Government Employee: ಕರ್ನಾಟಕ ಬಜೆಟ್ 2025, ಸರ್ಕಾರಿ ನೌಕರರ ನಿರೀಕ್ಷೆಗಳೇನು?
ಬೆಂಗಳೂರು, ಫೆಬ್ರವರಿ 08: ಕರ್ನಾಟಕದ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಈಗಾಗಲೇ ಜಾರಿಗೊಳಿಸಿದೆ. ಆದರೆ ಇನ್ನೂ ಕೆಲವು ಬೇಡಿಕೆಗಳು ಬಾಕಿ ಇದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ ರಾಜ್ಯ ಸರ್ಕಾರಿ ನೌಕರರ ನಿರೀಕ್ಷೆಗಳೇನು?.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಮುಗಿದಿದ್ದು ರಾಜ್ಯಾಧ್ಯಕ್ಷರಾಗಿ ಸಿ. ಎಸ್. ಷಡಾಕ್ಷರಿ ಮರು ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಸಿ. ಎಸ್. ಷಡಾಕ್ಷರಿ ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಿ, ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು, ಬಳಿಕ ಮತನಾಡಿದರು.

ಸಿ. ಎಸ್. ಷಡಾಕ್ಷರಿ ಮಾತನಾಡಿ, "ಸಂಘಟನೆ ನೀಡಿದ ಜವಾಬ್ದಾರಿ, ಸಂಘಟನೆಯ ಮಹತ್ವ, ಸಂಘದ ಬೈಲಾ ನಿಯಮಗಳ ಪಾಲನೆ, ಸಂಘಟನೆಗೆ ತಾವು ನೀಡುವ ಸಮಯ ಮತ್ತು ಸಂಘಟನಾ ಬದ್ಧತೆಯನ್ನು 2025ಕ್ಕೆ ಎನ್ಪಿಎಸ್ನಿಂದ ಒಪಿಎಸ್, 2026ಕ್ಕೆ ಕೇಂದ್ರ ಮಾದರಿ ವೇತನ ಜಾರಿಗಾಗಿ ಹೋರಾಟ, ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲರೂ ಸಂಕಲ್ಪ ಮಾಡಿ ಒಗ್ಗಟ್ಟಾಗಿ ಶ್ರಮಿಸಲು" ಕರೆ ನೀಡಿದರು.
ಬಜೆಟ್ನಲ್ಲಿ ಘೋಷಣೆ ನಿರೀಕ್ಷೆ: "ನಮ್ಮ ಪ್ರಣಾಳಿಕೆಯಂತೆ ಕರ್ತವ್ಯ ನಿರತ ಸರ್ಕಾರಿ ನೌಕರ ಅಕಾಲಿಕ ಮರಣ ಹೊಂದಿದಲ್ಲಿ ಕೋಟಿ ರೂ. ಗಳ ಪರಿಹಾರ ಮೊತ್ತವನ್ನು ನೀಡುವ ಸಂಬಂಧದ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿರುತ್ತದೆ" ಎಂದು ತಿಳಿಸಿದರು.
ಸಿ. ಎಸ್. ಷಡಾಕ್ಷರಿ ಅವರು, "ನೌಕರರ ಹಬ್ಬದ ಮುಂಗಡ 25 ರಿಂದ 50 ಸಾವಿರಕ್ಕೆ ಹೆಚ್ಚಿಸುವ ಕಾರ್ಯ ಈ ಬಜೆಟ್ನಲ್ಲಿ ಅನುಮೋದನೆ ಆಗುತ್ತದೆ" ಎಂದು ಹೇಳಿದರು.
"ಫೆಬ್ರುವರಿ 20ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರು ಮತ್ತು ಪದಾಧಿಕಾರಿಗಳ ಸಮಾಗಮ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮದಲ್ಲಿ ಎನ್ಪಿಎಸ್ನಿಂದ ಒಪಿಎಸ್, ಆರೋಗ್ಯ ಸಂಜೀವಿನಿ ಯೋಜನೆಯ ಜಾರಿ ಸಂಬಂಧ ದಾವಣಗೆರೆ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯಿಸಿದಂತೆ ನಿರ್ಣಯ ಕೈಗೊಳ್ಳಲಾಗುವುದು" ಎಂದು ಸಿ. ಎಸ್. ಷಡಾಕ್ಷರಿ ಮಾಹಿತಿ ನೀಡಿದರು.
ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ಸರ್ಕಾರಿ ನೌಕರರ ಬೇಡಿಕೆಯಾದ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಮರು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ಈ ಬೇಡಿಕೆಯನ್ನು ಇನ್ನೂ ಸಹ ಈಡೇರಿಸಿಲ್ಲ. ರಾಜ್ಯ ಎನ್ಪಿಎಸ್ ನೌಕರರ ಸಂಘ ಶುಕ್ರವಾರ ಈ ಕುರಿತು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಸಹ ನಡೆಸಿತ್ತು.
ರಾಜ್ಯ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ದಿನಾಂಕ 16/8/2024ರಲ್ಲಿ ಈ ಸಮಿತಿಯನ್ನು ಪುನರ್ ರಚಿಸಿ ಆದೇಶಿಸಲಾಗಿದೆ. ಸಮಿತಿ ಇನ್ನೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿಲ್ಲ. ಅಲ್ಲದೇ ಸಮಿತಿ ವರದಿಯನ್ನು ಸಲ್ಲಿಕೆ ಮಾಡಲು ಸರ್ಕಾರ ಸಹ ಕಾಲಮಿತಿಯನ್ನು ನಿಗದಿ ಮಾಡಿಲ್ಲ.












Click it and Unblock the Notifications