ಮುಖ್ಯಮಂತ್ರಿ ಆಗುವ ಕನವರಿಕೆಯಲ್ಲಿಈ ನಾಲ್ವರು ನಾಯಕರು: ಯಾರ ಮೇಲೆ ಮತದಾರರ ಒಲವು?
ಬೆಂಗಳೂರು, ಮಾರ್ಚ್ 30: ಇಲ್ಲಿ ತನಕದ ರಾಜಕೀಯದ ಲೆಕ್ಕಾಚಾರಗಳು ಒಂದು ಬಗೆಯದ್ದಾಗಿದ್ದರೆ, ಇನ್ಮುಂದೆ ನಡೆಯುವ ಲೆಕ್ಕಾಚಾರಗಳೇ ವಿಭಿನ್ನವಾಗಿರಲಿವೆ. ಅಷ್ಟೇ ಅಲ್ಲದೇ ಅವು ಸೋಲು ಮತ್ತು ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹೀಗಾಗಿ 2023ರ ಚುನಾವಣೆ ಒಂದಷ್ಟು ಕಠಿಣ ಹಾಗೂ ಸವಾಲಿನ ಚುನಾವಣೆಯಾಗಿರುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸಿಎಂ ಆಗುವ ಕನಸು ಹೊತ್ತಿರುವ ನಾಲ್ವರು ನಾಯಕರಲ್ಲಿ ಯಾರಾಗುತ್ತಾರೆ ಎಂಬ ಪ್ರಶ್ನೆಗಳಿಗೂ ಉತ್ತರವಾಗಲಿವೆ.
ಏನಾದರಾಗಲಿ ಮತ್ತೊಮ್ಮೆ ಸಿಎಂ ಆಗುವುದರೊಂದಿಗೆ ರಾಜಕೀಯ ನಿವೃತ್ತಿ ಹೊಂದುವ ನಿರ್ಧಾರಕ್ಕೆ ಬಂದಿರುವ ಸಿದ್ದರಾಮ್ಯಯರಿಗೆ ಸ್ಪರ್ಧಿಸುವ ಕ್ಷೇತ್ರದ ಬಗ್ಗೆಯೇ ಹೆಚ್ಚಿನ ಗೊಂದಲವಿದೆ. ಈ ಬಾರಿಯೂ ಅವರಿಗೆ ಸೋಲಿನ ಭಯ ಕಾಡುತ್ತಿರುವುದರಿಂದಾಗಿ ಸುಲಭ ಗೆಲುವಿನ ಕ್ಷೇತ್ರದತ್ತ ತಲಾಸೆಯಲ್ಲಿದ್ದರು. ಕೊನೆಗೆ ಸ್ವಕ್ಷೇತ್ರ ವರುಣಾ ಕೊನೆಯ ಅವರ ಆಯ್ಕೆ ಆದರೂ ಕೋಲಾರದತ್ತಲೂ ಒಲವು ತೋರುತ್ತಿರುವುದರ ಹಿಂದೆ ಹಲವು ಲೆಕ್ಕಾಚಾರ ಅಡಗಿರುವುದನ್ನು ತಳ್ಳಿಹಾಕುವಂತಿಲ್ಲ.

ಬಹುಶಃ ಈ ಬಾರಿ ಸ್ಪರ್ಧೆ ಕುರಿತಂತೆ ಕ್ಷೇತ್ರದ ಆಯ್ಕೆ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿರುವ ಯಾವುದಾದರೂ ನಾಯಕನಿದ್ದರೆ ಅದು ಸಿದ್ಧರಾಮಯ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವತ್ತಿಗೂ ಅವರ ಕ್ಷೇತ್ರ ಗೊಂದಲ ಮುಂದುವರೆದಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ ಅವರ ಹೆಸರು ವರುಣಾ ಕ್ಷೇತ್ರದಿಂದ ಇದ್ದರೂ ಕೋಲಾರ ಕ್ಷೇತ್ರದಲ್ಲಿಯೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು. ಕಾಂಗ್ರೆಸ್ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಗೊಂದಲಕ್ಕೆಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಗೊಂದಲ
ಸಾಮೂಹಿಕ ನಾಯಕತ್ವದಡಿ ಚುನಾವಣೆ ನಡೆಯುತ್ತದೆ ಮತ್ತು ಹೈಕಮಾಂಡ್ ಸಿಎಂ ಯಾರು ಎಂಬುದನ್ನು ತೀರ್ಮಾನ ಮಾಡುತ್ತದೆ ಎಂದು ಕಾಂಗ್ರೆಸ್ ನ ಕೆಲವು ನಾಯಕರು ಹೇಳುತ್ತಾ ಬಂದಿದ್ದಾರೆ. ಆದರೆ ಅತ್ತ ಡಿ.ಕೆ.ಶಿವಕುಮಾರ್ ನಾನೇ ಸಿಎಂ ಅಭ್ಯರ್ಥಿ ಎಂಬಂತೆ ಸಂದೇಶ ನೀಡುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಆದರೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬ ಘೋಷಣೆ ಮಾತ್ರ ಮಾಡಿಲ್ಲ. ಹೀಗಾಗಿ ನಾಳೆ ಕಾಂಗ್ರೆಸ್ ಬಹುಮತ ಪಡೆದರೆ ಸಿಎಂ ಯಾರು? ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಬಿಜೆಪಿಯು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದು, ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಜೆಡಿಎಸ್ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯ ಮಂತ್ರಿ ಎಂಬುದು ಗೊತ್ತಿರುವ ವಿಚಾರ. ಮೇಲ್ನೋಟಕ್ಕೆ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಪೈಪೋಟಿಗಳಾಗಲೀ, ಹೇಳಿಕೆಗಳನ್ನಾಗಲೀ, ಇತರೆ ನಾಯಕರು ನಾನು ಸಿಎಂ ಆಗಬೇಕೆಂಬ ಬಯಕೆಯನ್ನಾಗಲೀ ಸದ್ಯದ ಮಟ್ಟಿಗೆ ಬಹಿರಂಗವಾಗಿ ತೋರ್ಪಡಿಸಿಲ್ಲ.
ಸಿದ್ದರಾಮಯ್ಯ ವರ್ಸಸ್ ಡಿ.ಕೆ.ಶಿವಕುಮಾರ್?
ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ತೀವ್ರ ಪೈಪೋಟಿ ಇರುವುದು ಗುಟ್ಟಾಗಿ ಉಳಿದಿಲ್ಲ. ಈ ವಿಚಾರದಲ್ಲಿ ಅಲ್ಲಲ್ಲಿ, ಆಗಾಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ. ಎರಡು ನಾಯಕರ ಬೆಂಬಲಿಗರು ಆಗಾಗ್ಗೆ ಸಭೆ, ಸಮಾರಂಭ, ಪ್ರಚಾರ ಕಾರ್ಯಕ್ರಮಗಳಲ್ಲಿ ಸಿಎಂ ವಿಚಾರದ ಬಗೆಗೆ ಘೋಷಣೆಗಳನ್ನು ಕೂಗುತ್ತಿರುವುದು ಸಾಕ್ಷಿಯಾಗಿದೆ.

ಏನಾದರಾಗಲೀ ಇದೊಂದು ಬಾರಿ ಸಿಎಂ ಆಗಲೇ ಬೇಕೆಂದು ಡಿ.ಕೆ.ಶಿವಕುಮಾರ್ ಹವಣಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಅವರು ಕೊನೆಯ ಬಾರಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ಅವರಿಗೆ ಒಳ ಏಟುಗಳ ಭಯವೂ ಇಲ್ಲದಿಲ್ಲ. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಅವರಿಗೆ ಅಲ್ಲಿ ಅವರನ್ನು ಸೋಲಿಸಲು ತಂತ್ರಗಳು ನಡೆಯುತ್ತಿವೆ ಎಂಬುದು ಗೊತ್ತಾಗಿತ್ತು. ಹೀಗಾಗಿ ಎಲ್ಲ ರೀತಿಯಲ್ಲಿಯೂ ಸುರಕ್ಷಿತ ಕ್ಷೇತ್ರವಾದ ವರುಣಾದಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದ್ದು ಅದರಂತೆ ಮೊದಲ ಪಟ್ಟಿಯಲ್ಲಿಯೇ ಅವರ ಕ್ಷೇತ್ರ ಘೋಷಣೆಯಾಗಿದೆ.
ಎರಡು ಕ್ಷೇತ್ರ ಬೇಕೆನ್ನುತ್ತಿರುವುದು ಏಕೆ?
ಈಗ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳನ್ನು ಕೇಳುತ್ತಿರುವುದರ ಹಿಂದೆ ತಮ್ಮದೇ ಆದ ಲೆಕ್ಕಾಚಾರವಿದೆ. ಅದೇನೆಂದರೆ ಆದಷ್ಟು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ಪ್ರಯತ್ನ ಪಡುವುದು ಒಂದು ವೇಳೆ ಎರಡು ಕ್ಷೇತ್ರದಲ್ಲಿ ಗೆಲುವು ಪಡೆದರೆ ವರುಣಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮತ್ತೆ ಮಗ ಯತೀಂದ್ರ ಸಿದ್ದರಾಮಯ್ಯ ಗೆಲ್ಲುವಂತೆ ಮಾಡುವುದು. ಆ ಮೂಲಕ ಮಗನ ರಾಜಕೀಯ ಭವಿಷ್ಯಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುವುದು ಅವರ ಉದ್ದೇಶವಾಗಿದೆ ಎನ್ನಲಾಗಿದೆ.
ಈಗ ಚುನಾವಣೆ ಘೋಷಣೆಯಾಗಿದೆ. ಹಾಗಾಗಿ ಇಲ್ಲಿವರೆಗೆ ಮಾಡಿಕೊಂಡು ಬಂದ ಲೆಕ್ಕಾಚಾರಕ್ಕೂ ಮುಂದೆ ನಡೆಯುವ ರಾಜಕೀಯ ಬೆಳವಣಿಗೆಗಳಿಗೆ ವ್ಯತ್ಯಾಸವಿದೆ. ಎಷ್ಟೇ ತಂತ್ರ ಮಾಡಿದರೂ, ಲೆಕ್ಕಾಚಾರಗಳನ್ನು ಹಾಕಿದರೂ ಮತದಾರರು ತೆಗೆದುಕೊಳ್ಳುವ ತೀರ್ಮಾನದ ಮೇಲೆಯೇ ಎಲ್ಲವೂ ನಿಂತಿದೆ. ಆದ್ದರಿಂದ ಮತದಾರರ ಓಲೈಕೆ ಮಾಡಿ ಗೆಲುವು ಸಾಧಿಸುವುದು ಸಿಎಂ ಕನಸು ಕಾಣುತ್ತಿರುವ ನಾಯಕರ ಮುಂದಿರುವ ಸವಾಲ್ ಆಗಿದೆ.












Click it and Unblock the Notifications