ಭಲೇ ಸಿದ್ದರಾಮಯ್ಯ: ಲೋಕಾಯುಕ್ತ ವ್ಯಾಪ್ತಿಗೆ ಮುಖ್ಯಮಂತ್ರಿ
ಬೆಂಗಳೂರು, ಫೆ.22: ರಾಜ್ಯದ ಮುಖ್ಯಮಂತ್ರಿ, ಅವರ ಸಂಪುಟದ ಸದಸ್ಯರನ್ನು ನೇರವಾಗಿ ಲೋಕಾಯುಕ್ತ ತನಿಖಾ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಶುಕ್ರವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
ಇದರಿಂದ ಹಲ್ಲಿಲ್ಲದ ಹಾವಿನಂತಾಗಿರುವ ಈಗಿನ ಲೋಕಾಯುಕ್ತ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬಲಾಢ್ಯಗೊಂಡು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದರ ಹಿಂದೆ ಏನು ರಾಜಕೀಯವಿದೆಯೋ ಗೊತ್ತಿಲ್ಲ. ಏಕೆಂದರೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸರಕಾರಗಳು ಏನೇ ನಿರ್ಣಯ/ ಯೋಜನೆಗಳನ್ನು ಜಾರಿಗೆ ತರುತ್ತೇವೆ ಅಂದರೂ ಅದನ್ನು ಚುನಾವಣಾ ಗಿಮಿಕ್ ದೃಷ್ಟಿಯಿಂದ ನೋಡಬೇಕಾಗುತ್ತದೆ. [ಸಂಪುಟ ಸಭೆಯ ಇತರ ನಿರ್ಣಯಗಳು]
ಅದೆಲ್ಲಾ ಏನೇ ಇರಲಿ ''ಭ್ರಷ್ಟರಲ್ಲದ'' ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇಬೇಕು ಎಂಬ ದಿಟ್ಟ ಆಲೋಚನೆಯೊಂದಿಗೆ, ರಾಜಕೀಯವಾಗಿ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿರುವುದು ನಿಜಕ್ಕೂ ಸ್ತುತ್ಯಾರ್ಹ. ಭಲೇ ಸಿಎಂ ಸಿದ್ದು!
ಆದರೆ ಇದನ್ನು ಕಾರ್ಯಗತಗೊಳಿಸುವುದಕ್ಕೆ ಎಲ್ಲ ಪಕ್ಷಗಳೂ ಈಗ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇದು ಸಂಪುಟದ ನಿರ್ಧಾರವಷ್ಟೇ. ರಾಜ್ಯ ಸರಕಾರವು ಸೋಮವಾರ ಈ ವಿಧೇಯಕವನ್ನು (Karnataka Lokayukta Bill 2014) ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲಿದೆ.
ಆಗ ಪಕ್ಷಾತೀತವಾಗಿ ಎಲ್ಲ ಶಾಸಕರೂ ನಿರ್ಮಲ ಮನಸ್ಸಿನಿಂದ ಪ್ರಾಮಾಣಿಕವಾಗಿ ಹೊಸ ವಿಧೇಯಕಕ್ಕೆ ಅಸ್ತು ಅನ್ನುವ ಮೂಲಕ ಭ್ರಷ್ಟಾಚಾರ ಮುಕ್ತ ಕರ್ನಾಟಕ ಅಸ್ತಿತ್ವಕ್ಕೆ ಬರಲು ನಾಂದಿ ಹಾಡಬೇಕಿದೆ. ಹಾಗಾಗಲಿ ಎಂಬುದೇ ರಾಜ್ಯದ 6 ಕೋಟಿ ಜನರ ಒತ್ತಾಸೆ.
ಹೊಸ ಕಾನೂನಿನ ಪ್ರಕಾರ ರಾಜ್ಯದ ಮುಖ್ಯಮಂತ್ರಿ ಅಷ್ಟೇ ಅಲ್ಲ, ಅವರಷ್ಟೇ ಪವರ್ ಫುಲ್ ಹಾಗೂ ಭ್ರಷ್ಟಾಚಾರದ ಹುಟ್ಟಿಗೆ ಕಾರಣವಾಗುವಂತಹ, ಆಯಕಟ್ಟಿನ ಸ್ಥಳವಾದ ಮುಖ್ಯಮಂತ್ರಿ ಕಚೇರಿಯೂ ಲೋಕಾಯುಕ್ತ ವ್ಯಾಪ್ತಿಗೆ ಒಳಪಡಲಿದೆ. ಜತೆಗೆ ಎಲ್ಲ ಸಚಿವರು, ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನೂ ಒಳಗೊಂಡಂತೆ ಎಲ್ಲ ಹಿರಿಯ ಅಧಿಕಾರಿಗಳು ಹೊಸ ಕಾನೂನಿನ ಪ್ರಕಾರ ಲೋಕಾಯುಕ್ತ ಬಲೆಗೆ ಬರಲಿದ್ದಾರೆ.
ಒಂದು ವೇಳೆ, ಭವಿಷ್ಯದಲ್ಲಿ ಯಾವುದೇ ಮುಖ್ಯಮಂತ್ರಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದರೆ ಒಂಬತ್ತು ಸದಸ್ಯರ ಲೋಕಾಯುಕ್ತ ಸಭೆ ಸರಿ, ಆರೋಪದ ಸತ್ವ ನೋಡಿಕೊಂಡು ಅಂದರೆ in-camera preliminary inquiry ನಡೆಸಿ ತನಿಖೆಗೆ ಆದೇಶಿಸಬಹುದು - ಇದು ಕರ್ನಾಟಕದ ಹೊಸ ಲೋಕಾ ನೀತಿ.