ಕರ್ನಾಟಕ ಸಂಪುಟ: ಸಿಎಂ ಬಸವರಾಜ ಬೊಮ್ಮಾಯಿಗೆ 8 ಖಾತೆಗಳ ಜವಾಬ್ದಾರಿ ಒತ್ತಡ!
ಬೆಂಗಳೂರು, ಸೆಪ್ಟೆಂಬರ್, 09: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸಂಕಟಕ್ಕೆ ಮುಕ್ತಿ ಯಾವಾಗ ಅನ್ನೋ ಪ್ರಶ್ನೆ ಮೂಡಿದೆ. ಬಸವರಾಜ ಬೊಮ್ಮಾಯಿ ಹೆಗಲ ಮೇಲೆ ಮತ್ತಷ್ಟು ಹೊರೆ ಹೆಚ್ಚಾಗುತ್ತಿದೆ. ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಖಾತೆ ಸೇರಿದಂತೆ ಉಮೇಶ್ ಕತ್ತಿ ಸಾವಿನಿಂದ ಅರಣ್ಯ ಖಾತೆಯ ಜವಾಬ್ದಾರಿಯು ಸಿಎಂ ಲಭಿಸಿದೆ.
ಬಸವರಾಜ ಬೊಮ್ಮಾಯಿ ಪ್ರಸ್ತುತ 8 ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಹಣಕಾಸು, ಬೆಂಗಳೂರು ನಗರಾಭಿವೃದ್ದಿ, ಗುಪ್ತಚರ, ಸಂಪುಟ ವ್ಯವಹಾರ, ಡಿಪಿಎಆರ್, ಖಾತೆಗಳು ಮೊದಲಿನಿಂದಲೂ ಸಿಎಂ ಬಳಿಯಲ್ಲೇ ಉಳಿದುಕೊಂಡಿದೆ. ಇನ್ನು ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರುವ ಪಂಚಾಯತ್ ರಾಜ್ ಮತ್ತು ಗ್ರಾಮೀಣಭಿವೃದ್ದಿ ಖಾತೆ ಸಿಎಂ ಬಳಿಯೇ ಉಳಿದುಕೊಂಡಿದೆ. ಸಂಪುಟದ ಹಿರಿಯ ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನದಿಂದಾಗಿ ಅರಣ್ಯ ಮತ್ತು ಆಹಾರ, ನಾಗರೀಕ ಪೂರೈಕೆ ಖಾತೆಗಳು ಸಿಎಂ ತೆಕ್ಕೆಗೆ ಜಾರಿದೆ. ಇದರಿಂದ ಸಿಎಂಗೆ ಹೆಚ್ಚಿನ ಹೊರೆಯಾಗುತ್ತಿದೆ.
ಸಿಎಂ ಸಚಿವ ಸಂಪುಟ ವಿಸ್ತರಣೆಯ ಸಕಲ ರೀತಿಯಲ್ಲೂ ಪ್ರಯತ್ನವನ್ನು ಮಾಡಿದರು ಸಹ ಹೈಕಮಾಂಡ್ ಸಂಪುಟ ವಿಸ್ತರಣೆಗಾಗಲಿ ಅಥವಾ ಸಂಪುಟ ಪುನರಾಚನೆಗಾಗಲಿ ಅಸ್ತು ಎನ್ನಲಿಲ್ಲ. ಇದೀಗ ಸಿಎಂ ಬೊಮ್ಮಾಯಿ ಸಂಪುಟದಲ್ಲಿ 6 ಸಚಿವ ಸ್ಥಾನಗಳು ಖಾಲಿಯಾಗಿದ್ದು ಸಂಪುಟ ವಿಸ್ತರಣೆ ಯಾವಾಗ ಅನ್ನೋ ಪ್ರಶ್ನೆ ಮೂಡಿದೆ.

ಮಂಡೆಬಿಸಿಯಾಗಿರುವ ಬೆಂಗಳೂರು ಉಸ್ತುವಾರಿ
ಸಿಎಂ ಬಸವರಾಜ ಬೊಮ್ಮಾಯಿ ಬಳಿಯಲ್ಲಿ ಹಣಕಾಸು, ಬೆಂಗಳೂರು ನಗರಾಭಿವೃದ್ದಿ, ಗುಪ್ತಚರ, ಸಂಪುಟ ವ್ಯವಹಾರ, ಡಿಪಿಎಆರ್, ಖಾತೆಗಳು ಮೊದಲಿನಿಂದಲೂ ಸಿಎಂ ಬಳಿಯಲ್ಲೇ ಉಳಿದುಕೊಂಡಿದೆ. ಇನ್ನು ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರುವ ಪಂಚಾಯತ್ ರಾಜ್ ಮತ್ತು ಗ್ರಾಮೀಣಭಿವೃದ್ದಿ ಖಾತೆ ಸಿಎಂ ಬಳಿಯೇ ಉಳಿದುಕೊಂಡಿದೆ. ಉಮೇಶ್ ಕತ್ತಿ ಅಕಾಲಿಕ ನಿಧನದಿಂದಾಗಿ ಅರಣ್ಯ ಮತ್ತು ಆಹಾರ, ನಾಗರೀಕ ಪೂರೈಕೆ ಖಾತೆಗಳು ಸಿಎಂ ತೆಕ್ಕೆಗೆ ಜಾರಿದೆ. ಇದರಿಂದ ಸಿಎಂಗೆ ಹೆಚ್ಚಿನ ಹೊರೆಯಾಗುತ್ತಿದೆ. ಇದರ ಜೊತೆಗೆ ಬೆಂಗಳೂರಿನಂತ ಬೃಹತ್ ಸಿಟಿಯ ಉಸ್ತುವಾರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಬಿಬಿಎಂಪಿ ಚುನಾವಣೆ ಮತ್ತು ಮಳೆಯ ಅವಾಂತರಗಳು ಸಿಎಂ ಮಂಡೆ ಬಿಸಿಯಾಗುವಂತೆ ಮಾಡುತ್ತಿವೆ.

ಪಂಚ ಸಚಿವರಿಗೆ ಡಬಲ್ ಖಾತೆ ಲಾಟರಿ
*ಸಿಎನ್ ಅಶ್ವಥ್ ನಾರಾಯಣ್- ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ಇಲಾಖೆಯ ಜವಾಬ್ದಾರಿಗಳನ್ನು ಹೊತ್ತಿದ್ದಾರೆ.
* ಶ್ರೀರಾಮುಲು- ಸಾರಿಗೆಯ ಜೊತೆಗೆ ಎಸ್ಟಿ ಅಭಿವೃದ್ದಿಯ ಜವಾಬ್ದಾರಿ ಹೊತ್ತಿದ್ದಾರೆ.
* ಡಾ. ಕೆ. ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆ ವೈದ್ಯಕೀಯ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.
* ಕೋಟಾ ಶ್ರೀನಿವಾಸ್ ಪೂಜಾರಿ- ಸಮಾಜ ಕಲ್ಯಾಣ ಇಲಾಖೆ , ಒಬಿಸಿ ಕಲ್ಯಾಣದ ಜವಾಬ್ದಾರಿ ಹೊತ್ತಿದ್ದಾರೆ.
* ಹಾಲಪ್ಪ ಆಚಾರ್- ಗಣಿಗಾರಿಕೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಸಂಪುಟದಲ್ಲಿರುವ ಈ ಐವರು ಸಚಿವರಿಗೆ ಒಂದು ಖಾತೆಯ ಜೊತೆಗೆ ಮತ್ತೊಂದು ಖಾತೆಯನ್ನು ನೀಡುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ. ಇದೊಂದು ರೀತಿಯಲ್ಲಿ ಸಚಿವರಿಗೆ ಲಾಟರಿ ಹೊಡೆದಂತೆ ಆಗಿದೆ.

ಆರೇಳು ತಿಂಗಳಲ್ಲೇ ಎದುರಾಗುತ್ತೆ ಚುನಾವಣೆ
ರಾಜ್ಯ ಸಚಿವ ಸಂಪುಟಕ್ಕೆ ಶುಕ್ರದೆಶೆ ಸಿಗುವಂತೆ ಕಾಣುತ್ತಿಲ್ಲ. ಸಿಎಂ ಬೊಮ್ಮಾಯಿ ದೆಹಲಿಯಾತ್ರೆಯನ್ನು ಕೈಗೊಂಡು ಸಾಕಾಗಿದ್ದಾರೆ. ನಾ ಕೊಡೆ ನೀ ಬಿಡೆ ಎನ್ನುವಂತೆ ಹೈಕಮಾಂಡ್ ಸಂಪುಟ ವಿಸ್ತರಣೆಗೂ ಒಪ್ಪಿಲ್ಲ. ಪುನರ್ ರಚನೆಗೂ ಒಪ್ಪುತ್ತಿಲ್ಲ. ಇವೆಲ್ಲದರ ನಡುವೆ ಆರೇಳು ತಿಂಗಳಲ್ಲೇ ರಾಜ್ಯ ವಿಧಾನ ಸಭೆಯ ಚುನಾವಣೆಯು ಎದುರಾಗಲಿದೆ. ಇದಕ್ಕಾಗಿ ಬಿಜೆಪಿ ಹೈಕಮಾಂಡ್ ನಡೆಯು ನಿಗೂಢವಾಗಿದೆ.

ಯಾರ ನೇತೃತ್ವದಲ್ಲಿ ನಡೆಯುತ್ತೆ ಚುನಾವಣೆ?
ರಾಜ್ಯ ಸಚಿವ ಸಂಪುಟ ವಿಸ್ತರಣೆಯೋ ಪುನರ್ ರಚನೆಯೋ ಹೈಕಮಾಂಡ್ ಮಾತ್ರವೇ ತೀರ್ಮಾನಿಸಲಿದೆ. ಇದಕ್ಕಾಗಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸಿಎ ಮೇಲಿನ ಖಾತೆಗಳ ಭಾರವನ್ನು ಇಳಿಸುವ ಸಲುವಾಗಿ ಜಾತಿ, ಪ್ರಾದೇಶಿಕ ಸ್ಥಾನಮಾನಕ್ಕೆ ಅನುಗುಣವಾಗಿ ಚುನಾವಣಾ ಸಂಪುಟಕ್ಕೆ ಅಸ್ತು ಎನ್ನಲಾಗುತ್ತದೆಯೇ ಎಂಬುದು ತಿಳಿಯಬೇಕಿದೆ. ಇನ್ನು ಬಿಜೆಪಿ ಹೈಕಮಾಂಡ್ ಶಾಕ್ಗಳನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದು ಈಗಾಗಲೇ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎಂದು ಘೋಷಿಸಿದ್ದರು. ಕೊನೆಯ ಕ್ಷಣದಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದೆ ಅನ್ನೋದು ತಿಳಿಯಬೇಕಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸಂಪೂರ್ಣವಾಗಿ ಚುನಾವಣೆಗೆ ಸದ್ಭಳಕೆ ಮಾಡುವ ಉದ್ದೇಶದಿಂದಲೇ ಸಂಸದೀಯ ಮಂಡಳಿ ಸದಸ್ಯ ಸ್ಥಾನವನ್ನು ಬಿಎಸ್ವೈಗೆ ಬಿಜೆಪಿ ಹೈಕಮಾಂಡ್ ನೀಡಿದೆ. ಸದ್ಯಕ್ಕಂತು ಬೊಮ್ಮಾಯಿಗೆ ಸರ್ಕಾರದ ಹೆಚ್ಚಿನ ಭಾರವನ್ನಂತು ಹೊತ್ತು ಬಸವಳಿಯುತ್ತಿದ್ದಾರೆ.












Click it and Unblock the Notifications