ಫೆಬ್ರವರಿ 8ಕ್ಕೆ ರಾಜ್ಯ ಬಜೆಟ್: ನಿರೀಕ್ಷೆಗಳೇನೇನು?
ಬೆಂಗಳೂರು, ಜನವರಿ 26: ಜಂಟಿ ಅಧಿವೇಶನವು ಫೆಬ್ರವರಿ 6 ಕ್ಕೆ ವಿಧಾನಸೌಧದಲ್ಲಿ ಪ್ರಾರಂಭವಾಗಲಿದೆ. ಹಣಕಾಸು ಮಂತ್ರಿಗಳೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫೆಬ್ರವರಿ 8 ಕ್ಕೆ ಬಜೆಟ್ ಘೋಷಿಸಲಿದ್ದಾರೆ.
ಈಗಾಗಲೇ ಬಜೆಟ್ ಪೂರ್ವಭಾವಿ ಸಭೆಗಳು ಮುಗಿದಿದ್ದು, ಹಲವು ಸಂಘ ಸಂಸ್ಥೆಗಳು, ಸಮುದಾಯಗಳ ಮುಖಂಡರು, ಕಾರ್ಮಿಕ ಮುಖಂಡರು ಹಲವರು ಸಿಎಂ ಜೊತೆ ಸಭೆ ನಡೆಸಿ ಮನವಿಗಳನ್ನು ಸಲ್ಲಿಸಿದ್ದಾರೆ.
ಫೆಬ್ರವರಿ 8ಕ್ಕೆ ಬಜೆಟ್ ಮಂಡನೆ ಆಗಲಿದ್ದು, ಲೋಕಸಭೆ ಚುನಾವಣೆಗಳು ಸಮೀಪ ಇರುವುದರಿಂದ ಜನಪ್ರಿಯ ಬಜೆಟ್ ಅನ್ನೇ ಸಿಎಂ ಅವರು ಮಂಡಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ರೈತರಿಗೆ ಬಜೆಟ್ನಲ್ಲಿ ಸಾಲಮನ್ನಾದ ಕಂತು ಬಿಡುಗಡೆ, ಬರಗಾಲ ಸಮೀಪಿಸಿರುವ ಕಾರಣ ನೀರಾವರಿ ಮತ್ತು ಕುಡಿಯುವ ನೀರಿಗೆ ವಿಶೇಷ ಅನುದಾನ ಮೀಸಲು, ಮೆಟ್ರೋಗೆ ವಿಶೇಷ ಅನುದಾನಗಳನ್ನು ನಿರೀಕ್ಷಿಸಲಾಗಿದೆ.

ಕಳೆದ ಬಜೆಟ್ಬಗ್ಗೆ ಅಪಸ್ವರ ಎದ್ದಿತ್ತು
ಕುಮಾರಸ್ವಾಮಿ ಮಂಡಿಸಿದ್ದ ಕಳೆದ ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಇಲ್ಲ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಗಳು, ಟೀಕೆಗಳು ಆಗಿದ್ದವು ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಉತ್ತರ ಕರ್ನಾಟಕಕ್ಕೆ ಕಾಲೇಜುಗಳು?
ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ನೀಡುವ ಸಾಧ್ಯತೆ ಇದೆ. ಕೆಲವು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಘೋಷಣೆಯೂ ಬಜೆಟ್ನಲ್ಲೇ ಆಗುವ ಸಂಭವ ಇದೆ.

ಮೀನುಗಾರರಿಗೆ ವಿಶೇಷ ಅನುದಾನ?
ಕಾರ್ಮಿಕ ವಲಯ ಹಾಗೂ ಮಧ್ಯಮ ವರ್ಗಕ್ಕೂ ಹಲವು ಯೋಜನೆಗಳನ್ನು ನಿರೀಕ್ಷಿಸಲಾಗಿದ್ದು, ಕಂದಾಯ ಇಲಾಖೆಯ ಕೆಲವಾರು ತೆರಿಗೆ ಮತ್ತು ಶುಲ್ಕಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ಮೀನುಗಾರರಿಗೆ ಸರಳ ಸಾಲ ಸೌಲಭ್ಯ ಜೊತೆಗೆ ಅನುದಾನಗಳನ್ನು ನೀಡುವ ಸಾಧ್ಯತೆ ಇದೆ.

ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್
ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಅವರು ಬಜೆಟ್ ಮಂಡಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮುನ್ನಾ ಮೋದಿ ಸರ್ಕಾರದ ಅವಧಿಯ ಕೊನೆಯ ಬಜೆಟ್ ಇದಾಗಿರುವ ಕಾರಣ ಜನಪ್ರಿಯ ಘೋಷಣೆಗಳನ್ನು ಬಜೆಟ್ನಲ್ಲಿ ನಿರೀಕ್ಷಿಸಬಹುದಾಗಿದೆ.












Click it and Unblock the Notifications