5,912 ಕೋಟಿಯ ಮೇಕೆದಾಟು ಯೋಜನೆಗೆ ಸಿಕ್ಕಿತು ಗ್ರೀನ್ ಸಿಗ್ನಲ್
ಬಹುನಿರೀಕ್ಷಿತ 5,912 ಕೋಟಿ ರೂಪಾಯಿ ವೆಚ್ಚದ ಮೇಕೆದಾಟು ಯೋಜನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬೆಂಗಳೂರು, ಫೆಬ್ರವರಿ 16: ಬಹುನಿರೀಕ್ಷಿತ 5,912 ಕೋಟಿ ರೂಪಾಯಿ ವೆಚ್ಚದ ಮೇಕೆದಾಟು ಯೋಜನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಮಗ್ರ ಯೋಜನಾ ವರದಿಗೆ ಅನುಮೋದನೆ ಸಿಕ್ಕಿದೆ.
ಮೇಕೆದಾಟು ಬಹುಪಯೋಗಿ (ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ) ಯೋಜನೆ ಅನ್ವಯ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕಾವೇರಿ ನದಿಗೆ ಬೃಹತ್ಅಣೆಕಟ್ಟು ಕಟ್ಟಲಾಗುತ್ತದೆ.[ತಮಿಳರು ವಿರೋಧಿಸಿದರೂ ಮೇಕೆದಾಟು ಯೋಜನೆ ಜಾರಿ: ಸಿಎಂ]
ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಟಿ.ಬಿ ಜಯಚಂದ್ರ ಹೆಚ್ಚುವರಿ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಈ ಅಣೆಕಟ್ಟು ಕಟ್ಟಲಾಗುತ್ತಿದೆ. ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ತಮಿಳುನಾಡಿಗೆ 192 ಟಿಎಂಸಿ ನೀರು ಬಿಟ್ಟ ನಂತರ ಉಳಿಯುವ ನೀರನ್ನು ಸಂಗ್ರಹಿಸಿಡಲು ಈ ಅಣೆಕಟ್ಟು ಕಟ್ಟಲಿದ್ದೇವೆ ಎಂದು ತಿಳಿಸಿದರು.
ಸದ್ಯ ಸಂಪುಟ ಸಭೆ ಒಪ್ಪಿಗೆ ನೀಡಿರುವುದರಿಂದ ಯೋಜನೆಯನ್ನು ರಾಜ್ಯ ಸರಕಾರ ಕೇಂದ್ರ ಜಲ ಆಯೋಗ, ಕಾವೇರಿ ಮೇಲುಸ್ತುವಾರಿ ಸಮಿತಿ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮುಂದಿಡಲಿದೆ. ಈ ಎಲ್ಲಾ ಸಂಸ್ಥೆಗಳಿಂದ ಒಪ್ಪಿಗೆ ಸಿಕ್ಕ ನಂತರ ಸರಕಾರ ಯೋಜನೆ ಜಾರಿಗೆ ತರಲಿದೆ.[ಮೇಕೆದಾಟು ಕುಡಿಯುವ ನೀರಿನ ಯೋಜನೆ ಡಿಪಿಆರ್ ಸಿದ್ಧ]
ಈಗಾಗಲೇ ಕರ್ನಾಟಕದ ಈ ಯೋಜನೆಗೆ ತಮಿಳುನಾಡು ತಗಾದೆ ತೆಗೆದಿದೆ. ಕರ್ನಾಟಕ ಮೇಕೆದಾಟು ಯೋಜನೆ ಮೂಲಕ ಕಾವೇರಿ ನ್ಯಾಧೀಕರಣದ ಅಂತಿಮ ಆದೇಶ ಉಲ್ಲಂಘಿಸಲು ಹೊರಟಿದೆ ಎಂಬುದು ತಮಿಳುನಾಡು ವಾದವಾಗಿದೆ.
66 ಟಿಎಂಸಿ ನೀರು ಹಿಡಿದಿಡಬಹುದಾದ ಅಣೆಕಟ್ಟನ್ನು ಕರ್ನಾಟಕ ಸರಕಾರ ಮೇಕೆದಾಟುವಿನಲ್ಲಿ ಕಟ್ಟಲು ಹೊರಟಿದೆ. ಇದರಿಂದ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಬಹುದು ಎಂದು ಕರ್ನಾಟಕ ಯೋಜನೆ ಹಾಕಿಕೊಂಡಿದೆ.