ಎಸ್ಐಟಿ ತನಿಖೆಗೆ ಬಿಜೆಪಿ ವಿರೋಧ: ಸದನ ಸಮಿತಿ ತನಿಖೆಗೆ ಆಗ್ರಹ
ಬೆಂಗಳೂರು, ಫೆಬ್ರವರಿ 11: ಆಪರೇಷನ್ ಕಮಲದ ಕುರಿತಾದ ಆಡಿಯೋ ಕ್ಲಿಪ್ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸುವುದನ್ನು ಬಿಜೆಪಿ ವಿರೋಧಿಸಿದೆ.
ತಮ್ಮ ವಿರುದ್ಧ ಕೇಳಿಬಂದ ಆರೋಪದ ಕುರಿತಾದ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸುವಂತೆ ರಮೇಶ್ ಕುಮಾರ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ಇದಕ್ಕೆ ಸದನದಲ್ಲಿಯೇ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ನೀವೇ ತನಿಖಾ ಸಮಿತಿ ರಚಿಸಿ ಎಂದು ಆಗ್ರಹಿಸಿದರು.
ಆದರೆ, ಇದನ್ನು ಪರಿಗಣಿಸದ ರಮೇಶ್ ಕುಮಾರ್, ತನಿಖಾ ತಂಡ ರಚಿಸಲು ನನಗೆ ಅಧಿಕಾರವಿಲ್ಲ. ಎಸ್ಐಟಿ ತನಿಖೆ ನಡೆದು 15 ದಿನಗಳ ಒಳಗೆ ವರದಿ ನೀಡಲಿ ಎಂದು ಹೇಳಿದ್ದರು.
ಕಲಾಪ ಮುಂದೂಡಿದ ತಕ್ಷಣವೇ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಲಾಯಿತು. ಎಸ್ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ನ್ಯಾಯಾಂಗ ಅಥವಾ ಸದನ ಸಮಿತಿ ತನಿಖೆ
ಎಚ್ ಡಿ ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಈ ಆಡಿಯೋ ಮುದ್ರಿಸಿದ್ದಾರೆ. ಹೀಗಿರುವಾಗ ಅವರ ಅಧೀನದ ಸಂಸ್ಥೆಯಿಂದಲೇ ತನಿಖೆ ನಡೆಸುವುದು ಸರಿಯಲ್ಲ. ತನಿಖೆಗೆ ಸದನ ಸಮಿತಿ ರಚಿಸಲು ಸ್ಪೀಕರ್ ಆದೇಶಿಸಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ತಮ್ಮ ತೀರ್ಮಾನವನ್ನು ಮರುಪರಿಶೀಲನೆ ಮಾಡುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಲಾಗುವುದು. ಕುಮಾರಸ್ವಾಮಿ ಅವರೇ ಈ ಪ್ರಕರಣದ ರೂವಾರಿ. ಅವರ ಅಧೀನದಲ್ಲಿರುವ ಸಂಸ್ಥೆಗಳಿಂದ ತನಿಖೆ ಮಾಡಿಸಿದರೆ ನಮಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಯಾಗಲಿ ಎಂದು ಶಾಸಕ ಮಾಧುಸ್ವಾಮಿ ಒತ್ತಾಯಿಸಿದರು.
ಸ್ಪೀಕರ್ ಸದನದ ಘನತೆ ಉಳಿಯಲು ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಶಿವನಗೌಡ ನಾಯ್ಕ್ ಬಂಧನ ಭೀತಿ
ಸರ್ಕಾರ ಎಸ್ಐಟಿ ರಚನೆಗೆ ಮುಂದಾಗಿರುವ ಬೆನ್ನಲ್ಲೇ ಆಡಿಯೋ ಕ್ಲಿಪ್ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರು ಪ್ರಸ್ತಾಪಿಸಿದ್ದ ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಅವರಿಗೆ ಬಂಧನ ಭೀತಿ ಎದುರಾಗಿದೆ.
ಎಸ್ಐಟಿ ತನಿಖೆ ಆರಂಭವಾಗಿ ಎಫ್ಐಆರ್ ದಾಖಲಾದರೆ ಆರೋಪ ಎದುರಿಸುತ್ತಿರುವ ಶಿವನಗೌಡ ಪಾಟೀಲ್ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ರಮೇಶ್ ಕುಮಾರ್ಗೆ 'ಬುಕ್'!
ಶಾಸಕರಿಂದ ರಾಜೀನಾಮೆ ಪಡೆದುಕೊಳ್ಳುವ ಕುರಿತು ಗುರುಮಿಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರೊಂದಿಗೆ ಮಾತನಾಡುವಾಗ ಶಿವನಗೌಡ ಅವರು ರಮೇಶ್ ಕುಮಾರ್ ಹೆಸರು ಪ್ರಸ್ತಾಪಿಸಿದ್ದರು. ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸಲು ರಮೇಶ್ ಕುಮಾರ್ ಅವರನ್ನು 'ಬುಕ್' ಮಾಡಲಾಗಿದೆ ಎಂದು ಶಿವನಗೌಡ ಹೇಳಿದ್ದಾರೆ ಎನ್ನಲಾಗಿದೆ.
ಸದನದಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ರಮೇಶ್ ಕುಮಾರ್ ಆ ಹೆಸರು ಪ್ರಸ್ತಾಪಿಸದೆ ಇದ್ದರೂ, ಕಳೆದ ಬಾರಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡು ಕೋರ್ಟ್ನಲ್ಲಿ ಗೆದ್ದಿದ್ದ 12 ಶಾಸಕರಲ್ಲಿ ಒಬ್ಬರು ಈ ಕೆಲಸ ಮಾಡಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದ್ದರು. ಕಲಾಪ ನಡೆಯುವ ಸಂದರ್ಭದಲ್ಲಿ ಶಿವನಗೌಡ ಅವರು ಅರ್ಧದಲ್ಲಿಯೇ ಹೊರ ನಡೆದಿದ್ದರು.

ಬಿಜೆಪಿಯವರಿಗೆ ಲಕ್ವಾ ಹೊಡೆದಿತ್ತಾ?
ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕಾಗಿ ವಿಜುಗೌಡ ಅವರಿಗೆ 25 ಕೋಟಿ ರೂ. ಕೇಳಿದ್ದರ ಹಳೆಯ ವಿಡಿಯೋ ಬಿಡುಗಡೆ ಮಾಡುವುದಾಗಿ ಬಿಜೆಪಿ ಹೇಳಿಕೊಂಡಿದೆ. ಇದನ್ನು ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಟೀಕಿಸಿದ್ದಾರೆ.
ಇಷ್ಟು ದಿನ ಬಿಜೆಪಿಯವರು ಏಕೆ ಸುಮ್ಮನಿದ್ದರು. ಅವರಿಗೇನು ಲಕ್ವಾ ಹೊಡೆದಿತ್ತೇ? ಆವತ್ತಿನಿಂದ ಏನು ಮಾಡುತ್ತಿದ್ದರು? ವಿಜುಗೌಡ ಅವರ ಬಳಿ ಕುಮಾರಸ್ವಾಮಿ ತಮಾಷೆಗೆ ಹೀಗೆ ಹೇಳಿದ್ದರು. ಆಗ ನಾನು ಜೆಡಿಎಸ್ನಲ್ಲಿಯೇ ಇದ್ದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.












Click it and Unblock the Notifications