ಮಂಡ್ಯ ರೈತರಿಂದ ನಾಳೆ ಶುಕ್ರವಾರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ, ರೈಲು ತಡೆ
ಬೆಂಗಳೂರು, ಸೆಪ್ಟಂಬರ್ 28: ದಕ್ಷಿಣ ಕರ್ನಾಟಕದ ಜೀವನಾಡಿ ಆಗಿರುವ ಕಾವೇರಿ ನದಿ ನೀರನ್ನು ಇಂತಹ ಬರಗಾಲದ ಸನ್ನಿವೇಶದಲ್ಲೂ ತಮಿಳುನಾಡಿಗೆ ಹರಿಸುತ್ತಿರುವ ನೀರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಳೆ ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಇದರ ಭಾಗವಾಗಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕಾವೇರಿಗಾಗಿ ಹೋರಾಟ ವನ್ನು ಇನ್ನಷ್ಟು ತೀವ್ರಗೊಳಿಸಲು ರೈತ ಸಂಘಗಳು ನಿರ್ಧರಿಸಿವೆ.
ಕಾವೇರಿ ನೀರು ಬೆಂಗಳೂರಿಗರಿಗೆ ಕುಡಿಯಲು ಆಸರೆಯಾದರೆ, ಮಂಡ್ಯ, ರಾಮನಗರ, ಮೈಸೂರು ಕೆಲವು ಜಿಲ್ಲೆಗಳಿಗೆ ಕೃಷಿಗೆ ಅತಿ ಮುಖ್ಯ ಅವಲಂಬನೆ ಆಗಿದೆ. ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚಿಸಿದಂತೆ ಕೇಳುತ್ತಿದೆ. ಪ್ರತಿರೋಧಿಸುತ್ತಿಲ್ಲ. ಸುಪ್ರೀಂಕೋರ್ಟ್ನಲ್ಲಿ ಸಮರ್ಥ ವಾದ ಮಾಡುವಲ್ಲಿ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ನಾಳೆ ಶುಕ್ರವಾರ ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಮತ್ತು ರೈಲು ತಡೆದು ಪ್ರತಿಭಟಿಸಲು ನಿರ್ಧರಿಸಲಾಗಿದೆ. ಹೋರಾಟ ತೀವ್ರಗೊಳಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಲಿದ್ದೇವೆ ಎಂದು ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೇಗೌಡ ಅವರು ತಿಳಿಸಿದ್ದರೆ.
ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು
ಶ್ರೀರಂಗಪಟ್ಟಣ ಗೌರಿಪುರ ಬಳಿ ಎಕ್ಸ್ಪ್ರೆಸ್ ವೇ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಿದ್ದೇವೆ. ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಸ್ಪಷ್ಟ ನೀರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ನೀರು ಬಿಡುಲು ಆದೇಶ ಪಾಲಿಸದೇ ಗಟ್ಟಿ ನಿಲುವು ತಾಳಬೇಕು. ಈಗಾಗಲೇ ಸಾಕಷ್ಟು ಪ್ರಮಾಣದ ನೀರು ಹರಿದು ಹೋಗಿದೆ. ಪ್ರಾಧಿಕಾರದ ತಜ್ಞರಿಂದ ಕಾವೇರಿ ಭಾಗದಲ್ಲಿನ ಪರಿಸ್ಥಿತಿ, ಮಳೆ ಕೊರತೆಯ ವಾಸ್ತವನ್ನು ಪರಿಶೀಲಿಸಬೇಕು. ಈ ಮೂಲಕ ನಮಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಕರವೇ ಸೇರಿದಂತೆ ನೂರಾರು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.
ನಾಳೆ ಬಂದ್ ವೇಳೆ ಮಂಡ್ಯ ರೈತರು ಎಕ್ಸ್ಪ್ರೆಸ್ ವೇ ಮತ್ತು ರೈಲು ತಡೆದರೆ, ಬೇರೆಡೆ ಸಹಿತ ಪ್ರಮುಖ ರಸ್ತೆ, ರಾಷ್ಟ್ರೀಯ ಹೈವೆಗಳು ಬಂದ್ ಆಗಲಿವೆ. ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿವೆ. ಕೆಲವೆಡೆ ವಿನೂತನ ಪ್ರತಿಭಟನೆಗಳು ಜರುಗುವ ಮೂಲಕ ಕಾವೇರಿ ನಮ್ಮವಳು, ಕಾವೇರಿಯನ್ನು ಬಿಟ್ಟು ಕೊಡಬೇಡಿ, ರೈತರಿಗೆ ನ್ಯಾಯ ಕೊಡಿ ಎಂಬ ಸಂದೇಶಗಳನ್ನು ಸಾರಲು ರೈತರು, ಸಂಘಟನೆಗಳು, ಕನ್ನಡಿಗರು ಸಜ್ಜಾಗಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಬಂದ್ ಆರಂಭವಾಗಲಿದೆ.












Click it and Unblock the Notifications