ಸಿಇಟಿ ಬರೆದು ಬಂದ ವಿದ್ಯಾರ್ಥಿಗಳು ಏನಂದ್ರು?
ಬೆಂಗಳೂರು, ಮೇ, 04: ನೀಟ್(ನ್ಯಾಶನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್) ಗೊಂದಲದ ನಡುವೆಯೇ ಮಕ್ಕಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಮುಗಿಸಿದ್ದಾರೆ.
ಬೆಂಗಳೂರಿನ 82 ಕೇಂದ್ರಗಳು ಸಹಿತ ರಾಜ್ಯದ ಒಟ್ಟು 391 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆದಿದೆ. ಬುಧವಾರ ಬೆಳಗ್ಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ ಗಣಿತ ಪರೀಕ್ಷೆಗಳು ನಡೆದಿವೆ. ಮೇ 5ರ ಗುರುವಾರ ಭೌತಶಾಸ್ತ್ರ(ಬೆಳಗ್ಗೆ) ಮತ್ತು ರಸಾಯನಶಾಸ್ತ್ರ(ಮಧ್ಯಾಹ್ನ) ಪರೀಕ್ಷೆಗಳು ನಡೆಯಲಿವೆ.[ಐಟಿಐ ಪ್ರವೇಶ ಪತ್ರದಲ್ಲಿ ನಾಯಿ ಫೋಟೋ!]
ರಾಜ್ಯ ಸರ್ಕಾರ ಸಿಇಟಿ ಕೈಗೊಂಡಿದ್ದರೆ ಅತ್ತ ಕೇಂದ್ರ ಸರ್ಕಾರ ವೈದ್ಯಕೀಯ ಪ್ರವೇಶಕ್ಕೆ ಇಡೀ ದೇಶಕ್ಕೆ ಅನ್ವಯವಾಗುವಂತೆ ನೀಟ್ ನಡೆಸಲು ಮುಂದಾಗಿದೆ. ನೀಟ್ ಅಗತ್ಯವಿಲ್ಲ ಎಂದು ಹಲವು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದು ತೀರ್ಪಿಗೆ ಕಾಯುತ್ತಿವೆ.
ಬೆಂಗಳೂರಿನ ವಿಜಯ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ವಿವಿಧ ಅಭಿಪ್ರಾಯ ವ್ಯಕ್ತವಾಯಿತು.

ಒಂದೇ ಪರೀಕ್ಷೆ ಮಾಡಿ
ಕೇಂದ್ರ ಸರ್ಕಾರಕ್ಕೆ ಒಂದು, ರಾಜ್ಯ ಸರ್ಕಾರಕ್ಕೆ ಒಂದು ಪರೀಕ್ಷೆ ಅಗತ್ಯವಿಲ್ಲ. ಒಂದೇ ಪರೀಕ್ಷೆ ಮೂಲಕ ಪ್ರವೇಶ ಅವಕಾಶ ಕಲ್ಪಿಸಿ. ನಡೆಸುವ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಿ-ಜೋತ್ಸ್ನಾ, ಕೇಂದ್ರಿಯ ವಿದ್ಯಾಲಯ

ಪೇಪರ್ ಲೀಕ್ ತಡೆಯಿರಿ
ಮೊದಲು ಪೇಪರ್ ಲೀಕ್ ತಡೆಯಲು ಭದ್ರತಾ ಕ್ರಮ ತೆಗೆದುಕೊಳ್ಳಬೇಕು. ಉಪನ್ಯಾಸಕರಿಗೆ ಉತ್ತಮ ವೇತನ ನೀಡಬೇಕು. ಆಗ ಈ ಬಗೆಯ ಯಾವ ಗೊಂದಲಗಳು ಸೃಷ್ಟಿ ಆಗಲ್ಲ.-ಸರಾಗ್, ಆರ್ ಎನ್ ಎಸ್ ಕಾಲೇಜು

ಉತ್ತಮ ಫಲಿತಾಂಶ ನಿರೀಕ್ಷೆ
ಪರೀಕ್ಷೆ ಶೇ. 70 ಒಕೆ. ಪಿಯುಗೆ ಹೋಲಿಕೆ ಮಾಡಿದರೆ ತುಂಬಾ ಕಷ್ಟವಿತ್ತು. ಪಿಯುಸಿ ಮತ್ತು ಸಿಇಟಿ ಎರಡರಲ್ಲೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ.- ರಾಘವೇಂದ್ರ

ನೀಟ್ ಬಗ್ಗೆ ಗೊತ್ತಿಲ್ಲ
ಕೇಂದ್ರ ಸರ್ಕಾರ ನಡೆಸುತ್ತಿರುವ ನೀಟ್ ಬಗ್ಗೆ ಗೊತ್ತಿಲ್ಲ. ಅದು ವೈದ್ಯಕೀಯ ವ್ಯಾಪ್ತಿಗೆ ಸೇರುತ್ತದೆ. ನಮ್ಮದು ಪಿಸಿಎಂಬಿ ಮಾತ್ರ-ಸಂಗೀತಾ

ಗ್ರೇಸ್ ಮಾರ್ಕ್
ಪಿಯುನ ಗಣಿತ ಬಿಟ್ಟು ಉಳಿದ ಎಲ್ಲ ಪತ್ರಿಕೆಗಳು ಚೆನ್ನಾಗಿ ಆಗಿವೆ. ಪಿಯು ಮಂಡಳಿ ಗ್ರೇಸ್ ಅಂಕಗಳನ್ನು ನೀಡುತ್ತೇನೆ ಎಂದು ಹೇಳಿದೆ. ಅದರಂತೆ ಆದರೆ ಉತ್ತಮ ಫಲಿತಾಂಶ ಸಿಗಲಿದೆ.-ರಾಜೇಶ್ವರಿ












Click it and Unblock the Notifications