ಯಡಿಯೂರಪ್ಪ ಭಾಷಣ; ಅನ್ನ ಕೊಡುವ ರೈತರಿಗೆ ಅನ್ಯಾಯವಾಗಲು ಬಿಡಲ್ಲ
ಬೆಂಗಳೂರು, ಸೆಪ್ಟೆಂಬರ್ 28 : "ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಕರೆದು ಸಭೆ ನಡೆಸಿ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ನಡೆಸಿದ್ದೆ" ಎಂದು ಯಡಿಯೂರಪ್ಪ ಹೇಳಿದರು.
ಸೋಮವಾರ ಮಧ್ಯಾಹ್ನ ರಾಜ್ಯವನ್ನು ಉದ್ದೇಶಿಸಿ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತನಾಡಿದರು. "ನನ್ನಿಂದ ಅನ್ನ ಕೊಡುವ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನೂ ರೈತನ ಮಗ, ರೈತರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ" ಎಂದರು.
"ರೈತ ಸಂಘಟನೆಗಳನ್ನು ವಿಧಾನಸೌಧಕ್ಕೆ ಕರೆದು ನಾನು ಮಾತನಾಡಿದ್ದೇನೆ. ಆದರೆ, ಅವರು ಪ್ರತಿಭಟನೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದರಿಂದ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಯಡಿಯೂರಪ್ಪ ತಿಳಿಸಿದರು.
"ಇಂದು ಚಳವಳಿ ಮಾಡಿ, ಬಳಿಕ ಬನ್ನಿ. ಕುಳಿತು ಮಾತನಾಡೋಣ. ರೈತರಿಗೆ ಕಾಯ್ದೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನವನ್ನು ಮಾಡುತ್ತೇನೆ. ರೈತರನ್ನು ಗೊಂದಲಕ್ಕೆ ತಳ್ಳುವ ಕೆಲಸ ಮಾಡಬೇಡಿ" ಎಂದು ಯಡಿಯೂರಪ್ಪ ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪ ಭಾಷಣದ ಮುಖ್ಯಾಂಶಗಳು
"ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಕೆಲವರು ರೈತರಲ್ಲಿ ಗೊಂದಲವನ್ನು ಮೂಡಿಸುತ್ತಿದ್ದಾರೆ. ಈ ಕಾಯ್ದೆಗಳಿಂದ ಮುಂದಿನ ದಿನಗಳಲ್ಲಿ ರೈತರಿಗೆ ಒಳ್ಳೆಯದು ಆಗಲಿದೆ, ಕಾದು ನೋಡಿ" ಎಂದು ಯಡಿಯೂರಪ್ಪ ಕರೆ ನೀಡಿದರು.

ಕೈಗಾರಿಕೆ ಸ್ಥಾಪಿಸೋಣ
"ಭೂ ಸುಧಾರಣಾ ಕಾಯ್ದೆ ಪ್ರಕಾರ ಸಣ್ಣ ರೈತರ ಭೂಮಿಯನ್ನು ಯಾರೂ ಸಹ ಕಸಿದುಕೊಳ್ಳಲು ಅವಕಾಶವಿಲ್ಲ. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕಿವೆ. ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸೋಣ" ಎಂದು ಯಡಿಯೂರಪ್ಪ ಹೇಳಿದರು.

ಚಳವಳಿ ಮಾಡಿ ಆಮೇಲೆ ಮಾತಾಡೋಣ
"ಯಡಿಯೂರಪ್ಪ ಅವರಿಂದ ರೈತರಿಗೆ ಯಾವತ್ತೂ ಸಹ ಅನ್ಯಾಯವಾಗಲು ಬಿಡೋಲ್ಲ. ಇಂದು ನೀವು ಚಳವಳಿ ಮಾಡಿ, ಬಳಿಕ ಬನ್ನಿ ಕುಳಿತು ಮಾತನಾಡೋಣ, ಅಗತ್ಯ ತಿದ್ದುಪಡಿಗಳನ್ನು ಮಾಡೋಣ" ಎಂದು ಯಡಿಯೂರಪ್ಪ ಹೇಳಿದರು.
Recommended Video

ಕಾಂಗ್ರೆಸ್ ನಾಯಕರ ಪಿತೂರಿ
"ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿರುವ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ಕಾಯ್ದೆಯನ್ನು ತರದಂತೆ ತಡೆಯಲು ಅವರು ಪ್ರಯತ್ನ ಮಾಡಿದರು. ಈಗ ರೈತರಲ್ಲಿ ಅನಗತ್ಯ ಗೊಂದಲವನ್ನು ಮೂಡಿಸುತ್ತಿದ್ದಾರೆ" ಎಂದು ಯಡಿಯೂರಪ್ಪ ಆರೋಪಿಸಿದರು.












Click it and Unblock the Notifications