ಸಂಪುಟ ಸರ್ಕಸ್: ಇಡೀ ದಿನ ರಾಜ್ಯ ಕಾಂಗ್ರೆಸ್ನಲ್ಲಿ ಏನೇನಾಯ್ತು?
ಬೆಂಗಳೂರು, ಅಕ್ಟೋಬರ್. 24: ಮತ್ತೆ ಶುರುವಾಗಿದೆ ರಾಜ್ಯ ಸಂಪುಟ ಪುನಾರಚನೆ ಮತ್ತು ವಿಸ್ತರಣೆ ಸರ್ಕಸ್, ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ದೆಹಲಿಗೆ ಹೊರಟ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ. ದೆಹಲಿಗೆ ಹೋಗುತ್ತೇನೆ ಆದರೆ ಯಾವಾಗ ಗೊತ್ತಿಲ್ಲ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ. ಎಸ್ ಎಂ ಕೃಷ್ಣ ಅವರನ್ನು ಭೇಟಿಮಾಡಿದ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು...ಇದು ಶನಿವಾರ ರಾಜ್ಯದ ಕಾಂಗ್ರೆಸ್ ಪಾಳಯದಲ್ಲಿ ನಡೆದ ಘಟನಾವಳಿಗಳ ಒಟ್ಟು ಚಿತ್ರಣ.
ಬೆಳಗ್ಗೆ ಸದಾಶಿವನಗರದ ಎಸ್ ಎಂ ಕೃಷ್ಣ ಮನೆಗೆ ಭೇಟಿ ನೀಡಿದ ಡಾ. ಜಿ ಪರಮೇಶ್ವರ, ಇಂದು ನಾನು ದೆಹಲಿಗೆ ತೆರಳಲಿದ್ದೇನೆ. ನಾಳೆ ಸಿಎಂ ಸಿದ್ದರಾಮಯ್ಯ ಅವರು ಸಹ ಆಗಮಿಸಲಿದ್ದಾರೆ ಎಂದು ಹೇಳಿದರು.[ರಾಜ್ಯ ರಾಜಕಾರಣಕ್ಕೆ ಬರಲ್ಲ ಅಂದ ರಮ್ಯಾ ಕಣ್ಣೀರಿಗೆ ಕಾರಣವೇನು?]
ಡಾ.ಜಿ.ಪರಮೇಶ್ವರ್ ಭೇಟಿ ಬಳಿಕ ಮಾಡಿ ಬಂದ ಬಳಿಕ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಕೃಷ್ಣ ಮನೆಗೆ ಭೇಟಿ ನೀಡಿದರು. ಸಚಿವ ಸ್ಥಾನ ಆಕಾಂಕ್ಷಿಗಳು ಕೇಂದ್ರದ ನಾಯಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಶನಿವಾರ ನಡೆದ ಇಡೀ ದಿನದ ಘಟನಾವಳಿ ಮತ್ತು ನಾಯಕರ ಮಾತನ್ನು ಕೇಳಿಕೊಂಡು ಬರೋಣ...
ಡಿಸಿಎಂ ಹುದ್ದೆ ಹೈ ಕಮಾಂಡ್ ಗೆ ಬಿಟ್ಟಿದ್ದು
ಡಿಸಿಎಂ ಹುದ್ದೆ ನೀಡುವುದು ಹೈಕಮಾಂಡ್ಗೆ ಬಿಟ್ಟಿದ್ದು, ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಹಬ್ಬದ ಶುಭಾಶಯ ಹೇಳಲು ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದೇನೆ ಎಂದು ಪರಮೇಶ್ವರ್ ಹೇಳಿದರು.
ಸಿದ್ಧರಾಮಯ್ಯ ದೆಹಲಿಗೆ ಬರಲಿದ್ದಾರೆ
ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 25ಮ ರಂದು ದೆಹಲಿಗೆ ಭೇಟಿ ಬರಲಿದ್ದಾರೆ. ನಾನು ಇಂದು ಸಂಜೆಯೇ ತೆರಳುತ್ತಿದ್ದೇನೆ ಎಂದು ಪರಮೇಶ್ವರ ಹೇಳಿದರು.
ಪರಮೇಶ್ವರ ಯಾರ ಜತೆ ಮಾತನಾಡಲಿದ್ದಾರೆ
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ಸಿಂಗ್, ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹಾಗೂ ರಾಜ್ಯದಿಂದ ಎಐಸಿಸಿಯನ್ನು ಪ್ರತಿನಿಧಿಸುವ ಹಿರಿಯ ನಾಯಕರ ಜತೆ ಸಂಪುಟ ವಿಸ್ತರಣೆಯ ಬಗ್ಗೆ ಪರಮೇಶ್ವರ ಚರ್ಚೆ ನಡೆಸಲಿದ್ದಾರೆ.
ಹೋಗುವಾಗ ಹೇಳುತ್ತೇನೆ
ಡಿಸಿಎಂ ಹುದ್ದೆ ವಿಚಾರ ನನಗೆ ಗೊತ್ತಿಲ್ಲ. ದಲಿತ ಸಿಎಂ ಮುಗಿದ ಸಂಗತಿ. ನಾನು ದೆಹಲಿಗೆ ತೆರಳುವಾಗ ನಿಮಗೆ ಹೇಳಿಯೇ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.
ಗಿಜಿಗುಟ್ಟಿದ ಕೃಷ್ಣ ನಿವಾಸ
ಇತ್ತ ಕೆಪಿಸಿಸಿ ಅಧ್ಯಕ್ಷರು ದೆಹಲಿ ದಾರಿ ಹಿಡಿಯುತ್ತಿದ್ದಂತೆ ಎಸ್ ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡುವ ಶಾಸಕರ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಭೇಟಿ ನೀಡಿ ಮಾತುಕತೆ ನಡೆಸಿದರು.
ಗೊಂದಲ ಬಗೆಹರಿದಿಲ್ಲ
ಶನಿವಾರ ಪರಮೇಶ್ವರ ನೀಡಿದ ಹೇಳಿಕೆಗೂ ಸಿಎಂ ಸಿದ್ದರಾಮಯ್ಯ ಮನೀಡಿದ ಹೇಳಿಕೆಗಳನ್ನು ಅವಲೋಕಿಸಿದರೆ ಸಂಪುಟ ವಿಸ್ತರಣೆ ಸಂಬಮಧದ ಗೊಂದಲ ಬಗೆ ಹರಿದಂತೆ ಕಂಡು ಬಂದಿಲ್ಲ.
ಸಚಿವರ ಪ್ರಗತಿ ಪರಿಶೀಲನೆ
ಕಾಂಗ್ರೆಸ್ ಕೇಂದ್ರ ನಾಯಕರು ಸಚಿವರ ಪ್ರಗತಿ ಪರಿಶಿಲನೆಗೂ ಮುಂದಾಗಿದ್ದು ಕಳಪೆ ಪ್ರದರ್ಶನ ನೀಡುತ್ತಿರುವವರನ್ನು ಕೈ ಬಿಡಲು ಸೂಚಿಸಬಹುದು. ಹಾಗಾದಲ್ಲಿ ಕೆಲ ರೆಬಲ್ ಮತ್ತು ಹಿರಿಯ ಸಚಿವರು ಸ್ಥಾನ ಕಳೆದುಕೊಳ್ಳಬಹುದು.