ದ್ವೇಷ ರಾಜಕಾರಣದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ
ಬೆಂಗಳೂರು, ಮೇ 04: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಇದರ ವಿರುದ್ಧವಾಗಿ ರಾಜ್ಯದಾದ್ಯಂತ ಮೇ 6ರಂದು ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಜೆಪಿ, ರಾಜ್ಯದ ಮೈತ್ರಿ ಸರ್ಕಾರವು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುವ ಬದಲಿಗೆ ವಿರೋಧ ಪಕ್ಷವನ್ನು ಅಧಿಕಾರ ಬಳಸಿ ಹತ್ತಿಕ್ಕುವ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಹೇಳಿದೆ.
ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಸುಳಿವು ದೊರೆತ ಮೇಲಂತೂ ಮೈತ್ರಿ ಸರ್ಕಾರವು ಸ್ಥಿಮಿತ ಕಳೆದುಕೊಂಡಿದ್ದು ವಿರೋಧ ಪಕ್ಷದ ವಿರುದ್ದ ಹಾಗೂ ಮಾಧ್ಯಮಗಳನ್ನೂ ಹತ್ತಿಕ್ಕುವ ಕಾರ್ಯದಲ್ಲಿ ನಿರತವಾಗಿದೆ ಎಂದು ಬಿಜೆಪಿ ಹೇಳಿದೆ.
ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿರುವ ಬಿಜೆಪಿ, ಧರ್ಮ ವಿಭಜನೆಗೆ ಮುಂದಾಗಿದ್ದ ಎಂ.ಬಿ.ಪಾಟೀಲ್ ಅವರು ದ್ವೇಷ ರಾಜಕಾರಣದ ಮುಂಚೂಣಿಯಲ್ಲಿದ್ದಾರೆ ಎಂದಿದೆ. ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನದಲ್ಲಿ ಎಂ.ಬಿ.ಪಾಟೀಲ್ ನಿರತರಾಗಿದ್ದಾರೆ ಎಂದು ಹೇಳಿದೆ.
ಪ್ರಚಾರದ ಕೊನೇ ದಿನ ರಾಹುಲ್ ನಾಡಿನಲ್ಲಿ ಅಮಿತ್ ಶಾ ಬೃಹತ್ ರೋಡ್ ಶೋ
ಮೈತ್ರಿ ಸರ್ಕಾರದ ಈ ದ್ವೇಷ ರಾಜಕಾರಣವನ್ನು ವಿರೋಧಿಸಿ ಬಿಜಪಿಯು ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೇ 6 ರಂದು ಪ್ರತಿಭಟನೆ ನಡೆಸಲಿದ್ದು, ರಾಜ್ಯಪಾಲರಿಗೆ ದೂರು ನೀಡಲಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.