ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಕೆ ಸೇರಿ ಹಲವು ಸಚಿವ ಸಂಪುಟದ ನಿರ್ಧಾರಗಳು
ಬೆಂಗಳುರು, ಜನವರಿ 03 : ರಾಜ್ಯ ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ತಮ್ಮ ಕುಟುಂಬದವರ ಸ್ಥಿರ, ಚರ ಆಸ್ತಿಗಳ ವಿವರ ಸಲ್ಲಿಸುವುದು ಕಡ್ಡಾಯವಾಗಲಿದೆ.
ನೌಕರರ ಪೋಷಕರು, ಮಕ್ಕಳ ಹೆಸರಿನಲ್ಲಿ ಇರುವ ಎಲ್ಲಾ ಆಸ್ತಿ, ನಗದು ವಿವರಗಳನ್ನು ಲೋಕಾಯುಕ್ತಕ್ಕೆ ನೀಡುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಫೆ. 16ರಂದು ಸಿದ್ದರಾಮಯ್ಯ ಅವರಿಂದ ಕೊನೆಯ ಬಜೆಟ್ ಮಂಡನೆ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಈ ಕುರಿತಂತೆ ಮಾಹಿತಿ ನೀಡಿದ್ದಾರೆ. ಸರ್ಕಾರಿ ನೌಕರರು ಈ ಹಿಂದೆ ತಾನು ಮತ್ತು ತನ್ನ ಪತ್ನಿಯ ಹೆಸರಲ್ಲಿದ ಆಸ್ತಿ ವಿವರಗಳನ್ನು ಮಾತ್ರ ಲೋಕಾಯುಕ್ತಕ್ಕೆ ನೀಡಬೇಕಿತ್ತು. ಆದರೆ, ಇನ್ಮುಂದೆ ಅವರ ಪೋಷಕರು, ಮಕ್ಕಳು ಸೇರಿ ಅವಲಂಬಿತರ ಹೆಸರಲ್ಲಿರುವ ಆಸ್ತಿಗಳ ವಿವರಗಳನ್ನು ಸಹ ನೀಡಬೇಕಾಗುತ್ತದೆ.
ಇನ್ನಿತರೆ ಸಚಿವ ಸಂಪುಟ ಸಭೆಯ ನಿರ್ಧಾರಗಳು:
* ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ.
* ಹೈಕೋರ್ಟ್ ನಲ್ಲಿ ಕೆಲಸ ಮಾಡುವವರಿಗೆ, ನ್ಯಾಯಾಲಯ ನೌಕರರಿಗೆ ಕೇಂದ್ರ ಸರ್ಕಾರದ ವೇತನ ನಿಯಮಾವಳಿ ಅನುಸಾರ ವೇತನ ಪಾವತಿಗೆ ರಾಜ್ಯ ಸರ್ಕಾರ ಸಮ್ಮತಿ.
ಕರ್ನಾಟಕ ಚುನಾವಣೆ ಬಗ್ಗೆ ರಾಹುಲ್ - ಸಿದ್ದು ಫೋನ್ ಸಂಭಾಷಣೆ
* ಅಕ್ರಮ ಮರಳುಗಾರಿಕೆ, ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಅವಕಾಶವಾಗುವಂತೆ ಆಶಾದೀಪ ಯೋಜನೆ ಜಾರಿ.
* ಪಾವಗಡ ಸೇರಿ ಕರ್ನಾಟಕದ ಗಡಿ ಭಾಗದ ತಾಲೂಕು, ಗ್ರಾಮಗಳಿಗೆ ನೀರನ್ನು ಸರಬರಾಜು ಮಾಡಲು 2,352.60 ಕೋಟಿ ಕುಡಿಯುವ ನೀರಿನ ಯೋಜನೆಗೆ ಗ್ರೀನ್ ಸಿಗ್ನಲ್.