ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಪ್ರತಾಪ್ ಸಿಂಹಗೆ ಸಿದ್ದು ಬುದ್ಧಿಮಾತು
Recommended Video

ಇತ್ತೀಚಿನ ಹಲವು ವಿದ್ಯಮಾನಗಳು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅದರಲ್ಲೂ ಹನುಮ ಜಯಂತಿ ಸಂಬಂಧ ಹುಣಸೂರಿನಲ್ಲಿ ನಡೆದ ಘಟನೆ, ಎರಡು ಪಕ್ಷಗಳ ನಡುವಿನ ಮಾತಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿತ್ತು.
ಶುಕ್ರವಾರ (ಡಿ 8) ಮೈಸೂರಿನ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದರು. ವೇದಿಕೆಗೆ ಬರುವ ಮುನ್ನ ಪ್ರತಾಪ್ ಮತ್ತು ಸಿಎಂ ಎದುರಾದಾಗ, ಪ್ರತಾಪ್ ಬೆನ್ನಿನ ಮೇಲೆ ಕೈಹಾಕಿ ಸಿಎಂ, ಬಾರಯ್ಯಾ.. ಎಂದು ಮಾತಿಗಿಳಿದರು.
ವೇದಿಕೆಗೆ ಹೋಗುವ ಮುನ್ನ ಪ್ರತಾಪ್ ಸಿಂಹ ಅವರನ್ನು ನೋಡುತ್ತಲೇ, 'ಬಾರಯ್ಯಾ.. ಯಾಕೆ ವಿರಾಟ್ ಕೊಹ್ಲಿ ತರ, ಗಡ್ಡ ಮೀಸೆ ಬಿಟ್ಟಿದ್ದೀಯಾ' ಎಂದು ಮುಖ್ಯಮಂತ್ರಿಗಳು ಕಿಚಾಯಿಸಿದರು. ಇದಕ್ಕೆ ಪ್ರತಾಪ್ ಮುಗಳ್ನಗುತ್ತಾ, ಬನ್ನಿ ಸಾರ್ ಎಂದು ವೇದಿಕೆಗೆ ಕರೆದುಕೊಂಡು ಹೋದರು.
ಇದಾದ ನಂತರ ವೇದಿಕೆಯಲ್ಲೂ ಮುಖ್ಯಮಂತ್ರಿಗಳು, ಸಂಸದ ಪ್ರತಾಪ್ ಸಿಂಹಗೆ ಬುದ್ಡಿಮಾತನ್ನು ಹೇಳಿದರು. ಸಿಎಂ ಮಾತನ್ನು ಸಂಸದ ಪ್ರತಾಪ್ ಸಿಂಹ, ವಿನಮ್ರತೆಯಿಂದ ಆಲಿಸುತ್ತಿದ್ದದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿಗಳು ಮಾತನಾಡುವುದಕ್ಕೆ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರತಾಪ್ ಸಿಂಹ, ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಘಟನೆಯನ್ನು ವಿವರಿಸಿದರು. ಪ್ರತಾಪ್ ಸಿಂಹ ಮಾತನ್ನು ಸಿದ್ದರಾಮಯ್ಯ ಸೂಕ್ಷ್ಮವಾಗಿ ಆಲಿಸುತ್ತಿದ್ದರು. ವೇದಿಕೆಯಲ್ಲಿ ಪ್ರತಾಪ್ ಬಗ್ಗೆ ಸಿಎಂ ಹೇಳಿದ್ದೇನು..

ಯಾಕ್ ಸರ್, ನನಗೆ ಯಾವಾಗಲೂ ಬೈತೀರಾ?
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ, ' ಯಾಕ್ ಸರ್, ನನಗೆ ಯಾವಾಗಲೂ ಬೈತೀರಾ? ನೋಡಿ ಸರ್ ಇವರು (ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ), ನನ್ನ ಮೇಲೆ ಕೇಸ್ ಹಾಕಿದ್ದಾರೆ. ಸ್ವಲ್ಪ ಹೇಳಿ ಸರ್ ಇವರಿಗೆ' ಎಂದು ಸಿಎಂಗೆ ವೇದಿಕೆಯಲ್ಲಿ ಮನವಿ ಮಾಡಿದರು.

ಆಕ್ರಮಣಕಾರಿ ವರ್ತನೆ ತೋರಬಾರದು ಕಣಯ್ಯಾ
ಪ್ರತಾಪ್ ಭಾಷಣದ ನಂತರ ಮಾತಿಗಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ' ನೋಡಪ್ಪಾ.. ಪ್ರತಾಪ್ ಅವರಿಗೆ (ಮಂಜುಳಾ) ಕೇಸ್ ವಾಪಸ್ ತೆಗೆದುಕೊಳ್ಳೋಕೆ ಹೇಳುತ್ತೇನೆ. ನೀನು ಇನ್ನೂ ಚಿಕ್ಕವನು, ರಾಜಕೀಯದಲ್ಲಿ ನಿನಗೆ ಒಳ್ಳೆ ಭವಿಷ್ಯವಿದೆ. ಬೆಳೆಯಬೇಕಾಗಿರುವ ಹುಡುಗ ನೀನು, ತಾಳ್ಮೆಯಿಂದ ಇರು. ಆಕ್ರಮಣಕಾರಿ ವರ್ತನೆ ತೋರಬಾರದು ಕಣಯ್ಯಾ' ಎಂದು ಸಭೆಯಲ್ಲಿ ಪ್ರತಾಪ್ ಸಿಂಹ ಬುದ್ಡಿಮಾತನ್ನು ಹೇಳಿದರು. (ಚಿತ್ರ: @mepratap - twitter)

ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ಸೂಚಿಸಿದ ಪ್ರತಾಪ್
ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಮುಖ್ಯಮಂತ್ರಿಗಳ ಭಾಷಣಕ್ಕೆ ಸಂಸದ ಪ್ರತಾಪ್ ಸಿಂಹ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ಸೂಚಿಸಿದರು. ಸುತ್ತೂರು ಮಠದ ಶ್ರೀಗಳು ಆಶೀರ್ವಚನ ನೀಡಿದರು. ವಜ್ರ ಮಹೋತ್ಸವ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾವರ್ಥಕ ಸಂಘದ ಸ್ಥಾಪಕ ಕಾರ್ಯದರ್ಶಿ ಕೆ. ಪುಟ್ಟಸ್ವಾಮಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು. (ಚಿತ್ರ: @mepratap - twitter)

ಸಿಎಂ ಪ್ರೀತಿಯಿಂದ ಮೈದಡವಿ ಕೆಲವು ಸಲಹೆಗಳನ್ನು ನೀಡಿದ್ದಾರೆ
ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರೀತಿಯಿಂದ ಮೈದಡವಿ ನನಗೆ ಕೆಲವು ಸಲಹೆಗಳನ್ನು ನೀಡಿದ್ದಾರೆಂದು ಪ್ರತಿಕ್ರಿಯಿಸಿದರು. ಹುಣಸೂರು ಘಟನೆಯ ವಿಚಾರದಲ್ಲಿ ತಮ್ಮನ್ನು ಬಂಧಿಸಿ ಬಿಡುಗಡೆಗೊಳಿಸಿದ ನಂತರ, ಪ್ರತಾಪ್ ಮುಖ್ಯಮಂತ್ರಿಗಳ ವಿರುದ್ದ ಕಿಡಿಕಾರಿದ್ದರು. (ಚಿತ್ರ: @mepratap - twitter)

ಸಂಜೀವಯ್ಯ ಕಾಲೇಜಿನ, ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ
ಮೈಸೂರಿನಲ್ಲಿ ಇನ್ನೊಂದು ಕಾರ್ಯಕ್ರಮದಲ್ಲಿ ( ಸಂಜೀವಯ್ಯ ಮೆಮೋರಿಯಲ್ ಕಾಲೇಜಿನ, ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ) ಮಾತನಾಡುತ್ತಾ ಸಿಎಂ, ಸರಕಾರೀ ಗುತ್ತಿಗೆಯಲ್ಲೂ ನಮ್ಮ ಸರಕಾರ ಮೀಸಲಾತಿ ತಂದಿದೆ. ನೀವೆಲ್ಲಾ ವಿದ್ಯಾವಂತರು, ಇದನ್ನು ತಿಳಿದುಕೊಳ್ಳಬೇಕು ಮತ್ತು ಇನ್ನೊಬ್ಬರಿಗೆ ತಿಳಿಸಬೇಕೆಂದು, ಸಿದ್ದರಾಮಯ್ಯ ಹೇಳಿದರು.












Click it and Unblock the Notifications