ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಜುಲೈ 5ಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದೆಹಲಿಗೆ, ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಆರಂಭವಾಗಿದೆ. ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆ ನಡೆಸಿ, ಸಚಿವ ಸ್ಥಾನ ವಂಚಿತರಿಗೆ ಸಮಾಧಾನ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಅವರು ತಮ್ಮ ವಿದೇಶಿ ಪ್ರವಾಸ ಮುಗಿಸಿ ರಾಜಧಾನಿಗೆ ಮರಳುತ್ತಿರುವ ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಕಸರತ್ತು ಗರಿಗೆದರಿದೆ. ಈ ಹಿನ್ನೆಲೆ ನೂತನ ಸಚಿವರ ಪಟ್ಟಿಯೊಂದಿಗೆ ಜುಲೈ 5ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿ ತಲುಪಲಿದ್ದು, ಜುಲೈ 6 ಮತ್ತು 7ರಂದು ಎಐಸಿಸಿ ವರಿಷ್ಠರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಜುಲೈ 10ರಿಂದ 12ರ ಒಳಗಾಗಿ ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಹಿರಿಯ ಹಾಗೂ ಪ್ರಭಾವಿ ಶಾಸಕರು ತೀವ್ರ ಪೈಪೋಟಿ ನಡೆಸುತ್ತಿದ್ದು, ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಸಂಭಾವ್ಯರ ವಿವರ ಹೀಗಿದೆ.

ಯಾರಿಗೆಲ್ಲ ಸಿಗಲಿದೆ ಸಚಿವ ಸ್ಥಾನ?
ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗ: ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮಣ ಸವದಿ ಅವರ ಹೆಸರಿದ್ದರೆ, ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಪ್ರಸಾದ್ ಅಬ್ಬಯ್ಯ ಅವರು ಪ್ರಮುಖರಾಗಿದ್ದಾರೆ. ವಿಜಯಪುರ ಜಿಲ್ಲೆಯ ಜವಾಬ್ದಾರಿಗೆ ಯಶವಂತರಾಯ ಪಾಟೀಲ ಅಥವಾ ಅಪ್ಪಾಜಿ ನಾಡಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಮುಸ್ಲಿಂ ಪ್ರಾತಿನಿಧ್ಯಕ್ಕಾಗಿ ಸಲೀಂ ಅಹ್ಮದ್ ಅವರ ಹೆಸರನ್ನು ಪರಿಗಣಿಸಲಾಗಿದೆ.
ಮಧ್ಯ ಕರ್ನಾಟಕ ಭಾಗ: ಬಳ್ಳಾರಿ ಜಿಲ್ಲೆಯಲ್ಲಿ ನಾಗೇಂದ್ರ ಹಾಗೂ ಕೊಪ್ಪಳದಲ್ಲಿ ಬಸವರಾಜ ರಾಯರೆಡ್ಡಿ ಅವರ ಪ್ರಾತಿನಿಧ್ಯವಿದೆ. ಹಾವೇರಿ ಜಿಲ್ಲೆಯಲ್ಲಿ ರುದ್ರಪ್ಪ ಲಮಾಣಿ ಹಾಗೂ ಶಿವಮೊಗ್ಗದಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಹೆಸರುಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಘುಮೂರ್ತಿ ಅವರಿದ್ದರೆ, ದಾವಣಗೆರೆ ಜಿಲ್ಲೆಗೆ ಎಸ್.ಎಸ್. ಮಲ್ಲಿಕಾರ್ಜುನ್ ಅಥವಾ ಡಿ.ಜಿ. ಶಾಂತನಗೌಡ ಅವರ ಹೆಸರುಗಳು ಲಭ್ಯವಿವೆ.
ಹಳೆಯ ಮೈಸೂರು ಮತ್ತು ಬಯಲುಸೀಮೆ ಭಾಗ: ತುಮಕೂರು ಜಿಲ್ಲೆಯಲ್ಲಿ ಶ್ರೀನಿವಾಸ್ (ವಾಸು) ಹಾಗೂ ಹಾಸನದಲ್ಲಿ ಶಿವಲಿಂಗೇಗೌಡ ಅವರ ಹೆಸರುಗಳಿವೆ. ಮಂಡ್ಯ ಜಿಲ್ಲೆಯ ಜವಾಬ್ದಾರಿಗೆ ಚಲುವರಾಯಸ್ವಾಮಿ ಮತ್ತು ನರೇಂದ್ರಸ್ವಾಮಿ ಅವರಿದ್ದರೆ, ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿ ಅವರ ಹೆಸರಿದೆ. ಕೋಲಾರ ಜಿಲ್ಲೆಗೆ ಶರತ್ ಬಚ್ಚೇಗೌಡ ಅಥವಾ ಸುಬ್ಬಾರೆಡ್ಡಿ ಅವರ ಹೆಸರುಗಳು ಪರಿಗಣನೆಯಲ್ಲಿವೆ.
ಬೆಂಗಳೂರು ಮತ್ತು ಕರಾವಳಿ-ಮಲೆನಾಡು ಭಾಗ: ಬೆಂಗಳೂರು ನಗರದ ಪ್ರಾತಿನಿಧ್ಯಕ್ಕಾಗಿ ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಅಥವಾ ಲಿಂಗಾಯತ ಕೋಟಾದಡಿಯಲ್ಲಿ ಬಿ.ಕೆ.ಹರಿಪ್ರಸಾದ್/ಕೃಷ್ಣಪ್ಪ ಅವರ ಹೆಸರುಗಳು ಚರ್ಚೆಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯಿಂದ ತರೀಕೆರೆ ಶ್ರೀನಿವಾಸ್ ಅವರ ಹೆಸರಿದ್ದರೆ, ಕರಾವಳಿ ತೀರದ ಉತ್ತರ ಕನ್ನಡ ಜಿಲ್ಲೆಗೆ ಮಂಕಾಳ ವೈದ್ಯ ಅಥವಾ ಆರ್.ವಿ. ದೇಶಪಾಂಡೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ಶೀಘ್ರದಲ್ಲೇ ನಿಗಮ-ಮಂಡಳಿಗಳ ಹಳೇ ನೇಮಕಾತಿ ರದ್ದು?
ಸಂಪುಟ ವಿಸ್ತರಣೆಯ ಬೆನ್ನಲ್ಲೇ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆಯುವ ಮುನ್ಸೂಚನೆ ಸಿಕ್ಕಿದೆ. ದೆಹಲಿ ಪ್ರವಾಸ ಮುಗಿಸಿ ನಾಯಕರು ವಾಪಸಾದ ತಕ್ಷಣವೇ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಲಾಗಿದ್ದ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಶಾಸಕರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಜವಾಬ್ದಾರಿ ನೀಡಿ ಅಸಮಾಧಾನ ತಣಿಸಲು ಹೈಕಮಾಂಡ್ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.













Click it and Unblock the Notifications