ರೆಸಾರ್ಟ್ ಮೋಜು ಮುಗಿಸಿಬಂದ ಬಿಜೆಪಿ ಬರಗಾಲ ವೀಕ್ಷಣೆಗೆ ಸಜ್ಜು
ಬೆಂಗಳೂರು, ಜನವರಿ 19: ರೆಸಾರ್ಟ್ ಮೋಜು ಮುಗಿಸಿ ಬಂದ ಬಿಜೆಪಿಯು ಇದೀಗ ಬರಗಾಲ ವೀಕ್ಷಣೆ ಪ್ರವಾಸಕ್ಕೆ ಸಜ್ಜಾಗಿದ್ದು, ಇದೇ 21-22 ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪ್ರವಾಸ ಮಾಡಲಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಬರಗಾಲ ವೀಕ್ಷಣೆಗೆ ಬಿಜೆಪಿ ತೆರಳುತ್ತಿದ್ದು, 21 ನೇ ತಾರೀಖಿನಂದು ಚಿಕ್ಕಬಳ್ಳಾಪುರ ಜಿಲ್ಲೆ, ಕೋಲಾರ ಮತ್ತು ಮುಳಬಾಗಿಲುಗಳಲ್ಲಿ ಬರಗಾಲ ವೀಕ್ಷಣೆ ಮಾಡಲಿದೆ.

ಚಿಕ್ಕಬಳ್ಳಾಪುರ ಭಾಗದಲ್ಲಿ ಯಡಿಯೂರಪ್ಪ ಅವರಿಗೆ ಮಾಜಿ ಸಚಿವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಬಚ್ಚೇಗೌಡ ಅವರು ಸಾಥ್ ನೀಡಲಿದ್ದಾರೆ. ಬರವೀಕ್ಷಣೆ ಬಳಿಕ ಯಡಿಯೂರಪ್ಪ ನಿಯೋಗವು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸಲಿದೆ.
22ನೇ ತಾರೀಖಿನಂದು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಬರಪೀಡಿತ ತಾಲ್ಲೂಕುಗಳಿಗೆ ನಿಯೋಗವು ಭೇಟಿ ನೀಡಲಿದೆ. ಇದೇ ಸಮಯ ಚಾಮರಾಜನಗರ ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ಸಹ ನಡೆಸಲಿದ್ದಾರೆ.
ರೆಸಾರ್ಟ್ ರಾಜಕೀಯ ಮಾಡಿದ್ದರಿಂದ ಆಗಿರುವ ರಾಜಕೀಯ ಡ್ಯಾಮೆಜ್ ಅನ್ನು ಸರಿಪಡಿಸಿಕೊಳ್ಳುವ ಕಾರಣಕ್ಕೆ ಈ ಬರ ಪ್ರವಾಸ ಆಯೋಜಿಸಲಾಗಿದೆ ಎಂದು ಆಡಳಿತ ಪಕ್ಷದ ಕೆಲವರು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಬಿಜೆಪಿಯ ಈ ನಡೆಯನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.
ನಿಯೋಗದಲ್ಲಿ ಯಡಿಯೂರಪ್ಪ ಅವರ ಜೊತೆಗೆ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಚ್ಚೇಗೌಡ, ಎನ್.ರವಿಕುಮಾರ್, ಜಯದೇವ್, ಮರಿಸ್ವಾಮಿ, ವೆಂಕಟಮುನಿಯಪ್ಪ ಅವರುಗಳು ಇರಲಿದ್ದಾರೆ.












Click it and Unblock the Notifications