ಗುರುವಾರದ ಕಲಾಪದಲ್ಲಿ ಸದ್ದು ಮಾಡದ ಊಬ್ಲೋ ವಾಚ್
ಬೆಂಗಳೂರು ಮಾರ್ಚ್ 03 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಊಬ್ಲೋ ವಾಚ್ ವಿವಾದ ಸದನದಲ್ಲಿ ಇಂದು ತಣ್ಣಗಾಗಿದೆ. ವಾಚ್ ವಿವಾದದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸದನದಲ್ಲಿ ಧರಣಿಯನ್ನು ವಾಪಸ್ ಪಡೆದಿದೆ.
ಎರಡು ದಿನಗಳಿಂದ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಸಿದ್ದರಾಮಯ್ಯ ಅವರ ವಜ್ರ ಖಚಿತ ವಾಚ್ ವಿವಾದದ ಬಗ್ಗೆ ಗದ್ದಲ ಉಂಟಾಗಿತ್ತು. ಬುಧವಾರ ವಾಚ್ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಗದ್ದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. [ವಜ್ರದ ವಾಚ್ ಕೊಟ್ಟ ಸಿದ್ದರಾಮಯ್ಯ ಹೇಳಿದ್ದೇನು?]

ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಾಚ್ ವಿವಾದದ ಬಗ್ಗೆ ಸರ್ಕಾರದಿಂದ ಉತ್ತರ ಕೊಡಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಸ್ಪೀಕರ್ ಒಪ್ಪಿಗೆ ಸೂಚಿಸಿದ ಬಳಿಕ ಬಿಜೆಪಿ ಧರಣಿ ವಾಪಸ್ ಪಡೆದು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವಕಾಶ ನೀಡಿತು. [ಬುಧವಾರವೂ ಸದನದಲ್ಲಿ ಕೇಳಿಬಂದ ವಾಚ್ ಸದ್ದು!]
ಇತ್ತ ವಿಧಾನಪರಿಷತ್ನಲ್ಲಿಯೂ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಧರಣಿ ಆರಂಭಿಸಿದರು. 'ಸರ್ಕಾರದ ದುರ್ನಡತೆಯನ್ನು ಜನರ ಮುಂದಿಡುತ್ತೇವೆ ಜನರು ಇದಕ್ಕೆ ತಾರ್ಕಿಕ ಅಂತ್ಯ ನೀಡಲಿ' ಎಂದು ಹೇಳಿದರು.
'ಸರ್ಕಾರ ವಾಚ್ ವಿವಾದದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿಲ್ಲ. ಸರ್ಕಾರದ ವಿರುದ್ಧ ನಮ್ಮ ಖಂಡನೆ ಮುಂದುವರೆಯುತ್ತದೆ. ಈ ವಿಚಾರ ಹೊರತುಪಡಿಸಿ ಅನೇಕ ವಿಚಾರಗಳ ಕುರಿತು ಚರ್ಚೆ ಆಗಬೇಕಿದೆ. ಆದ್ದರಿಂದ, ಧರಣಿಯನ್ನು ವಾಪಸ್ ಪಡೆಯುತ್ತಿದ್ದೇವೆ' ಎಂದು ಈಶ್ವರಪ್ಪ ತಿಳಿಸಿದರು.












Click it and Unblock the Notifications