ತಮಾಷೆಯ ಮಾತಲ್ಲ: ಸೋನಿಯಾ ಗಾಂಧಿಗೆ ಇದು ಅಕ್ಷರಶಃ ಕಬ್ಬಿಣದ ಕಡಲೆ
ಒಂದು ಕಡೆ ದಿನೇದಿನೇ ವರ್ಚಸ್ಸು ಕಳೆದುಕೊಳ್ಳುವತ್ತ ಸಾಗುತ್ತಿರುವ ಪಕ್ಷ, ಇನ್ನೊಂದೆಡೆ ಈ ಸಂದರ್ಭದಲ್ಲಿ ತುರ್ತಾಗಿ ಆಗಬೇಕಾಗಿರುವ ಪಕ್ಷ ಸಂಘಟನೆಯ ನಡುವೆ, ಎದುರಾಗುತ್ತಿರುವ ಅಸೆಂಬ್ಲಿ ಚುನಾವಣೆಗಳು.
ಇವೆಲ್ಲದರ ನಡುವೆ, ಇನ್ನೆರಡು ದಿನಗಳಲ್ಲಿ ಆರಂಭವಾಗುತ್ತಿರುವ ಕರ್ನಾಟಕ ಅಸೆಂಬ್ಲಿ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷದ ನಾಯಕನನ್ನು ಆರಿಸುವುದು. ಆ ಹುದ್ದೆಗಾಗಿ, ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿನ ಬೂದಿಮುಚ್ಚಿದ ಕೆಂಡದಂತೆ ನಡೆಯುತ್ತಿರುವ ಬೆಳವಣಿಗೆಗಳು.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದಲ್ಲಿನ ತಮ್ಮ ಹಿಂದಿನ ಗತವೈಭವವನ್ನು ಮರುಕಳಿಸುವಂತೆ ಮಾಡುವತ್ತ ಸೂಕ್ತ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಆದರೆ, ಅದು ಈ ಹಿಂದಿನ ಲೆಕ್ಕಾಚಾರದಂತೆ ವರ್ಕೌಟ್ ಆಗುತ್ತಿಲ್ಲ.
ಅಂದಿನಿಂದ ಇಂದಿನವರೆಗೆ ಪಕ್ಷ ದಿನದಿಂದ ದಿನಕ್ಕೆ ಹಿನ್ನಡೆ ಅನುಭವಿಸುತ್ತಿರುವುದು ಒಂದೆಡೆ. ಇನ್ನೊಂದೆಡೆ, ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ವಿಫಲವಾಗಿದ್ದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ಸಿಗೆ, ಕರ್ನಾಟಕದ ವಿಚಾರದಲ್ಲಿ ಅಳೆದುತೂಗಿ ನಿರ್ಧಾರ ತೆಗೆದುಕೊಳ್ಲಬೇಕಿದೆ.

ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಸಿದ್ದರಾಮಯ್ಯ
2013ರ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಈಗ ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ಸಿಗೆ ಸೂಕ್ತ ನಾಯಕನನ್ನು ಆರಿಸಬೇಕಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಆದರೆ, ವಿರೋಧ ಪಕ್ಷದ ನಾಯಕನಾರು?

ಸಿದ್ದರಾಮಯ್ಯ ವರ್ಸಸ್ ಎಚ್.ಕೆ.ಪಾಟೀಲ್
ಇಲ್ಲಿ, ಸಿದ್ದರಾಮಯ್ಯನವರಿಗೆ ಮೂಲ ಕಾಂಗ್ರೆಸ್ಸಿಗರ ವಿರೋಧ ಎದುರಾಗುತ್ತಿರುವುದರಿಂದ, ವಿಪಕ್ಷ ನಾಯಕನ ಸ್ಥಾನವನ್ನು ಹಂಚಿಬಿಡಲು ಸೋನಿಯಾ ಗಾಂಧಿಗೆ ಕಷ್ಟವಾಗುತ್ತಿದೆ. ಜೊತೆಗೆ, ರಾಜ್ಯ ಕಾಂಗ್ರೆಸ್ಸಿನ ಹಿರಿಯ ಮುಖಂಡ ಎನ್ನುವುದಕ್ಕಿಂತಲೂ, ಪಕ್ಷದ ನಿಷ್ಟ ಎಚ್.ಕೆ.ಪಾಟೀಲ್ ಕೂಡಾ ಈ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ, ಸೋನಿಯಾಗೆ ಇದು ಸುಲಭದ ತುತ್ತಲ್ಲ.

ನಿರ್ಣಾಯಕ ಸರ್ವೋಚ್ಚ ನ್ಯಾಯಾಲಯದ ತೀರ್ಪು
ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವ ಮುನ್ನವೇ, ಚುನಾವಣಾ ಆಯೋಗ, ಉಪಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಒಂದು ವೇಳೆ, ಕಾಂಗ್ರೆಸ್ ಉತ್ತಮ ಸಾಧನೆಯನ್ನೇನಾದರೂ ಮಾಡಿದರೆ, ಬಿಜೆಪಿ ಸರಕಾರ ಉರುಳುವುದು (ಈಗಿನ ಸಂಖ್ಯಾಬಲದ ಮೇಲೆ ಹೇಳುವುದಾದರೆ) ನಿಶ್ಚಿತ. ಹಾಗಾಗಿ, ಅಳೆದು ತೂಗಿ, ಸೋನಿಯಾ ಗಾಂಧಿ ಗಟ್ಟಿ ನಿರ್ಧಾರಕ್ಕೆ ಬರಬೇಕಾಗಿದೆ.

ಮಾಸ್ ಲೀಡರ್ ಯಾರು, ಸಿದ್ದರಾಮಯ್ಯ. ಅದಾದ ನಂತರ, ಡಿ.ಕೆ.ಶಿ
ರಾಜ್ಯ ಕಾಂಗ್ರೆಸ್ಸಿನ ಮಾಸ್ ಲೀಡರ್ ಯಾರು ಎಂದಾಗ ಮೊದಲು ಬರುವ ಹೆಸರು ಸಿದ್ದರಾಮಯ್ಯ. ಅದಾದ ನಂತರ, ಡಿ.ಕೆ.ಶಿವಕುಮಾರ್. ಆದರೆ, ಡಿಕೆಶಿ ಯಾವಾಗ ಜೈಲಿನಿಂದ ಹೊರಗೆ ಬರುತ್ತಾರೆ ಎನ್ನುವುದು ಖಾತ್ರಿ ಇಲ್ಲದೇ ಇರುವುದರಿಂದ, ಸೋನಿಯಾ ಗಾಂಧಿ ಇಕ್ಕಟ್ಟಿನಲ್ಲಿ ಸಿಲುಕಿರುವುದೇ ಇಲ್ಲಿ. ವೀಕ್ಷಕರಾಗಿ ಬಂದಿದ್ದ ಮಧುಸೂಧನ್ ಮಿಸ್ತ್ರಿಗೆ ರಾಜ್ಯದ ಸದ್ಯದ ಪರಿಸ್ಥಿತಿಯ ಬಗ್ಗೆ ಒಂದು ಮಟ್ಟಿನ ಲೆಕ್ಕಾಚಾರ ಬಂದಿರಬಹುದು.

ತಮಾಷೆಯ ಮಾತಲ್ಲ: ಸೋನಿಯಾ ಗಾಂಧಿ ಅಳೆದುತೂಗಿ ಹೆಜ್ಜೆಯಿಡಬೇಕಿದೆ
ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿರುವುದರಿಂದ, ಉಪಚುನಾವಣೆಯಲ್ಲಿ ಇದರ ಸ್ಪಷ್ಟ ಲಾಭ ಬಿಜೆಪಿಗೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ರಾಜಕೀಯ ಲೆಕ್ಕಾಚಾರ. ಜೊತೆಗೆ, ಸಿದ್ದರಾಮಯ್ಯನವರು ಬಯಸಿದ ಹುದ್ದೆ ಸಿಗದೇ ಇದ್ದಲ್ಲಿ, ಅವರಿಂದ ಪೂರ್ಣ ಪ್ರಮಾಣದ ಬೆಂಬಲ ಸಿಗದೇ ಇರುವ ಸಾಧ್ಯತೆಯಿದೆ. ಜೊತೆಗೆ, ಟ್ರಬಲ್ ಶೂಟರ್ ಡಿಕೆಶಿ ಬೇರೆ ಇಲ್ಲ. ಹಾಗಾಗಿ, ರಾಜ್ಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕನ ಆಯ್ಕೆ, ಸೋನಿಯಾ ಗಾಂಧಿಗೆ ಕಬ್ಬಿಣದ ಕಡಲೆಯೇ ಸರಿ...












Click it and Unblock the Notifications