‘ಕೈ’ ನಾಯಕರ ಅಸ್ತ್ರ ಪ್ರಯೋಗಕ್ಕೆ ‘ಕಮಲ’ ನಾಯಕರು ವಿಲವಿಲ
ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಆರೋಪಗಳಿಗೆ ತಕ್ಕಂತೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಜನ ಬಿಜೆಪಿ ಬಗ್ಗೆ ತಾತ್ಸಾರ ತಾಳುವಂತೆ ಮಾಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ತಾವು ಗೆದ್ದೇ ಬಿಟ್ಟಿದ್ದೇವೆ ಎನ್ನುವಂತೆ ಬೀಗುತ್ತಿರುವುದು ಕಾಣಿಸು
ಬೆಂಗಳೂರು, ಮಾಚ್ 8: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆಡಳಿತರೂಢ ಬಿಜೆಪಿಯಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ನಾಯಕರು ಮಾಡಿಕೊಳುತ್ತಿರುವ ಎಡವಟ್ಟುಗಳು, ಮುಖಂಡರಲ್ಲಿನ ಭಿನ್ನಾಭಿಪ್ರಾಯಗಳು ಎಲ್ಲೋ ಒಂದು ಕಡೆ ಕಾಂಗ್ರೆಸ್ ಮುಂದೆ ಮಂಡಿಯೂರುವಂತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಆರೋಪಗಳಿಗೆ ತಕ್ಕಂತೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಜನ ಬಿಜೆಪಿ ಬಗ್ಗೆ ತಾತ್ಸಾರ ತಾಳುವಂತೆ ಮಾಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ತಾವು ಗೆದ್ದೇ ಬಿಟ್ಟಿದ್ದೇವೆ ಎನ್ನುವಂತೆ ಬೀಗುತ್ತಿರುವುದು ಕಾಣಿಸುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್ ಮುಖಂಡರು ಮುಂದೆ ನಮ್ಮದೇ ಸರ್ಕಾರ ಬರಲಿದ್ದು, ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಗಳನ್ನು ನೀಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನು ಆಡಳಿರೂಢ ಬಿಜೆಪಿ ಜನಪ್ರಿಯ ಬಜೆಟ್ ಮಂಡಿಸಿದರೂ ಅದು ಜನರಿಗೆ ತಲುಪಿದಂತೆ ಕಾಣುತ್ತಿಲ್ಲ. ಬದಲಿಗೆ ಜನ ಕಾಂಗ್ರೆಸ್ ನೀಡಿರುವ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ 2000 ರೂ ಸಹಾಯಧನದ ಭರವಸೆಗಳನ್ನೇ ಮೆಚ್ಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ಬಿಜೆಪಿಗಿಂತಲೂ ಚೆನ್ನಾಗಿ ಸೋಷಿಯಲ್ ಮೀಡಿಯಾವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.

ಕಾಂಗ್ರೆಸ್ಗೆ ವರದಾನವಾದ ಲೋಕಯುಕ್ತ ದಾಳಿ
ಕಳೆದ ಬಾರಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾಡಿದ್ದ 20% ಕಮಿಷನ್ ಆರೋಪಕ್ಕೆ ಈ ಬಾರಿ ಇನ್ನು ಇಪ್ಪತ್ತು ಸೇರಿಸಿ 40% ಕಮಿಷನ್ ಆರೋಪವನ್ನು ಕಾಂಗ್ರೆಸ್ ಮಾಡಿರುವುದು ಮಾತ್ರವಲ್ಲದೆ ಅದನ್ನು ಜನಸಾಮಾನ್ಯನ ತನಕ ತೆಗೆದುಕೊಂಡು ಹೋಗುವಲ್ಲಿ ನಾಯಕರು ಯಶಸ್ವಿಯಾದರು. ಈ ವಿಚಾರದಲ್ಲಿ ಕಾಂಗ್ರೆಸ್ ಯಾವುದೇ ದೂರನ್ನು ದಾಖಲಿಸಿಲ್ಲ. ಬದಲಿಗೆ ಸರ್ಕಾರದ ವಿರುದ್ಧ ಜನ ಸಾಮಾನ್ಯರಲ್ಲಿ ಅನುಮಾನ ಮೂಡುವಂತೆ ಮಾಡುವಲ್ಲಿ ಮಾಡಿದೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಆರೋಪಕ್ಕೆ ಪೂರಕವಾಗುವಂತೆ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲೋಕಾಯುಕ್ತ ದಾಳಿ ವೇಳೆ ನಗದು ಸಹಿತ ಸಿಕ್ಕಿ ಬಿದ್ದಿರುವುದು. ಮತ್ತು ಈ ಸಂಬಂಧ ನಡೆಯುತ್ತಿರುವ ವಿದ್ಯಮಾನಗಳು ಕಾಂಗ್ರೆಸ್ಗೆ ವರವಾಗಿ ಪರಿಣಮಿಸಿದರೆ, ಬಿಜೆಪಿ ನಾಯಕರನ್ನು ವಿಲವಿಲ ಒದ್ದಾಡುವಂತೆ ಮಾಡಿದೆ. 40% ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಾ ಬಂದರಾದರೂ ಅದರ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್ ಅದನ್ನೇ ಮುಂದಿಟ್ಟುಕೊಂಡು ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಸಂಪುಟವಿಲ್ಲದೇ ಏಕಾಂಕಾಗಿಯಾಗಿ ಸಮಸ್ಯೆ ಎದುರಿಸಿದ್ದ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಾಗಿ ಇವತ್ತು ಬಿಜೆಪಿ ಅಧಿಕಾರ ಹಿಡಿಯುವಂತಾಗಿದೆ. ಸಮ್ಮಿಶ್ರ ಸರ್ಕಾರವನ್ನು ಕೆಡವಿ ಸರ್ಕಾರ ರಚಿಸುವಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿತ್ತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆದರೆ ಸರ್ಕಾರ ರಚನೆಯಾದ ಬಳಿಕ ಯಡಿಯೂರಪ್ಪ ಅವರ ಸಹಾಯಕ್ಕೆ ಕೇಂದ್ರ ಬರಲೇ ಇಲ್ಲ. ಪ್ರವಾಹ ಪರಿಸ್ಥಿತಿಯಲ್ಲಿಯೂ ಸಚಿವ ಸಂಪುಟವಿಲ್ಲದೆ ಏಕಾಂಗಿಯಾಗಿ ಸಮಸ್ಯೆಗಳನ್ನು ಎದುರಿಸುವಂತಾಯಿತು.
ಅದಾದ ನಂತರ ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಯಿತು. ಅದರ ಪರಿಣಾಮಗಳು ಪಕ್ಷದ ಬುಡಮೇಲಾಗಲು ಆರಂಭವಾಯಿತು. ಲಿಂಗಾಯಿತರು ತಿರುಗಿ ಬೀಳುತ್ತಾರೆ. ಬಿಜೆಪಿಯನ್ನು ಬಿಟ್ಟು ಹೋಗುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ದೆಹಲಿಗೆ ಕರೆಯಿಸಿಕೊಂಡು ಕೇಂದ್ರ ಮಟ್ಟದಲ್ಲಿ ಉದ್ಯೋಗ ನೀಡಿದರು. ಆದಾದ ನಂತರ ರಾಜ್ಯದಲ್ಲಿ ಬಿಜೆಪಿಯ ವರ್ಚಸ್ಸು ಕುಗ್ಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ರಾಷ್ಟ್ರಮಟ್ಟದ ನಾಯಕರು ರಾಜ್ಯಕ್ಕೆ ಭೇಟಿ ನೀಡಲಾರಂಭಿಸಿ ಯಡಿಯೂರಪ್ಪ ಅವರನ್ನು ಕೊಂಡಾಡಲಾರಂಭಿಸಿದರು.

ಬಿಜೆಪಿಯನ್ನು ತಲ್ಲಣಗೊಳಿಸಿದ ರಾಜಕೀಯ ಬೆಳವಣಿಗೆ
ಈಗ ಬಿಜೆಪಿ ರಾಜ್ಯದಲ್ಲಿ ಸೊರಗುತ್ತಿದೆ. ಒಂದೆಡೆ ಲಿಂಗಾಯಿತರು ಪಕ್ಷದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಭ್ರಷ್ಟಾಚಾರದ ಆರೋಪಗಳು, ಪಿಎಸ್ಐ ನೇಮಕಾತಿ ಹಗರಣ, ಹಿಂದೂ ಕಾರ್ಯಕರ್ತರ ಕೊಲೆ, ಸಿಡಿದೆದ್ದ ಹಿಂದೂ ಕಾರ್ಯಕರ್ತರು ಹೀಗೆ ಒಂದೇ ಎರಡೇ ಹತ್ತಾರು ವಿಚಾರಗಳು ಆಡಳಿತರೂಢ ಬಿಜೆಪಿಯನ್ನು ತಲ್ಲಣಗೊಳಿಸಿದೆ. ಅದರಲ್ಲೂ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮತ್ತು 40% ಕಮಿಷನ್ ಆರೋಪ ತಾರ್ಕಿಕ ಅಂತ್ಯ ಕಾಣದೆ ಹೋದುದರಿಂದ ಅದು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ಗೆ ಪ್ರಬಲ ಅಸ್ತ್ರವಾಗಿಯೇ ಉಳಿದು ಹೋಗಿದೆ.
ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಎಬ್ಬಿಸಿರುವ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ರಾಷ್ಟ್ರಮಟ್ಟದ ನಾಯಕರಿಗೂ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ದೂರವಿಟ್ಟು ಚುನಾವಣೆ ನಡೆಸುವುದು ಕಷ್ಟ ಎಂಬುದು ಗೊತ್ತಾಗಿದೆ. ಹೀಗಾಗಿಯೇ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವಕ್ಕೆ ಮಣೆ ಹಾಕುತ್ತಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಅಸ್ತ್ರಗಳೇನು..?
ರಾಜ್ಯಕ್ಕೆ ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಮೋದಿಯವರು ಬಂದು ಹೋಗುತ್ತಿದ್ದಾರೆ. ಈ ವೇಳೆ ನಿರೀಕ್ಷೆ ಮೀರಿ ಜನ ಸೇರುತ್ತಿದ್ದಾರೆ. ಆದರೆ ಅದು ಮತವಾಗಿ ಪರಿವರ್ತನೆಯಾಗುತ್ತಾ ಎಂಬ ಪ್ರಶ್ನೆಯೂ ಇಲ್ಲದಿಲ್ಲ. ಮೋದಿ ಭೇಟಿ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭ ತಂದುಕೊಡುತ್ತೋ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಯೋಗಿಸಿರುವ ರಾಜಕೀಯ ಅಸ್ತ್ರಗಳು ಬಿಜೆಪಿಯನ್ನು ಇನ್ನಿಲ್ಲದಂತೆ ಕಾಡುತ್ತಿರುವುದಂತು ನಿಜ. ಹಾಗಾದರೆ ಕಾಂಗ್ರೆಸ್ಅನ್ನು ಮಣಿಸುವ ಅಸ್ತ್ರಗಳು ಬಿಜೆಪಿ ಬಳಿ ಇದೆಯಾ? ಕಾದು ನೋಡಬೇಕಿದೆ.












Click it and Unblock the Notifications