ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರದ ಆಸ್ತಿ: ರಾಜ್ಯ ಸಂಪುಟ ನಿರ್ಧಾರ
ಬೆಂಗಳೂರು, ಜುಲೈ 02: ವಿಧಾನಸೌಧದಲ್ಲಿ ಗುರುವಾರ (ಜುಲೈ 2) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎರಡು ಅತ್ಯಂತ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಖಾಸಗಿ ಲೇಔಟ್ಗಳ ರಸ್ತೆಗಳನ್ನು ಸರ್ಕಾರಿ ಸ್ವತ್ತನ್ನಾಗಿ ಮಾಡುವುದು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಭೂ ಸ್ಥಿತಿಕರಣ (ಲ್ಯಾಂಡ್ ರೆಗ್ಯುಲರೈಸೇಶನ್) ಪ್ರಕ್ರಿಯೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇನ್ಮುಂದೆ ಯಾವುದೇ ಖಾಸಗಿ ಲೇಔಟ್ಗಳಲ್ಲಿ ರಸ್ತೆಗಳಿದ್ದರೆ, ಅವುಗಳನ್ನು ನೇರವಾಗಿ ಸರ್ಕಾರಿ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಲ್ಡರ್ಗಳು ಲೇಔಟ್ ಮಾಡಿ ಕೇವಲ ಒಂದು ನಿವೇಶನ ಮಾರಾಟ ಮಾಡಿದ್ದರೂ ಸಹ, ಆ ಇಡೀ ಲೇಔಟ್ನ ರಸ್ತೆಗಳು ಸ್ವಯಂಚಾಲಿತವಾಗಿ ಸರ್ಕಾರದ ಆಸ್ತಿಯಾಗಲಿವೆ. ಯಾವುದೇ ಕಾರಣಕ್ಕೂ ಈ ರಸ್ತೆಗಳು ಖಾಸಗಿ ವ್ಯಕ್ತಿಗಳು ಅಥವಾ ಡೆವಲಪರ್ಗಳ ವಶದಲ್ಲಿ ಇರಲು ಬಿಡುವುದಿಲ್ಲ. ಇದರಿಂದ ಸಾರ್ವಜನಿಕ ರಸ್ತೆಗಳ ಬಳಕೆಗೆ ಎದುರಾಗುತ್ತಿದ್ದ ಕಾನೂನು ತೊಡಕುಗಳು ನಿವಾರಣೆ ಆಗಲಿವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತರ
ಪಾದಚಾರಿಗಳ ಮುಕ್ತ ಸಂಚಾರ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಸರ್ಕಾರ, ಫುಟ್ಪಾತ್ ವಿಚಾರದಲ್ಲಿ ಅತ್ಯಂತ ಕಠಿಣ ನಿಲುವನ್ನು ತೆಗೆದುಕೊಳ್ಳಲಾಗಿದೆ. ಫುಟ್ಪಾತ್ಗಳ ಮೇಲೆ ಯಾವುದೇ ರೀತಿಯ ವ್ಯಾಪಾರ ವಹಿವಾಟಿಗೆ ಇನ್ಮುಂದೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಈ ವಿಷಯದ ಕುರಿತು ಧ್ವನಿ ಎತ್ತಿದ್ದನ್ನು ನೆನಪಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್, ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ಬದಿ ವ್ಯಾಪಾರಿಗಳನ್ನು ಪಾದಚಾರಿ ರಸ್ತೆಗಳಿಂದ ಪಕ್ಕದ ನಿಗದಿಪಡಿಸಿದ ಬೇರೆ ಜಾಗಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದಿಂದ ಸಬ್ಸಿಡಿ ಮತ್ತು ಸೂಕ್ತ ವ್ಯವಸ್ಥೆಯ ಭರವಸೆ
ವ್ಯಾಪಾರಿಗಳಿಗೆ ತೊಂದರೆ ಆಗದಂತೆ ರಸ್ತೆಯ ಪಕ್ಕದಲ್ಲಿ ಒಂದು ನಿರ್ದಿಷ್ಟ ಜಾಗವನ್ನು ಗುರುತಿಸಿ ಅಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ವೆಂಡಿಂಗ್ ಮೆಷಿನ್ಗಳ ಮೂಲಕ ವ್ಯಾಪಾರ ಮಾಡಲು ಸಾರ್ವಜನಿಕರಿಂದ ಈಗಾಗಲೇ 35 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಬ್ಸಿಡಿ ನೆರವನ್ನು ಕೂಡ ಒದಗಿಸಲಾಗುವುದು. ತಾವು ಉಪ ಮುಖ್ಯಮಂತ್ರಿಯಾಗಿದ್ದ ವೇಳೆಯೂ ಈ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆದಿತ್ತು ಎಂದು ನೆನೆದ ಸಿಎಂ, ಇದು ಇಡೀ ಸಚಿವ ಸಂಪುಟವು ಸಾಮೂಹಿಕವಾಗಿ ಜನಪರ ಉದ್ದೇಶದಿಂದ ತೆಗೆದುಕೊಂಡಿರುವ ದೃಢ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ವಾರ್ಷಿಕ 3,806 ಕೋಟಿ ಹೊರೆ
'ಕೇಂದ್ರ ಸರ್ಕಾರದ ಗ್ರಾಮ್ ಜಿ ಯೋಜನೆ ವಿರುದ್ಧ ನಾವು ಹೋರಾಟ ಮಾಡಿದ್ದು, ನ್ಯಾಯಾಲಯದ ಮೆಟ್ಟಿಲು ಏರಿದ್ದೇವೆ. ಯೋಜನೆಯಲ್ಲಿ ಶೇಕಡ 40ರಷ್ಟು ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ನಾವು ಷರತ್ತಿನ ಆಧಾರದ ಮೇಲೆ ಯೋಜನೆ ಜಾರಿ ಮಾಡಬೇಕಾಗಿದೆ. ನಮ್ಮ ರಾಜ್ಯಕ್ಕೆ ಇದರಿಂದ ವಾರ್ಷಿಕ 3,806 ಕೋಟಿ ವೆಚ್ಚ ಬೀಳಲಿದೆ. ಎಲ್ಲೆಲ್ಲಿ ಈ ಕೆಲಸ ಕೈಗೊಳ್ಳಬೇಕು ಎಂದು ಇವತ್ತಿನಿಂದ ಅಧಿಸೂಚನೆ ಹೊರಡಿಸಲಾಗುತ್ತಿದೆ,' ಎಂದು ಮಾಹಿತಿ ನೀಡಿದರು.
ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಲು ಅವಕಾಶ
'ಒಸಿ ಸಿಸಿ ಸಂಬಂಧಿಸಿದಂತೆ ವಿನಾಯಿತಿ ನೀಡಬೇಕು ಎಂದು ರಾಜ್ಯದ ಎಲ್ಲಾ ಕಡೆಗಳಿಂದ ಮನವಿ ಬಂದಿತ್ತು. ಇದಕ್ಕೆ ನಾವು ಅವಕಾಶ ಕಲ್ಪಿಸಿದ್ದೆವು. ಆದರೆ ಕೆಲವರು ನಾವು ಕಟ್ಟಡ ನಿರ್ಮಾಣ ಮಾಡಿದ್ದು, ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯಾರೆಲ್ಲಾ ವಸತಿ ಕಟ್ಟಡ ನಿರ್ಮಾಣ ಮಾಡಿದ್ದಾರೆಯೋ ಅವರ ದಾಖಲೆ, ಫೋಟೋಗಳೊಂದಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಹಾಕಲು ಆಗಸ್ಟ್ 15ರವರೆಗೆ ಅವಕಾಶ ಕಲ್ಪಿಸಿದ್ದೇವೆ,' ಎಂದು ತಿಳಿಸಿದರು. ವಾಣಿಜ್ಯ ಕಟ್ಟಡಗಳಿಗೂ ವಿನಾಯಿತಿ ನೀಡಿ ಎಂಬ ಬೇಡಿಕೆ ಬಗ್ಗೆ ಕೇಳಿದಾಗ, 'ಬೇಕಾದಷ್ಟು ಬೇಡಿಕೆಗಳು ಇರುತ್ತವೆ. ಆದರೆ ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಲ್ಲವೇ,' ಎಂದು ತಿಳಿಸಿದರು.












Click it and Unblock the Notifications