ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸುವುದಿಲ್ಲ : ಕುಮಾರಸ್ವಾಮಿ
ಬೆಂಗಳೂರು, ಅಕ್ಟೋಬರ್ 04 : ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 2.50 ರೂ. ಕಡಿತ ಮಾಡಿದೆ. ರಾಜ್ಯ ಸರ್ಕಾರಗಳು ಸಹ 2.50 ರೂ. ಕಡಿಮೆ ಮಾಡಬಹುದು ಎಂದು ಕೇಂದ್ರ ಸಲಹೆ ನೀಡಿತ್ತು.
ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2.50 ರೂ. ಕಡಿಮೆ ಮಾಡುವ ಪಸ್ತಾಪವನ್ನು ತಳ್ಳಿ ಹಾಕಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಕಳೆದ ತಿಂಗಳು ಸರ್ಕಾರ 2 ರೂ. ಕಡಿಮೆ ಮಾಡಿದೆ. ಈಗ ಪುನಃ ಕಡಿಮೆ ಮಾಡಲಾಗುವುದಿಲ್ಲ' ಎಂದರು.
ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ
'ಕೇಂದ್ರ ಸರ್ಕಾರಕ್ಕೆ ಜನರ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ಈಗ ಅನ್ನಿಸಿದೆ. ಆದ್ದರಿಂದ, ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದೆ. ಇದು ಸ್ವಾಗತಾರ್ಹ ನಿರ್ಧಾರ' ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಯಾರು, ಏನು ಹೇಳಿದರು?
'ಕೇಂದ್ರ ಸರ್ಕಾರ ಇಂದು 2.50 ರೂ. ಕಡಿತಗೊಳಿಸಿದೆ. ಆದರೆ, ಒಂದು ತಿಂಗಳ ಹಿಂದೆಯೇ ಸೆಸ್ ಕಡಿತ ಮಾಡಿದ್ದೇವೆ. ಕೇಂದ್ರ ಸರ್ಕಾರ ಈಗ ಎಚ್ಚೆತ್ತುಕೊಂಡು ಬೆಲೆ ಇಳಿಕೆ ಮಾಡಿದೆ. ಆದ್ದರಿಂದ, ನಾವು ಮತ್ತೆ ಸೆಸ್ ಕಡಿಮೆ ಮಾಡುವುದಿಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ
ಕೇಂದ್ರ ಸರ್ಕಾರ ಕಾಪಿ ಹೊಡೆದಿದೆ : 'ಕೇಂದ್ರ ಸರ್ಕಾರ ಕರ್ನಾಟಕವನ್ನು ನೋಡಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದೆ. ಈ ಮೂಲಕ ಕರ್ನಾಟಕ ಸರ್ಕಾರವನ್ನು ನೋಡಿ ಕಾಪಿ ಹೊಡೆದಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ನವದೆಹಲಿಯಲ್ಲಿ ಗುರುವಾರ ಮಾತನಾಡಿದ ಅವರು, 'ಕೇಂದ್ರ ಸರ್ಕಾರ ರಾಜ್ಯಗಳು ದರ ಕಡಿಮೆ ಮಾಡಬಹುದು ಎಂದು ಹೇಳಿದೆ. ಈಗಾಗಲೇ ಕರ್ನಾಟಕದಲ್ಲಿ ದರ ಇಳಿಸಲಾಗಿದೆ. ಈಗ ಕಡಿಮೆ ಮಾಡಲು ಸಾಧ್ಯವಿಲ್ಲ' ಎಂದರು.