ಬಿಜೆಪಿ ಶಾಸಕ ಯತ್ನಾಳ್ ಬಣಕ್ಕೆ ಹಾಲು ಕುಡಿದಷ್ಟು ಸಂತೋಷ, ಯಾಕೆ?
ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಬಿ.ವೈ.ವಿಜಯೇಂದ್ರ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಜೆ.ಪಿ.ನಡ್ಡಾ ಅವರು ಬೆಂಗಳೂರಿಗೆ ಬಂದು ಚರ್ಚೆ ನಡೆಸಿರುವುದು, ಮತ್ತೊಂದೆಡೆ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪುಷ್ಟಿ ನೀಡುತ್ತಿದೆ. ಇದು ಬಿಜೆಪಿಯ ಯತ್ನಾಳ್ ಬಣಕ್ಕೆ ಸಂತಸದ ವಿಚಾರ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ರಾಜ್ಯ ಬಿಜೆಪಿಯ ಗದ್ದುಗೆ ಗುದ್ದಾಟ ಹೊಸ ವರ್ಷದಲ್ಲೂ ಮುಂದುವರೆದಿದ್ದು, ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಹಾತೊರೆಯುತ್ತಿದ್ದರೆ, ಇನ್ನೊಂದು ಕಡೆ ಯತ್ನಾಳ್ ಬಣವನ್ನೇ ಮಟ್ಟ ಹಾಕಲು ವಿಜಯೇಂದ್ರ ಬಣ ಸಂಚು ಹೂಡುತ್ತಿದೆ ಎಂದು ಟೀಕಿಸಿದೆ.

ಇದೆಲ್ಲದರ ಮಧ್ಯೆ ಬಿಜೆಪಿಯ ಕೇಂದ್ರದ ವರಿಷ್ಠರು ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಸಲು ಮುಂದಾಗುತ್ತಿರುವುದು ಯತ್ನಾಳ್ ಬಣಕ್ಕೆ ಹಾಲು ಕುಡಿದಷ್ಟು ಸಂತೋಷ ತಂದಿದೆ. ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿರುವ ವಿಜಯೇಂದ್ರ ಸ್ಥಿತಿಯು ಬಿಜೆಪಿಯಲ್ಲಿ ಒರೆಸಿ ಎಸೆಯುವ ಟಿಶ್ಯೂ ಪೇಪರ್ ನಂತಾಗುವುದಂತೂ ಖಚಿತ ಎಂದು ವ್ಯಂಗ್ಯ ಮಾಡಿದೆ.
ಬಿಜೆಪಿಯಲ್ಲಿನ ಬಣ ಬಡಿದಾಟವು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ.ವಿಜಯೇಂದ್ರ ಬಗ್ಗೆಯೂ ಹಲವರು ಅಸಮಾಧಾನ ಹೊರಹಾಕುತ್ತಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆ ಕೂಡ ನಡೆದಿದೆ.

ಮೊನ್ನೆ ರಾಜ್ಯಕ್ಕೆ ಬಂದಿದ್ದ ನಡ್ಡಾ ಅವರೊಂದಿಗೆ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ಮುಖ್ಯವಾಗಿ ಸದ್ಯ ಬಿಜೆಪಿಯಲ್ಲಿ ತಲೆದೂರಿರುವ ಬಣ ಬಡಿದಾಟದ ಬಗ್ಗೆ ಕೂಡ ಚರ್ಚೆ ನಡೆದಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಬಗ್ಗೆಯೂ ವಿಜಯೇಂದ್ರ ಅವರು ಈಗಾಗಲೇ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದು, ನಡ್ಡಾ ಕೂಡ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಬಿಜೆಪಿ ರಾಜ್ಯ ಘಟಕಕ್ಕೆ ಅಧ್ಯಕ್ಷರ ಬದಲಾವಣೆ ಸಂಬಂಧ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದು ಯತ್ನಾಳ್ ಬಣಕ್ಕೆ ಸಿಹಿಸುದ್ದಿ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತೆ. ಹೊಸ ವರ್ಷದ ಬಳಿಕ ಇದು ನಡೆಯಲಿದೆ ಎಂದು ಯತ್ನಾಳ್ ಬಣದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದರು.

ಇತ್ತೀಚೆಗೆ ಮಾತನಾಡಿದ್ದ ಯತ್ನಾಳ್, ಹೈಕಮಾಂಡ್ ನಾಯಕರು ಕರೆದರೆ ಮಾತ್ರವೇ ನಾವು ದೆಹಲಿಗೆ ಹೋಗುತ್ತೇವೆ. ಆದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆದರೆ ಮಾತುಕತೆ ಸಾಧ್ಯವಿಲ್ಲ. ನಮ್ಮದು ನಿಷ್ಠರ ಬಣ, ವಿಜಯೇಂದ್ರ ಪಕ್ಷದ ಅಧ್ಯಕ್ಷರಷ್ಟೇ ಅಷ್ಟೇ ಎಂದು ಹೇಳಿದ್ದಾರೆ.
ನನಗೆ ಬಿ.ವೈ.ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆಯೇ ಇಲ್ಲ. ಅವರಾಗಿಯೇ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡಲ್ಲ. ವಿಜಯೇಂದ್ರ ಜೊತೆ ಗುರುತಿಸಿಕೊಂಡವರೂ ಹೋರಾಟಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಯತ್ನಾಳ್ ಆಹ್ವಾನ ನೀಡಿದ್ದರು.












Click it and Unblock the Notifications