ಕರ್ನಾಟಕ ಬಿಜೆಪಿ ಬಿಕ್ಕಟ್ಟಿಗೆ 'ರಾಮ'ಬಾಣ ಸಿದ್ಧ!
ಬೆಂಗಳೂರು, ಆಗಸ್ಟ್ 26 : 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ವಿಚಾರದಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಹುಟ್ಟಿಕೊಂಡಿರುವ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಸಂಧಾನಸೂತ್ರ ಸಿದ್ಧಪಡಿಸಿದೆ. ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಣೆ ಮಾಡಿದ ಬಳಿಕ ಮುಂದಿನ ಹೆಜ್ಜೆ ಇಡಲಾಗುತ್ತದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವಿನ ಜಟಾಪಟಿಗೆ ರಾಯಣ್ಣ ಬ್ರಿಗೇಡ್ ಕಾರಣವಾಗಿದೆ. ಈ ಅಸಮಾಧಾನವನ್ನು ಬಗೆಹರಿಸಿ ಎಂದು ಹೈಕಮಾಂಡ್ ನಾಯಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಅವರಿಗೆ ಸೂಚನೆ ನೀಡಿದ್ದಾರೆ.[ಟ್ರಸ್ಟ್ ರೂಪದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೋಂದಣಿ!]
ಮಂಗಳವಾರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿಯೂ ಈ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದ ಬಳಿಕ ಸಂಧಾನ ಸೂತ್ರವನ್ನು ಸಿದ್ಧಪಡಿಸಲಾಗಿದೆ.[ಈಶ್ವರಪ್ಪ ಕಿವಿ ಹಿಂಡಲು ಹೈಕಮಾಂಡಿಗೆ ದೂರು?]
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಈಗಾಗಲೇ ನೋಂದಣಿಯಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಟ್ರಸ್ಟ್ ರೂಪದಲ್ಲಿ ನೋಂದಣಿ ಮಾಡಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಟ್ರಸ್ಟ್ನಲ್ಲಿ ಕೆ.ಎಸ್.ಈಶ್ವರಪ್ಪ ಅವರು ಯಾವುದೇ ಪದಾಧಿಕಾರಿಗಳ ಹುದ್ದೆಯನ್ನು ಪಡೆದಿಲ್ಲ....[ಕೇಂದ್ರ ನಾಯಕರಿಗೆ ಬಿಎಸ್ವೈ ರವಾನಿಸಿದ ಎಚ್ಚರಿಕೆ ಏನು?]

ಅಭಿಪ್ರಾಯ ಸಂಗ್ರಹಕ್ಕೆ ಹೈಕಮಾಂಡ್ ಸೂಚನೆ
ಪಕ್ಷದಲ್ಲಿನ ಗೊಂದಲದ ಬಗ್ಗೆ ಪಕ್ಷದ ಮೊದಲ ಹಂತದ ಕಾರ್ಯಕರ್ತರಿಂದ ಜಿಲ್ಲಾ ಪದಾಧಿಕಾರಿಗಳ ತನಕ ಎಲ್ಲಾ ನಾಯಕರ ಅಭಿಪ್ರಾಯವನ್ನು ಸಂಗ್ರಹ ಮಾಡುವಂತೆ ರಾಮ್ ಲಾಲ್ ಅವರಿಗೆ ಹೈಕಮಾಂಡ್ ನಾಯಕರು ಸೂಚನೆ ಕೊಟ್ಟಿದ್ದಾರೆ.

ಮೂರು ದಿನಗಳ ಕಾಲ ಅಭಿಪ್ರಾಯ ಸಂಗ್ರಹ
ರಾಮ್ ಲಾಲ್ ಅವರು ಸೆ.15ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೆ.15ರಿಂದ ಮೂರು ದಿನಗಳ ಕಾಲ ನಾಯಕರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಿದ್ದಾರೆ. ನಂತರ ಈ ವರದಿಯನ್ನು ವರಿಷ್ಠರಿಗೆ ಸಲ್ಲಿಕೆ ಮಾಡಲಿದ್ದಾರೆ.

ಯಡಿಯೂರಪ್ಪ ಸೂಚನೆ ತಿರಸ್ಕಾರ
ಪಕ್ಷದ ವಿವಿಧ ಮೋರ್ಚಾಗಳ ಹೊರತಾಗಿ ಬೇರೆ ಸಂಘಟನೆಯಡಿ ಕಾರ್ಯಕ್ರಮಗಳನ್ನು ನಡೆಸಬಾರದು ಎಂಬುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ. ಆದರೆ, ಇದನ್ನು ಧಿಕ್ಕರಿಸಿ ಈಶ್ವರಪ್ಪ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತಮ್ಮ ನಡೆ ಸಮರ್ಥಿಸಿಕೊಂಡ ಈಶ್ವರಪ್ಪ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಈಶ್ವರಪ್ಪ ಅವರು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. 'ಪಕ್ಷದ ನಾಯಕರ ಸೂಚನೆಯನ್ನು ನಾನು ತಿರಸ್ಕಾರ ಮಾಡುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸುತ್ತಿಲ್ಲ. ಬ್ರಿಗೇಡ್ ರಚನೆ ವಿಚಾರದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಆಹ್ವಾನಿತನಾಗಿ ನಾನು ಸಭೆಗೆ ಹೋಗಿದ್ದೆ' ಎಂದು ಈಶ್ವರಪ್ಪ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.

ಟ್ರಸ್ಟ್ನಲ್ಲಿ ಯಾವ ಸದಸ್ಯರಿದ್ದಾರೆ?
ಸಂಗೊಳ್ಳಿ ರಾಯಣ್ಣ ಟ್ರಸ್ಟ್ ನಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದಾರೆ. ಮಾಜಿ ಸಂಸದ ವಿರೂಪಾಕ್ಷಪ್ಪ ಅವರು ಅಧ್ಯಕ್ಷರು. ಕೆಪಿಎಸ್ಸಿ ಮಾಜಿ ಸದಸ್ಯ ಕೆ.ಮುಕುಡಪ್ಪ ಕಾರ್ಯಾಧ್ಯಕ್ಷರಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಗೌರವ ಅಧ್ಯಕ್ಷರಾಗಿದ್ದಾರೆ.












Click it and Unblock the Notifications