'ಧರ್ಮ ಸಂಕಟ'ದಲ್ಲಿ ಬಿಜೆಪಿ, ಸ್ವತಂತ್ರ ಧರ್ಮದ ವಿಚಾರದಲ್ಲಿ ಏನಂತಾರೆ?
ಬೆಂಗಳೂರು, ಜುಲೈ 26: ಲಿಂಗಾಯತ ಸ್ವತಂತ್ರ ಧರ್ಮ ಎಂಬ ವಿಚಾರ ಕಾಂಗ್ರೆಸ್ ಪಾಲಿಗೆ ಸಿಕ್ಕಿರುವ ಹೊಸ ಚಾಟಿ. ಹೇಗೆ ತಿರುವ್ಯಾಡಿ ಬೀಸಿದರೂ ಬಿಜೆಪಿ ಕಂವ್ವೋ ಅನ್ನುವಂತಾಗಿದೆ. ಏಕೆಂದರೆ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರೆ ಹಿಂದೂ ಧರ್ಮವನ್ನು ಒಡೆದಂತಾಗುತ್ತದೆ.
ಈ ಹೋರಾಟದಿಂದ ಅಂತರ ಕಾಯ್ದುಕೊಂಡರೆ ಲಿಂಗಾಯತರ ಸಿಟ್ಟಿಗೆ ಕಾರಣವಾಗುತ್ತದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಅಂಥದ್ದೊಂದು ಆರೋಪ ಕೇಳಲು ಆರಂಭವಾಗಿದೆ. ಆರೆಸ್ಸೆಸ್ ಹೇಳಿದಂತೆ ಕೇಳುವ ಬಿಎಸ್ ವೈ, ಲಿಂಗಾಯತರ ಹೋರಾಟಕ್ಕೆ ನೆರವು ನೀಡಲಾರರು ಎಂದು ಆರೋಪ ಮಾಡಲಾಗುತ್ತಿದೆ.
ಲಿಂಗಾಯತ ಸ್ವತಂತ್ರ ಧರ್ಮವಾದರೆ ಸಂಖ್ಯೆಯ ದೃಷ್ಟಿಯಲ್ಲಿ ಅಲ್ಪಸಂಖ್ಯಾತರಾಗುತ್ತಾರೆ. ಆಗ ಸರಕಾರಿ ಸವಲತ್ತುಗಳು ಒಂದಿಷ್ಟು ದೊರೆಯುತ್ತದೆ ಎಂಬುದು ಚಳವಳಿಯಲ್ಲಿ ಮುಂಚೂಣಿಯಲ್ಲಿರುವವರ ವಾದ. ಆದರೆ ಆ ಕಾರಣಕ್ಕಾಗಿಯೇ ಪ್ರತ್ಯೇಕ ಧರ್ಮ ಎಂಬ ಘೋಷಣೆ ಸಾಧ್ಯವಿಲ್ಲ. ಅದೊಂದು ಸಾಂವಿಧಾನಿಕ ಪ್ರಕ್ರಿಯೆ. ಅಷ್ಟು ಸುಲಭಕ್ಕೆ ಪೂರೈಸಲು ಆಗಲ್ಲ.
ಇನ್ನು ಪ್ರತ್ಯೇಕ ಧರ್ಮ ಎಂಬ ಕೂಗು ಏನು ಕೇಳಿಬರುತ್ತಿದೆ, ಅದು ಹಿಂದೂಗಳೆಲ್ಲ ಒಗ್ಗೂಡಬೇಕು ಎಂದು ಆರೆಸ್ಸೆಸ್ ಸಿದ್ಧಾಂತಕ್ಕೆ ವಿರುದ್ಧವಾದದ್ದು.

ನಿರೀಕ್ಷೆ ಇರಲಿಲ್ಲ
ಈ ಧ್ವನಿ ಇಷ್ಟು ದೊಡ್ಡ ಮಟ್ಟದಲ್ಲಿ ಹೊರಡುತ್ತದೆ ಎಂದು ಯಡಿಯೂರಪ್ಪನವರು ಅಂದಾಜು ಮಾಡಿರಲಿಕ್ಕಿಲ್ಲ. ಈ ವಿಚಾರವಾಗಿ ತಮ್ಮ ನಿಲುವು ಏನು ಎಂದು ಸ್ಪಷ್ಟಪಡಿಸಬೇಕಾದ ಅಡಕತ್ತರಿಯಲ್ಲಿ ಸಿಲುಕಿಕೊಂಡಿರುವ ಅವರು ತುಂಬ ನಾಜೂಕಾಗಿ ಪರಿಸ್ಥಿತಿ ಸಂಭಾಳಿಸಲು ಪ್ರಯತ್ನಿಸುತ್ತಿದ್ದಾರೆ.

ಬೆಚ್ಚಿಬೀಳಿಸಿದ ಕೂಗು
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರ ಮತಗಳು ಸಾಲಿಡ್ ಆಗಿ ಬಿಜೆಪಿಗೆ ಬರುತ್ತವೆ ಎಂಬ ಅಂದಾಜಿತ್ತು. ಇದರ ಜತೆಗೆ ಮಹದಾಯಿ ವಿವಾದ ಕಾಂಗ್ರೆಸ್ ಗೆ ಉಲ್ಟಾ ಹೊಡೆಯುತ್ತದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ ಲಿಂಗಾಯತರ ಮತದ ಬುಟ್ಟಿ ಬುಟ್ಟಿಯೇ ಜೇಬಿಗೆ ಬಿತ್ತು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಸ್ವತಂತ್ರ ಧರ್ಮದ ಕೂಗು ಬೆಚ್ಚಿ ಬೀಳುವಂತೆ ಮಾಡಿದೆ.

ಜವಾಬ್ದಾರಿ ಹೊತ್ತು ಹಾಕಿದ ಸಿಎಂ
ಇನ್ನು ಸಿದ್ದರಾಮಯ್ಯ ಅವರ ಬಳಿ ತೆರಳಿದ್ದ ಮನವಿಯನ್ನು ಕೇಂದ್ರ ಸರಕಾರಕ್ಕೆ ಹೊತ್ತು ಹಾಕುವುದಾಗಿಯೂ ಸ್ವತಂತ್ರ ಧರ್ಮಕ್ಕೆ ಶಿಫಾರಸು ಮಾಡುವುದಾಗಿ ತಮ್ಮ ಮೇಲಿನ ಜವಾಬ್ದಾರಿ ತೊಳೆದುಕೊಂಡು ಬಿಟ್ಟರು.

ಧರ್ಮ ಸಂಕಟದಲ್ಲಿ ಬಿಜೆಪಿ
ಲಿಂಗಾಯತರ ಬೇಡಿಕೆ ಈಡೇರಬೇಕು ಅಂದರೆ ಅದಕ್ಕೆ ಸಂವಿಧಾನದಲ್ಲೇ ತಿದ್ದುಪಡಿ ತರಬೇಕು. ಸಂಸತ್ ನಲ್ಲಿ ಅನುಮೋದನೆ ಸಿಕ್ಕಬೇಕು. ಆ ಜವಾಬ್ದಾರಿ ಬಿಜೆಪಿಗೆ ಸುತ್ತಿಕೊಳ್ಳುತ್ತದೆ. ಹೇಗೆ ನೋಡಿದರೂ ಈಗಿನ ಸನ್ನಿವೇಶ ಧರ್ಮ ಸಂಕಟ ತಂದಿಟ್ಟಿದೆ.











Click it and Unblock the Notifications