ್ದೇವೆ. ಅನರ್ಹತೆ ಮಾಡುತ್ತೇವೆ ಎಂದು ಹೆದರಿಸಿದರೆ ನಾವು ಹೆದರುವವರಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಆಗುತ್ತಿರಲಿಲ್ಲ. ಅಭಿವೃದ್ಧಿ ಆಗುತ್ತಿಲ್ಲ ಎಂದು ಎಲ್ಲರಿಗೂ ಅಸಮಾಧಾನವಿದೆ. ಹೀಗಾಗಿ ಜೆಡಿಎಸ್‌ನ 3 ಮತ್ತು ಕಾಂಗ್ರೆಸ್‌ನ 12 ಶಾಸಕರು ರಾಜೀನಾಮೆ ನೀಡಿದ್ದೇವೆ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಹೇಳಿದರು.

      ಬಿಜೆಪಿ ಸೇರುವ ಯೋಚನೆಯಿಲ್ಲ

      ಬಿಜೆಪಿ ಸೇರುವ ಯೋಚನೆಯಿಲ್ಲ

      ನಮಗೆ ಬಿಜೆಪಿ ಸೇರುವ ಯೋಚನೆಯಿಲ್ಲ. ನಾವು ಜೆಡಿಎಸ್ ಮತ್ತು ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ. ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿಲ್ಲ. ಒಂದು ವರ್ಷದಿಂದ ಎಲ್ಲ ಶಾಸಕರನ್ನು ಕರೆದು ಒಮ್ಮೆಯೂ ಸಭೆ ನಡೆಸಿಲ್ಲ. ನಮ್ಮ ಕೆಲಸ ಆಗುತ್ತಿಲ್ಲ ಎಂಬ ಬೇಸರವಿದೆ. ನಾವು ಏನು ಮಾಡೋಣ? ಶಾಸಕರಿಗೆ ಹೇಳದೆಯೂ ಅವರು ವಿದೇಶಕ್ಕೆ ಹೋಗುತ್ತಾರೆ ಎಂದರು.

      ನಮ್ಮನ್ನು ಅನರ್ಹಗೊಳಿಸಿದರೆ ಮಾಡಲಿ, ತೊಂದರೆ ಇಲ್ಲ. ನಾವು ಬೇಸರಪಟ್ಟುಕೊಳ್ಳುವುದಿಲ್ಲ. ರಾಜೀನಾಮೆ ನೀಡಿ ಎರಡು ದಿನ ನೆಮ್ಮದಿಯಿಂದ ಇರಲು ಮುಂಬೈಗೆ ಬಂದಿದ್ದೇವೆ. ಇಲ್ಲಿ ಮಂದಿರ, ಮಾರುಕಟ್ಟೆಗಳಿಗೆ ಹೋಗಿ ಬರುತ್ತೇವೆ. ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಆರು ಕೋಟಿ ಜನರು ಇಷ್ಟಪಟ್ಟಿಲ್ಲ. ಬಿಜೆಪಿ ಸರ್ಕಾರ ರಚನೆಯ ಬಗ್ಗೆ ನಮಗೆ ತಿಳಿದಿಲ್ಲ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ. ವಾಪಸ್ ಬರುವ ಮಾತಿಲ್ಲ ಎಂದರು.

      ರಾಜಕಾರಣ ಇಲ್ಲದಿದ್ದರೆ ಮನೆಯಲ್ಲಿರುತ್ತೇವೆ

      ರಾಜಕಾರಣ ಇಲ್ಲದಿದ್ದರೆ ಮನೆಯಲ್ಲಿರುತ್ತೇವೆ

      ನಾವಿಲ್ಲಿ ಆಟವಾಡಲು ಬಂದಿಲ್ಲ. ನೋವು ಸಹಿಸಲಾಗದೆ ಬಂದಿದ್ದೇವೆ. ನಾವಿನ್ನೂ ಕಾಂಗ್ರೆಸ್‌ನಲ್ಲಿದ್ದೇವೆ. ರಾಜೀನಾಮೆ ಹಿಂಪಡೆಯದೆ ಇದ್ದರೆ ಉಚ್ಚಾಟನೆ ಮಾಡುವುದಾಗಿ ಸಿಎಲ್‌ಪಿ ನಾಯಕರು ಹೇಳಿದ್ದಾರೆ. ಯಾವ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆದುಕೊಳ್ಳುವ ಪ್ರಶ್ನೆಯಿಲ್ಲ. ರಾಜಕಾರಣ ಇಲ್ಲದಿದ್ರೂ ಪರವಾಗಿಲ್ಲ. ಮನೆಯಲ್ಲಿರುತ್ತೇವೆ. ರಾಜಕಾರಣದಿಂದಲೇ ಬದುಕಬೇಕಾಗಿಲ್ಲ ಎಂದು ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಹೇಳಿದರು.

      ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಲ್ಲ

      ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಲ್ಲ

      ಅವರು ಪಕ್ಷಾಂತರ ನಿಷೇಧ ಕಾಯ್ದೆಯನ್ನಾದರೂ ಬಳಸಲಿ, ಯಾವುದನ್ನಾದರೂ ಬಳಸಲಿ. ರಾಜೀನಾಮೆ ಅಂಗೀಕರಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇವೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವ ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿದ್ದೇವೆ. ನಾವು ಈಗಲೂ ಸಿದ್ದರಾಮಯ್ಯ ಅವರಿಗೆ ಆಪ್ತರು. ಅವರ ಬೆನ್ನಿಗೆ ಚೂರಿ ಹಾಕಿಲ್ಲ. ಆದರೆ ಅವರು ನಮ್ಮ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ನೋವನ್ನು ಅವರಿಗೆ ಹೇಳಿಯೇ ಬಂದಿದ್ದೇನೆ. ತಾಯಿ ಮೇಲಾಣೆ ರಾಜೀನಾಮೆ ಕೊಡ್ತೀನಿ ಎಂದು ಬಂದಿದ್ದೆ ಎಂದು ಹೇಳಿದರು.

      ಅನರ್ಹವಾದರೂ ಮಾಡಲಿ, ಕಿತ್ತು ಹಾಕಲಿ

      ಅನರ್ಹವಾದರೂ ಮಾಡಲಿ, ಕಿತ್ತು ಹಾಕಲಿ

      ರಾಜೀನಾಮೆಗೆ ಸಣ್ಣ ಸಣ್ಣ ವಿಷಯ ಕಾರಣ. ಅದನ್ನು ಮಾಧ್ಯಮದ ಮುಂದೆ ಹೇಳೊಲ್ಲ. ಇಂದು ರಾಜೀನಾಮೆ ಕೊಟ್ಟು ಆಗಿದೆ. ಹಿಂಪಡೆಯುವ ಪ್ರಶ್ನೆ ಇಲ್ಲ. ಹತ್ತು ಜನ ಶಾಸಕರಿದ್ದಾರೆ. ಮುನಿರತ್ನ ಸಿನಿಮಾ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಹಿರಿಯರಾದ ರಾಮಲಿಂಗಾ ರೆಡ್ಡಿ ಅವರಿಗೆ ಎಷ್ಟು ನೋವಾಗಿರಬೇಕು. ರೋಷನ್ ಬೇಗ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರಿಗೂ ನೋವುಂಟು ಮಾಡುವ ಕೆಲಸ ಆಗುತ್ತಿದೆ. ಸಾಕಾಗಿದೆ ರಾಜಕಾರಣ ಬೇಡ. ಅನರ್ಹವಾದರೂ ಮಾಡಲಿ, ಕಿತ್ತಾಕಲಿ ಏನೇ ಮಾಡಲಿ ಎಂದು ಹೇಳಿದರು.

      ನಮ್ಮನ್ನು ಯಾರೂ ಬಂಧನಲ್ಲಿ ಇರಿಸಿಲ್ಲ. ಈ ಕ್ಷಣದಲ್ಲೇ ಸ್ಪೀಕರ್ ಹತ್ತಿರ ಹೋಗಿ ಮಾತನಾಡುವಷ್ಟು ಸ್ವತಂತ್ರರಾಗಿದ್ದೇವೆ. ಯಾರ ಬಂಧನಲ್ಲಿಯೂ ಇಲ್ಲ. ನಾವಾಗಿಯೇ ಇಲ್ಲಿ ಬಂದಿದ್ದೇವೆ. ಸ್ಪೀಕರ್ ಕರೆದರೆ ತಕ್ಷಣವೇ ಹೋಗುತ್ತೇವೆ. ನಮ್ಮ ಸ್ವಂತ ಇಚ್ಛೆ ಮತ್ತು ನಮ್ಮ ಸ್ವಂತ ಖರ್ಚಿನಿಂದ ಬಂದಿದ್ದೇವೆ.

      ರಾಜಕೀಯ ನಿವೃತ್ತಿಗೂ ಸಿದ್ಧ

      ರಾಜಕೀಯ ನಿವೃತ್ತಿಗೂ ಸಿದ್ಧ

      ಪಕ್ಷ ಕಟ್ಟಿ ಬೆಳೆಸಿದವರು ನಾವ್ಯಾಕೆ ಗುದ್ದಾಡಿಕೊಂಡು ಇರಬೇಕು. ಅದರ ಅವಶ್ಯಕತೆ ಇಲ್ಲ. 13 ಜನ ಶಾಸಕರು ಒಟ್ಟಾಗಿದ್ದೇವೆ. ರಾಜಕೀಯ ನಿವೃತ್ತಿಗೂ ತಯಾರಿದ್ದೇವೆ. ಮನೆಯಲ್ಲಿ ಮಕ್ಕಳು ಕುಟುಂಬದ ಜತೆ ಆರಾಮಾಗಿ ಇರುತ್ತೇವೆ. ನಮ್ಮನ್ನು ತಂದೆ ತಾಯಿ ರಾಜಕಾರಣಕ್ಕೆ ಕರೆದು ತಂದಿಲ್ಲ. ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು, ಕೈ ಬಾಯಿ ಶುದ್ಧವಾಗಿ ರಾಜಕೀಯ ಮಾಡಿದ್ದೇವೆ. ಅಭಿವೃದ್ಧಿ ಆಗಿಲ್ಲ ಎಂದು ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಯಾರನ್ನು ಕೇಳಬೇಕು? ಎಂದು ಎಸ್ ಟಿ ಸೋಮಶೇಖರ್ ಪ್ರಶ್ನಿಸಿದರು.

      15 ತಿಂಗಳು ಕಾದಿದ್ದೇವೆ

      15 ತಿಂಗಳು ಕಾದಿದ್ದೇವೆ

      ನಾವು ಹತ್ತು ಜನ ಶಾಸಕರು ರಾಜೀನಾಮೆ ಕೊಟ್ಟು ಎಲ್ಲ ಜತೆಯಲ್ಲಿದ್ದೇವೆ, ಸಿಎಲ್‌ಪಿ ಲೀಡರ್ ಸಭೆ ಆದ ಬಳಿಕ ಹೇಳಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಪಕ್ಷದ ಬಹುತೇಕ ಸಚಿವರು ಕೂಡ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು ಸಚಿವರಾಗಿದ್ದಾರೆ. ನಾವು ಭೈರತಿ ಬಸವರಾಜ್ ಬೇರೆ ಬೇರೆ ಇರಬಹುದು. ಆದರೆ ಕಾಂಗ್ರೆಸ್‌ನಲ್ಲಿ ಬೆಳೆದು ಪಕ್ಷ ಕಟ್ಟುವ ಕೆಲಸ ಮಾಡಿದ್ದೆವೆ. ಈ ಕ್ಷಣದವರೆಗೂ ಕಾಂಗ್ರೆಸ್ ಕಾರ್ಯಕರ್ತರಾಗಿ ಇದ್ದೇವೆ. ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇವೆ. ಪರ್ಸನಲ್ ಅಜೆಂಡಾ ಇಟ್ಟುಕೊಂಡು ಕೊಟ್ಟಿಲ್ಲ.

      ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ 15 ತಿಂಗಳಿನಿಂದ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಸರ್ಕಾರ ಮುಂದಿನ ದಿನದಲ್ಲಿ ಸರಿಹೋಗಬಹುದು, ಅಭಿವೃದ್ದಿ ಆಗಬಹುದು ಒಳ್ಳೆಯ ಸಂದೇಶ ರವಾನೆಯಾಗಬಹುದು ಎಂದು 15 ತಿಂಗಳು ಕಾದಿದ್ದೇವೆ.

      ಎಲ್ಲ ನಾಯಕರಿಗೂ ತಿಳಿಸಿದ್ದೆವು

      ಎಲ್ಲ ನಾಯಕರಿಗೂ ತಿಳಿಸಿದ್ದೆವು

      ಈ ಎಲ್ಲ ಶಾಸಕರು ಒಂದಲ್ಲ ಒಂದು ಕಾರ್ಯಕ್ರಮದಿಂದ ಬೇಸರವಾಗಿ ಮಾಧ್ಯಮ, ಸಿಎಲ್‌ಪಿ ಸಭೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಎಲ್ಲರ ಮುಂದೆಯೂ ಹೇಳಿದ್ದೇವೆ. ನಮಗೆ ಆದ ತೊಂದರೆಗಳ ಬಗ್ಗೆ, ಕ್ಷೇತ್ರದ ಸಮಸ್ಯೆ ಬಗ್ಗೆ ಸಿಎಲ್‌ಪಿ ನಾಯಕರಿಗೂ ಮಾಹಿತಿ ಇದೆ. ಮನಸಿನಲ್ಲಿರುವ ನೋವು ಅವರ ಗಮನಕ್ಕೆ ತಂದಿದ್ದೇವೆ. ನಾವು ಹಠಾತ್ ನಿರ್ಧಾರ ಮಾಡಿಲ್ಲ. ಮೂರು ನಾಲ್ಕು ತಿಂಗಳ ಹಿಂದೆಯೇ ಶಾಸಕ ಸ್ಥಾನದ ಜತೆಗೆ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸಿಎಲ್‌ಪಿ ನಾಯಕರು, ಡಿಸಿಎಂಗೆ ತಿಳಿಸಿದ್ದೇವೆ. ಡಿಕೆ ಶಿವಕುಮಾರ್ ಅವರ ಮನೆಗೂ ಹೋಗಿ ಹೇಳಿದ್ದೇವೆ.

      ಯಾವ ಗನ್ ಪಾಯಿಂಟೂ ಇಲ್ಲ

      ಯಾವ ಗನ್ ಪಾಯಿಂಟೂ ಇಲ್ಲ

      ಡಿಕೆ ಶಿವಕುಮಾರ್ ಅವರು ಹೇಳುತ್ತಾರೆ, ನಮ್ಮನ್ನು ಗನ್ ಪಾಯಿಂಟ್‌ನಲ್ಲಿ ಕರೆದುಕೊಂಡು ಬರಲಾಗಿದೆ ಎಂದು. ನೋ ಕ್ವಶ್ವನ್ ಆಫ್ ಗನ್ ಪಾಯಿಂಟ್. ನಾವೇನು ರೌಡಿಸಂ ಮಾಡಿದ್ದೇವೆಯೇ ಹೆದರಿಸಲು. ಯಾವುದಕ್ಕೂ ನಾವು ಹೆದರಬೇಕಿಲ್ಲ. ಶಿವಕುಮಾರ್ ಅವರೇ ನಮ್ಮನ್ನು ಹೀಗೆ ಹೆದರಿಸುವ ಧೈರ್ಯ ಯಾರಿಗೂ ಇಲ್ಲ. ಯಾರೂ ಆ ಕೆಲಸ ಕೂಡ ಮಾಡಿಲ್ಲ.

      ಅನರ್ಹಗೊಳಿಸುವುದಾಗಿ ಹೇಳಿರುವ ಸಿಎಲ್‌ಪಿ ನಾಯಕ ಸನ್ಮಾನ್ಯ ಸಿದ್ದರಾಮಯ್ಯ ಗೌರವ ಕೊಟ್ಟಿದ್ದೇವೆ. ಅವರು ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಬಂದಾಗ ಸಿಎಂ ಮಾಡಲು ನಾವು ಅಳಿಲು ಸೇವೆ ನೀಡಿದ್ದೇವೆ. ಅವರದ್ದು ಆಗ ಅನರ್ಹತೆಗೆ ಯೋಗ್ಯ ಆಗಲಿಲ್ಲವೇ? ಅವರಿಗೆ ಹೃದಯಪೂರ್ವಕವಾಗಿ ಸ್ವಾಗತ ಮಾಡಲಿಲ್ಲವೇ?

      ಪಕ್ಷ ವಿರೋಧಿ ಕೆಲಸ ಮಾಡಿದವರು ಸಚಿವರಾಗಿದ್ದಾರೆ

      ಪಕ್ಷ ವಿರೋಧಿ ಕೆಲಸ ಮಾಡಿದವರು ಸಚಿವರಾಗಿದ್ದಾರೆ

      ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ನೋವನ್ನು ಯಾರೂ ಕೇಳಿಲ್ಲ. ನಿರ್ಲಕ್ಷ್ಯ ಮಾಡಿದರು. ಹೀಗಾಗಿ ರಾಜೀನಾಮೆ ಹಿಂಪಡೆಯುವ ಪ್ರಶ್ನೆ ಇಲ್ಲ. ಕಾನೂನು ನಮಗೂ ಗೊತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಹಾಗೆ ಚಟುವಟಿಕೆ ಮಾಡಿದವರು ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದಾರೆ. ಇಷ್ಟು ವರ್ಷ ಸುದೀರ್ಘ ಸಮಯ ಪಕ್ಷದಲ್ಲಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಸಿಎಲ್‌ಪಿ ಸಭೆಯ ತೀರ್ಮಾನ ಉಲ್ಲಂಘಿಸಿಲ್ಲ, ಯಾವುದೇ ವಿಪ್ ಉಲ್ಲಂಘನೆ ಮಾಡಿಲ್ಲ.

      ಸ್ಪೀಕರ್ ಅವರು ಶಾಸಕರನ್ನು ಖುದ್ದು ಭೇಟಿಯಾದ ಬಳಿಕ ರಾಜೀನಾಮೆ ಅಂಗೀಕರಿಸುವ ಬಗ್ಗೆ ತೀರ್ಮಾನಿಸುವುದಾಗಿ ಹೇಳಿರುವುದನ್ನು ಟಿವಿಯಲ್ಲಿ ನೋಡಿದೆ. ಅವರು ಯಾವಾಗ ಬನ್ನಿ ಎನ್ನುತ್ತಾರೆಯೋ ಆಗ ಖುದ್ದಾಗಿ ಹಾಜರಾಗಲು ಸಿದ್ಧ. ಇದುವರೆಗೂ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.

      ಉಚ್ಚಾಟಿಸುವ ಕೆಲಸ ಮಾಡಿಲ್ಲ

      ಉಚ್ಚಾಟಿಸುವ ಕೆಲಸ ಮಾಡಿಲ್ಲ

      ಸಿದ್ದರಾಮಯ್ಯ ದೂರು ಕೊಡುವುದು ಅವರ ಕರ್ತವ್ಯ ತೀರ್ಮಾನ ಮಾಡುವುದು ಸ್ಪೀಕರ್. ಯಾವ ವಿಷಯದ ಮೇಲೆ ತೀರ್ಮಾನ ಮಾಡುವುದು ಸ್ಪೀಕರ್‌ಗೆ ಗೊತ್ತು. ಅವರು ನ್ಯಾಯಾಧೀಶರಂತೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನಿಸುತ್ತಾರೆ. ದೂರು ಕೊಟ್ಟ ತಕ್ಷಣ ಅಂತಿಮವಲ್ಲ. ನಾವು ಉಚ್ಚಾಟಿಸುವಂತಹ ಕೆಲಸ ಮಾಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡುವುದು ಪಕ್ಷ ವಿರೋಧಿ ಅಲ್ಲ. ಉಚ್ಚಾಟನೆ ಮಾಡಲು ಕಾರಣವಿಲ್ಲ ಎಂದು ಬಿಸಿ ಪಾಟೀಲ್ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+