ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್
ಬೆಂಗಳೂರು, ಫೆಬ್ರವರಿ 15 : 'ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ' ಇದು ಕನ್ನಡ ಚಿತ್ರವೊಂದರ ಪ್ರಸಿದ್ಧವಾದ ಹಾಡು. ಈ ಟಿಕ್ ಟಿಕ್ ಶಬ್ದವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗ ಕಾಡುತ್ತಿದೆ. ನಾಡದೊರೆಯ ಕೈಯನ್ನು ಅಲಂಕರಿಸಿದ್ದ ವಜ್ರಖಚಿತ ವಾಚಿನ ಬಗ್ಗೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದ್ದ 'ಹ್ಯೂಬ್ಲೋಟ್' ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಬಗ್ಗೆ ಮೊದಲು ಮಾತನಾಡಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಈಗ ಪ್ರತಿಪಕ್ಷದವರು ಮಾತ್ರವಲ್ಲದೇ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ವಜ್ರ ಖಚಿತ ವಾಚ್ ಅನ್ನು ಹರಾಜು ಹಾಕಿ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತಿದ್ದಾರೆ. [ಸಿದ್ದರಾಮಯ್ಯ ವಾಚ್ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆ?]
ಫೆ.15ರ ಸೋಮವಾರ ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಮೊತ್ತೊಂದು ಬಾಂಬ್ ಸಿಡಿಸಿದ್ದು, 'ಸಿದ್ದರಾಮಯ್ಯ ಅವರ ಬಳಿ ಇನ್ನೂ 7 ರಿಂದ 8 ದುಬಾರಿ ಬೆಲೆಯ ವಾಚ್ಗಳಿವೆ. ಅವುಗಳ ಬಗ್ಗೆ ಶೀಘ್ರದಲ್ಲಿಯೇ ದಾಖಲೆ ಸಮೇತ ಮಾಹಿತಿ ನೀಡುತ್ತೇನೆ ಸ್ವಲ್ಪ ಸಮಯಕೊಡಿ' ಎಂದು ಹೇಳಿದರು. [ಸಿದ್ದರಾಮಯ್ಯ ಧರಿಸುವ ವಾಚ್ ಬೆಲೆ ಇಷ್ಟೊಂದಾ?]
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ವಾಚ್ ಸಮರಕ್ಕೆ ಕೈ ಜೋಡಿಸಿದ್ದು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸುತ್ತಿದ್ದ ವಜ್ರ ಖಚಿತವಾದ ವಾಚ್ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?, ಯಾವ ಕಾರಣಕ್ಕಾಗಿ' ಎಂದು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಕೈಗಡಿಯಾರದ ಟೈಂ ಲೈನ್......

ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಸಿದ್ದರಾಮಯ್ಯ ಅವರ ಕೈಯಲ್ಲಿದ್ದ 'ಹ್ಯೂಬ್ಲೋಟ್' ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಬಗ್ಗೆ ಮೊದಲು ಮಾತನಾಡಿದ್ದ ಕುಮಾರಸ್ವಾಮಿ ಅವರು ಈಗ ಹೊಸ ಬಾಂಬ್ ಸಿಡಿಸಿದ್ದಾರೆ. 'ಮುಖ್ಯಮಂತ್ರಿಗಳ ಬಳಿ ಇನ್ನೂ 7 ರಿಂದ 8 ದುಬಾರಿ ವಾಚ್ಗಳಿವೆ ಅವುಗಳ ಬಗ್ಗೆ ದಾಖಲೆ ಸಮೇತ ವಿವರಣೆ ನೀಡುತ್ತೇನೆ. ಸ್ವಲ್ಪ ಸಮಯ ಕೊಡಿ' ಎಂದು ಸೋಮವಾರ ಮಂಡ್ಯದಲ್ಲಿ ಹೇಳಿದರು.

ಸಚಿವರ ಹೆಸರು ಹೇಳಿದ ಕುಮಾರಸ್ವಾಮಿ
'ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ವಾಚ್ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಕೇರಳದ ಸೋಲಾರ್ ಹಗರಣಕ್ಕಿಂತ ಬಹುದೊಡ್ಡ ಹಗರಣವಿದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ದಾಖಲೆ ನೀಡುತ್ತೇನೆ' ಎಂದು ಕುಮಾರಸ್ವಾಮಿ ಸೋಮವಾರ ಹೇಳಿದರು.

ಆರೋಪ ಮಾಡುವುದು ಬಿಟ್ಟು ದೂರು ಕೊಡಿ
ಕೇಂದ್ರ ಕಾನೂನು ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು ವಾಚ್ ಸಮರಕ್ಕೆ ಕೈ ಜೋಡಿಸಿದ್ದಾರೆ. 'ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು ವಾಚ್, ಕಾರು, ಕನ್ನಡಕಗಳ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಈ ಒಂದು ವಿಷಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗಳಿಗೆ ದೂರು ನೀಡಲಿ. ಅವರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ರಾಜ್ಯದಲ್ಲಿ ಇವುಗಳನ್ನು ಬಿಟ್ಟು ಹಲವಾರು ಸಮಸ್ಯೆಗಳಿವೆ' ಎಂದು ಹೇಳಿದ್ದಾರೆ.

ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ಹೇಳಿಕೆ ನೀಡಿದ್ದು, ' ಸಿದ್ದರಾಮಯ್ಯ ಧರಿಸುತ್ತಿದ್ದ ವಜ್ರ ಖಚಿತವಾದ ವಾಚ್ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?, ಯಾವ ಕಾರಣಕ್ಕಾಗಿ' ಎಂದು ಬಹಿರಂಗಪಡಿಸಬೇಕು' ಎಂದು ಒತ್ತಾಯಿಸಿದ್ದಾರೆ. 'ಸಿದ್ದರಾಮಯ್ಯ ಅವರು ವಾಚ್ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಸಂಸತ್ತಿನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸುತ್ತೇನೆ. ಕೇಂದ್ರ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒತ್ತಾಯ ಮಾಡುವುದಾಗಿ' ಜೋಶಿ ಅವರು ಎಚ್ಚರಿಕೆ ನೀಡಿದ್ದಾರೆ.

ಸ್ವಪಕ್ಷೀಯರ ವಾಗ್ದಾಳಿ
ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವ ವಾಚ್ ವಿವಾದಕ್ಕೆ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಧ್ವನಿಗೂಡಿಸಿದ್ದಾರೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪೂಜಾರಿ ಅವರು, ಸಿದ್ದರಾಮಯ್ಯ ಅವರು ಅವರು ವಾಚ್ ಅನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಸಿಯಾಚಿನ್ ಹುತಾತ್ಮ ಕನ್ನಡಿಗ ಯೋಧರಿಗೆ ಹಂಚುತ್ತೇನೆ ಎಂದು ಹೇಳಿಕೆ ನೀಡಲಿ' ಎಂದು ಒತ್ತಾಯಿಸಿದ್ದಾರೆ.

'ವಾಚ್ ಉಡುಗೊರೆಯಾಗಿ ಬಂದಿದೆ'
ಮುಖ್ಯಮಂತ್ರಿಗಳ ಕೈಯಲ್ಲಿ 'ಹ್ಯೂಬ್ಲೋಟ್' ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಹೇಗೆ ಬಂತು? ಎಂಬುದನ್ನು ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. 'ವಾಚ್ ನನಗೆ ಗಿಫ್ಟ್ ಬಂದಿದ್ದು' ಎಂದು ಅವರು ಹೇಳಿದ್ದಾರೆ. ಆದರೆ. ವಾಚ್ ಯಾರು ಗಿಫ್ಟ್ ಕೊಟ್ಟರು? ಎಂಬದು ಅವರು ಹೇಳಿಲ್ಲ.

ಸಿದ್ದರಾಮಯ್ಯ ಅವರು ಹೇಳುವುದೇನು?
ವಾಚ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕುಮಾರಸ್ವಾಮಿ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಬೇಡ. ಅವರ ಮಗ ಕೋಟ್ಯಂತರ ರೂ.ಮೌಲ್ಯದ ಕಾರು ತೆಗೆದುಕೊಂಡಿಲ್ವಾ?, ಅದು ಕುಮಾರಸ್ವಾಮಿ ಮಗ ದುಡಿದಿರುವ ದುಡ್ಡಾ? ಅವ್ರ ಮಗ ಕೋಟ್ಯಾಂತರ ರೂಪಾಯಿ ಸಿನಿಮಾ ಮಾಡ್ತಿದ್ದಾನೆ. ಈ ಸಿನಿಮಾ ಮಾಡಲು ದುಡ್ಡು ಎಲ್ಲಿಂದ ಬಂತು?' ಎಂದು ಪ್ರಶ್ನಿಸಿದ್ದಾರೆ.

'ನಾನು ಸೆಕೆಂಡ್ ಹ್ಯಾಂಡ್ ಗಿರಾಕಿ ಅಲ್ಲ'
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡಕದ ಬೆಲೆ ಒಂದೂವರೆ ಲಕ್ಷ, ವಾಚ್ ಬೆಲೆ 50 ಲಕ್ಷ' ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ 'ವಾಚು ಮತ್ತು ಕನ್ನಡಕ ಹರಾಜು ಹಾಕುತ್ತೇನೆ. 50 ಸಾವಿರ ಕೊಡಿ ಕನ್ನಡಕ ತಗೋಳ್ಳಿ, 10 ಲಕ್ಷ ಕೊಡಿ ವಾಚು ತೆಗೆದುಕೊಳ್ಳಿ ಎಂದು ಹೇಳಿದ್ದರು'. ಇಕ್ಕೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಅವರು, 'ನಾನು ಸೆಕೆಂಡ್ ಹ್ಯಾಂಡ್ ಗಿರಾಕಿ ಅಲ್ಲ' ಎಂದು ಖಡಕ್ ಉತ್ತರ ನೀಡಿದ್ದರು.
-
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications