ಗ್ರಾಮೀಣ, ನಗರ ಕ್ಷೇತ್ರಗಳಲ್ಲಿ ಸಮಬಲ ಸಾಧಿಸಿದವರೇ ಕರ್ನಾಟಕದಲ್ಲಿ ಬಾಸ್
ಬೆಂಗಳೂರು, ಡಿಸೆಂಬರ್ 21: ಗುಜರಾತ್ ಗೆಲುವಿನ ಬೆನ್ನಿಗೆ ಬಿಜೆಪಿಗರು 'ಆಬ್ ಕೀ ಬಾರ್ ಕರ್ನಾಟಕ' ಎಂಬ ಘೋಷಣೆ ಕೂಗುತ್ತಿದ್ದಾರೆ. ಆದರೆ ಕರ್ನಾಟಕದ ಚುನಾವಣೆ ಬಿಜೆಪಿ ಪಾಲಿಗೆ ಗುಜರಾತ್ ನಷ್ಟು ಸುಲಭವಲ್ಲ. ಇಲ್ಲಿನ ಚುನಾವಣೆಯಲ್ಲಿ ನಿರ್ಣಾಯಕವಾಗುವ ಅಂಶಗಳೇ ಬೇರೆ. ಜತೆಗೆ ಗುಜರಾತ್ ನಂತೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯೂ ಇಲ್ಲ.
ಬಿಜೆಪಿ ಪಾಲಿಗೆ ಗುಜರಾತ್ ಚುನಾವಣೆ ಫಲಿತಾಂಶ ಪ್ರಮುಖವಾದುದು ಮತ್ತು ಇದು ಕರ್ನಾಟಕದಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
2018ರ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ, ಹೇಗೆ?
ಆದರೆ ಗುಜರಾತ್ ಚುನಾವಣೆ ನೋಡಿಕೊಂಡು ಕರ್ನಾಟಕದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳುವ ಸ್ಥಿತಿಯಲ್ಲಿ ಬಿಜೆಪಿಗರಿಲ್ಲ. ಕರ್ನಾಟಕದ ರಾಜಕೀಯದಲ್ಲಿ ಜಾತಿ ಸಮೀಕರಣ ಪ್ರಮುಖವಾಗಿದ್ದು ಲಿಂಗಾಯತ ಮತಬ್ಯಾಂಕ್ ನಿರ್ಣಾಯಕವಾಗಿದೆ.
ನಗರ ಕೇಂದ್ರಿತ ಬಿಜೆಪಿ
ಬಿಜೆಪಿ ಪಾಲಿಗೆ ಬಂದಾಗ, ಕೇಸರಿ ಪಕ್ಷ ನಗರ ಪ್ರದೇಶದಲ್ಲಿ ತನ್ನ ಸಾಂಪ್ರದಾಯಿಕ ಹಿಡಿತವನ್ನು ಹೊಂದಿದೆ. ಆದರೆ ಗ್ರಾಮೀಣ ಭಾಗಕ್ಕೆ ಬಂದಾಗ ಮಾತ್ರ ಮತಗಳನ್ನು ಕಾಂಗ್ರೆಸ್ ಮತ್ತು ಜನತಾದಳ ಹಂಚಿಕೊಳ್ಳುತ್ತವೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಮತಗಳನ್ನು ಯಾರು ಬ್ಯಾಲೆನ್ಸ್ ಮಾಡುತ್ತಾರೋ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೆಸ್ ಪಕ್ಷ ಸ್ಥಳೀಯ ಸಮಸ್ಯೆಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತದೆ. ಈ ವಿಷಯಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ.
ಶಾ, ಮೋದಿ ಮೇಲೆ ಭಾರ
ಜೆಡಿಎಸ್ ಕೂಡಾ ಇದೇ ರೀತಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಆದರೆ ಬಿಜೆಪಿ ಮಾತ್ರ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಒಟ್ಟಾಗಿ ಬೆಳಕು ಚೆಲ್ಲುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪನವರೇ ಆಸರೆಯಾಗಿದ್ದರೂ, ಪಕ್ಷ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನೂ ಅವಲಂಬಿಸಿದೆ.
ತಿರುವು ನೀಡಿದ 2008ರ ಕ್ಷೇತ್ರ ಮರುವಿಂಗಡಣೆ
ಕರ್ನಾಟದದಲ್ಲಿ 70 ನಗರ ಪ್ರದೇಶದ ಸೀಟುಗಳಿದ್ದರೆ 154 ಗ್ರಾಮೀಣ ಕ್ಷೇತ್ರಗಳಿವೆ. ಇದರಲ್ಲಿ 28 ಕ್ಷೇತ್ರಗಳು ಬೆಂಗಳೂರು ನಗರದಲ್ಲೇ ಇವೆ. ಉಳಿದ ನಗರ ಪ್ರದೇಶದ ಕ್ಷೇತ್ರಗಳು ನಗರ ಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಬರುತ್ತದೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ನಗರ ಪ್ರದೇಶದ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ರಾಜ್ಯ ರಾಜಕೀಯದಲ್ಲಿ ಪ್ರಮುಖ ತಿರುವು ಉಂಟು ಮಾಡಿದೆ. ಗ್ರಾಮೀಣ ಮತಗಳ ಮೇಲೆ ಚುನಾವಣೆ ಗೆಲ್ಲಬಹುದು ಎಂಬ ಚಿತ್ರಣವನ್ನೇ ಇದು ಬದಲಾಯಿಸಿದೆ.
ನಗರ ಪ್ರದೇಶಗಳು ಯಾರ ಸ್ವತ್ತೂ ಅಲ್ಲ
2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿನ 28ರಲ್ಲಿ 17 ಸ್ಥಾನಗಳನ್ನು ಗೆಲುವು ಸಾಧಿಸಿತ್ತು. ಆದರೆ 2013ರಲ್ಲಿ ಬಿಜೆಪಿ ಕೇವಲ 12 ಸ್ಥಾನಗಳನ್ನಷ್ಟೇ ಗೆಲ್ಲಲು ಯಶಸ್ವಿಯಾಗಿತ್ತು. ಹೀಗಾಗಿ ಇಲ್ಲಿನ ನಗರ ಪ್ರದೇಶಗಳ ಮತದಾರರ ಮೇಲೆ ಯಾವುದೇ ಪಕ್ಷಗಳು ಸ್ಪಷ್ಟ ಹಿಡಿತ ಹೊಂದಿಲ್ಲ.
ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೇರಬೇಕಾದರೆ ಉತ್ತರ, ಕೇಂದ್ರ ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಉತ್ತಮ ಪ್ರದರ್ಶನ ತೋರಬೇಕಾಗಿದೆ.
ಜೆಡಿಎಸ್ ನಿರ್ಣಾಯಕ
2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 154 ಗ್ರಾಮೀಣ ಕ್ಷೇತ್ರಗಳಲ್ಲಿ ಶೇಕಡಾ 60 ಸ್ಥಾನಗಳನ್ನು ಗೆದ್ದಿತ್ತು. ಆದರೆ 2013ರಲ್ಲಿ ಬಿಜೆಪಿ ಮೂರು ಹೋಳಾಗಿತ್ತ ಎಂಬುದು ಮುಖ್ಯ. ಬಿಜೆಪಿ, ಕೆಜೆಪಿ ಮತ್ತು ಬಿಎಸ್ಆರ್ ಪಕ್ಷವಾಗಿ ಬಿಜೆಪಿ ಮೂರು ಹೋಳಾದಾಗ ಕಾಂಗ್ರೆಸ್ ಸುಲಭವಾಗಿ ಜಯ ಸಾಧಿಸಿತ್ತು.
ಈ ಕಡೆ ಕಾಂಗ್ರೆಸ್ ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಕಾರಣಕ್ಕೆ ಬಲಿಷ್ಠವಾಗಿದ್ದರೂ ಇಲ್ಲಿ ಜೆಡಿಎಸ್ ಕೂಡ ಗಟ್ಟಿಯಾಗಿದ್ದು ಕಾಂಗ್ರೆಸ್ ಹಾದಿ ಸುಗಮವಾಗಿಲ್ಲ. ಈಗಾಗಲೇ ಸಮೀಕ್ಷೆಗಳು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸರಕಾರ ರಚಿಸಲು ಜೆಡಿಎಸ್ ಸಹಕಾರ ಬೇಕಾಗಿದೆ.