ಸಚಿವ ಸಂಪುಟ ಸಭೆ ತೀರ್ಮಾನಗಳು, ನಿಮ್ಮ ಜಿಲ್ಲೆಗೇನು?
ಬೆಂಗಳೂರು, ಆಗಸ್ಟ್ 24 : ಸುತ್ತೂರು, ನಂಜನಗೂಡು, ಯಳಂದರೂರು ಹಾಗೂ ಚಾಮರಾಜನಗರ ತಾಲೂಕಿನ 24 ಗ್ರಾಮಗಳಿಗೆ ಕಬಿನಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ 233 ಕೋಟಿ ರು. ಯೋಜನೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಈ ಕುರಿತು ಮಾಹಿತಿ ನೀಡಿದರು. ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಕೆ ಯೋಜನೆಗೆ 32.22 ಕೋಟಿ ರೂ ವಿನಿಯೋಗಿಸಲು ಸಭೆ ತೀರ್ಮಾನ ತೆಗೆದುಕೊಂಡಿದೆ. [ತುಮಕೂರಲ್ಲಿ ಟೂಲ್ ಪಾರ್ಕ್ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ]

ಗದಗ-ಹೊಂಬಾಳ್ ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳನ್ನು ರಾಜ್ಯ ಮತ್ತು ರೈಲ್ವೇ ಇಲಾಖೆ ಶೇಕಡಾ 50 : 50 ಅನುಪಾತದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಅಬುಧಾಬಿಯಲ್ಲಿರುವ ಬಿ. ಆರ್. ಶೆಟ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಮೂರು ಸರ್ಕಾರಿ ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಿ, ಮೂವತ್ತು ವರ್ಷಗಳ ಗುತ್ತಿಗೆಯ ನಂತರ ಸರ್ಕಾರಕ್ಕೆ ಹಿಂದಿರುಗಿಸುವ ಯೋಜನೆಗೆ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.[ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]
ಈ ಸಂಸ್ಥೆಯು 400 ಕೋಟಿ ರೂ ಬಂಡಾವಳ ಹೂಡಿ, ಯಾವುದೇ ಲಾಭಾಪೇಕ್ಷೆ ಇಲ್ಲದೆ ಕಡುಬಡವರ ಆರೋಗ್ಯಕ್ಕಾಗಿ ಶ್ರಮಿಸಲಿದೆ. ಈ ಆಸ್ಪತ್ರೆಗಳ ಸಂಪೂರ್ಣ ಮೇಲ್ವಿಚಾರಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ವಹಿಸಲಿದ್ದಾರೆ. ಅಲ್ಲದೆ, ಸಂಸ್ಥೆಗೆ ಜವಾಬ್ದಾರಿ ವಹಿಸುವ ಮುನ್ನ, ಕಾನೂನು, ಆರೋಗ್ಯ ಹಾಗೂ ಹಣಕಾಸು ಇಲಾಖೆಗಳು ಒಡಂಬಡಿಕೆಗೆ ಸಹಿ ಹಾಕಲಿವೆ ಎಂದು ಸಚಿವರು ವಿವರಿಸಿದರು.[ಜಲಾಶಯಗಳ ನೀರು ಕುಡಿಯಲು ಮಾತ್ರ, ಕೃಷಿಗಿಲ್ಲ]
ಜವಾಹರಲಾಲ್ ನಗರ ನವೀಕರಣ ಯೊಜನೆ ಹಾಗೂ ಸಣ್ಣ ಮತ್ತು ಮಧ್ಯಮ ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ, 836.98 ಕೋಟಿ ರೂ ಮೊತ್ತದ ಬಾಕಿ ಕಾಮಗಾರಿಗಳನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿಯೇ ಪೂರ್ಣಗೊಳಿಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಟ್ಟೂರು ಗ್ರಾಮದ ಬಳಿ ಕಾಗಿನಾ ನದಿಗೆ ಅಡ್ಡಲಾಗಿ ಜಟ್ಟೂರು ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಮಾಡಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕಾರಿ ಹಾಗೂ ನೌಕರರಿಗೆ ಕೇಂದ್ರ ವೇತನ ಶ್ರೇಣಿ ಕುರಿತಂತೆ ಸಂಪುಟ ಉಪ ಸಮಿತಿ ಗುರುವಾರ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಟಿ. ಬಿ. ಜಯಚಂದ್ರ ತಿಳಿಸಿದ್ದಾರೆ.












Click it and Unblock the Notifications