ಆಪರೇಷನ್ ಕಮಲ: ಇನ್ನಷ್ಟು ಮುಖಂಡರು ಶೀಘ್ರವೇ ಬಿಜೆಪಿಗೆ: ಆರ್.ಅಶೋಕ್
ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನಷ್ಟು ಅನ್ಯ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನ ಸೇರಲಿದ್ದಾರೆ ಎಂದು ಆರ್ ಅಶೋಕ್ ಹೇಳಿದರು.
ರಾಮನಗರ,ಮಾರ್ಚ್ 4: ಚುನಾವಣೆ ಹತ್ತಿರವಾಗುತ್ತಿದ್ದಂತೆ ಗೆಲ್ಲುವ ಕುದುಗೆಗೆ ರಾಜಕೀಯ ಪಕ್ಷಗಳು ಗಾಳ ಹಾಕಲು ತಯಾರಿ ನಡೆಸಿವೆ. ಈಗಾಗಲೇ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅನ್ಯ ಪಕ್ಷಗಳ ಪ್ರಭಾವಿ ನಾಯಕರಿಗೆ ಗಾಳ ಹಾಕಿದೆ ಎನ್ನಲಾಗಿದೆ.
ಈ ಕುರಿತು ಶನಿವಾರ ರಾಮನಗರದಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್ ಮಾತನಾಡಿ, ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನ ನಡೆಸುತ್ತೇವೆ ಮತ್ತು ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಇತರ ಪಕ್ಷಗಳ ಇನ್ನಷ್ಟು ಮುಖಂಡರು ಬಿಜೆಪಿ ಸೇರಲು ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಕೇಂದ್ರ ಸರಕಾರ ಕೊಡುತ್ತಿದ್ದ ಹಣದ ನಾಲ್ಕೈದು ಪಟ್ಟು ಹೆಚ್ಚು ಹಣವನ್ನು ಪ್ರಧಾನಿ ನರೇಂದ್ರ ಮೋದಿಜಿ ಸರಕಾರವು ನೀಡುತ್ತಿದೆ. ಡಬಲ್ ಎಂಜಿನ್ ಸರಕಾರ ಇದ್ದರೆ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಇನ್ನೊಂದು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬರಲಿದೆ ಎಂದರಲ್ಲದೆ, ದೇಶದ ಈಶಾನ್ಯ ಭಾಗ ಸೇರಿ ಎಲ್ಲೆಡೆ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಕರ್ನಾಟಕದಲ್ಲೂ ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದ ಬದಲಾಗಿ ಹೋಟೆಲ್ನಿಂದ ಆಡಳಿತ ನಡೆಸಿದ್ದ ಕುಮಾರಸ್ವಾಮಿ ಅವರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆಡಳಿತದಲ್ಲಿದ್ದಾಗ ಸಿಎಂ, ಶಾಸಕರ ಮೇಲೆ 70ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಲೋಕಾಯುಕ್ತವನ್ನೇ ಮುಚ್ಚಿ ಪ್ರಕರಣದ ತನಿಖೆ ಮಾಡದಂತೆ ನೋಡಿಕೊಂಡರು.

ಇನ್ನೂ ಚುನಾವಣಾ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಡಾ. ಅಶ್ವತ್ಥನಾರಾಯಣ್, ಯೋಗೇಶ್ವರ್ ಅವರು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಉತ್ತರ ಪ್ರದೇಶದಲ್ಲೂ ರಥಯಾತ್ರೆ ಮೂಲಕ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಯಾತ್ರೆಗಳು ಅಂತ್ಯಗೊಂಡಿವೆ. ನಮ್ಮ 4 ತಂಡಗಳ ರಥಯಾತ್ರೆ ನಡೆದಿದೆ ಎಂದರು.
ನಮ್ಮ ತಂಡವು 67 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ರಥಯಾತ್ರೆ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ ಎಂದರು. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ನ ಎ ಟೀಂ ಮತ್ತು ಬಿ ಟೀಮನ್ನು ಮನೆಗೆ ಕಳುಹಿಸಿ ಬಿಜೆಪಿಯನ್ನು ಜನರು ಗೆಲ್ಲಿಸಲಿದ್ದಾರೆ. ನರೇಂದ್ರ ಮೋದಿಜಿ ಅವರ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಪೂರಕ ಎಂದು ಹೇಳಿದರು.
ಈಗಾಗಲೇ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಹಲವು ಪ್ಲಾನ್ ಗಳನ್ನ ಹಾಕಿಕೊಂಡಿದೆ. ಒಂದು ಕಡೇ ಹೈಕಮಾಂಡ್ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ ಪಿ ನಡ್ಡಾ ರಾಜ್ಯದಲ್ಲಿ ಚುನಾವಣಾ ರಣಕಣಕ್ಕೆ ಚಾಲನೆ ನೀಡಿದ್ದು, ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜಕೀಯ ನಾಯಕರಿಗೆ ಹತ್ತು ಹಲವು ಸೂಚನೆ ಹಾಗೂ ರೂಪರೇಷೆಯನ್ನ ಹಾಕಿಕೊಟ್ಟಿದ್ದಾರೆ.












Click it and Unblock the Notifications