ಲಿಂಗಾಯತ ಪ್ರಾಬಲ್ಯದ ಕಿತ್ತೂರು ಕರ್ನಾಟಕವೇ ಬಿಜೆಪಿಗೆ ನಿರ್ಣಾಯಕ: ಅಂಕಿಅಂಶ, ವರದಿ, ವಿಶ್ಲೇಷಣೆ
ಈ ಚುನಾವಣೆಯು ಆಡಳಿತರೂಢ ಬಿಜೆಪಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಅಧಿಕಾರದಲ್ಲಿರುವ ಪಕ್ಷವು 40 ಪರ್ಸೆಂಟ್ ಕಮಿಷನ್ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದೆ.
ಬೆಂಗಳೂರು, ಮಾರ್ಚ್ 08: ಕರ್ನಾಟಕ ಚುನಾವಣೆಯು ಮೇ ತಿಂಗಳ ಒಳಗೆ ನಡೆಯಲಿದೆ. ಮೂರು ಪಕ್ಷಗಳು ಪೈಪೋಟಿಯಲ್ಲಿವೆ. ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಹಣಾಹಣಿ ಏರ್ಪಟ್ಟಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷವು ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. 'ಡೆಕ್ಕನ್ ಹೆರಾಲ್ಡ್' ಪ್ರಕಟಿಸಿರುವ ಈ ವರದಿ ಓದಿ.

ಆಡಳಿತರೂಢ ಬಿಜೆಪಿಗೆ ಅಗ್ನಿಪರೀಕ್ಷೆ
ಈ ಚುನಾವಣೆಯು ಆಡಳಿತರೂಢ ಬಿಜೆಪಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಅಧಿಕಾರದಲ್ಲಿರುವ ಪಕ್ಷವು ನಲವತ್ತು ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗಾಗಿ ನಾಯಕರು ಭಾರೀ ಕಸರತ್ತು ಮಾಡಬೇಕಿರುವ ಅನಿವಾರ್ಯತೆ ಬಂದೊದಗಿದೆ.

ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಪ್ರಾಬಲ್ಯ
56 ಶಾಸಕರನ್ನು ವಿಧಾನಸಭೆಗೆ ಕಳುಹಿಸುವ ಲಿಂಗಾಯತ ಪ್ರಾಬಲ್ಯದ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಭಾಗದವರಾಗಿದ್ದು, ಬಿಜೆಪಿ ಇಲ್ಲಿ ಸಾಕಷ್ಟು ಸ್ಥಾನಗಳನ್ನು ಗೆಲ್ಲುವುದು ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಇಲ್ಲಿ ಯಡಿಯೂರಪ್ಪನವರ ಪ್ರಾಬಲ್ಯವೂ ಕೆಲಸ ಮಾಡಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪಕ್ಷಾಂತರವೇ ಪಕ್ಷಗಳಿಗೆ ಸಂಕಷ್ಟ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಂತರ ಪರ್ವ ಶುರುವಾಗಿದೆ. ಹೀಗಾಗಿ, ಪಕ್ಷವು ಟಿಕೆಟ್ ನೀಡುವ ಸಮಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಏಕೆಂದರೆ ಟಿಕೆಟ್ ಸಿಗದ ಹಾಲಿ ಶಾಸಕರು ಪಕ್ಷಗಳನ್ನು ಬದಲಾಯಿಸಲು ಮುಂದಾಗಬಹುದು. ಏನೇ ಆಗಲಿ, ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದ್ದು, ಜೆಡಿಎಸ್ಗೆ ಇಲ್ಲಿ ಪ್ರಬಲವಾಗಿಲ್ಲ ಎಂಬುದಂತೂ ಸತ್ಯ.

ಲಿಂಗಾಯತರ ಮೇಲೆ ಬಿಜೆಪಿ ಅವಲಂಬನೆ
ಲಿಂಗಾಯತರು ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂಬುದು ಬಿಜೆಪಿಯ ನಂಬಿಕೆಯಾಗಿದೆ. 2018 ರ ಚುನಾವಣೆಯಲ್ಲಿ ಬಿಜೆಪಿ ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದ 54 ಸ್ಥಾನಗಳನ್ನು ಗೆದ್ದಿದೆ. ಅವರಲ್ಲಿ 40 ಶಾಸಕರು ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳಿಂದ ಜಯಗಳಿಸಿದ್ದಾರೆ.

ರಾಜಕೀಯ ವಿಶ್ಲೇಷಕರು ಹೇಳುತ್ತಿರುವುದೇನು?
'ಉತ್ತರ ಕನ್ನಡ ( ಕಾರವಾರ ) ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಲಿಂಗಾಯತ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಮೊದಲಿನಿಂದಲೂ ಅವರು ವೀರೇಂದ್ರ ಪಾಟೀಲ್ (ಕಾಂಗ್ರೆಸ್) ಅಥವಾ ಬಿಎಸ್ ಯಡಿಯೂರಪ್ಪನವರಂತಹ (ಬಿಜೆಪಿ) ಲಿಂಗಾಯತ ನಾಯಕರ ಹೆಸರನ್ನು ಇಟ್ಟುಕೊಂಡು ಮತ ಚಲಾಯಿಸುತ್ತಿದ್ದಾರೆ' ಎಂದು ಬೆಳಗಾವಿ ಮೂಲದ ರಾಜಕೀಯ ವಿಶ್ಲೇಷಕ ಅಶೋಕ್ ಚಂದರಗಿ ಹೇಳಿದ್ದಾರೆ.

ಯಾವ ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಸ್ಪರ್ಧೆ?
ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಸವದತ್ತಿ ಶಾಸಕ ಆನಂದ ಮಾಮನಿ ಅವರ ಅಕಾಲಿಕ ಮರಣದಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಅವರ ಅನುಪಸ್ಥಿತಿಯನ್ನು ಕಾಂಗ್ರೆಸ್ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಬಹುದು. ಬೆಳಗಾವಿ ಗ್ರಾಮಾಂತರ, ಸವದತ್ತಿ, ಹುಕ್ಕೇರಿ ಮತ್ತು ಗೋಕಾಕ (ಬೆಳಗಾವಿ ಜಿಲ್ಲೆ), ಬಾದಾಮಿ, ಜಮಖಂಡಿ (ಬಾಗಲಕೋಟೆ), ಬಿಜಾಪುರ ನಗರ (ವಿಜಯಪುರ ಜಿಲ್ಲೆ), ರೋಣ, ಗದಗ (ಗದಗ ಜಿಲ್ಲೆ), ಕಲಘಟಗಿ, ಹುಬ್ಬಳ್ಳಿ-ಧಾರವಾಡ ಪೂರ್ವ ಮತ್ತು ಕುಂದಗೋಳದಲ್ಲಿ ( ಧಾರವಾಡ ಜಿಲ್ಲೆ) ಹೈವೋಲ್ಟೇಜ್ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಶಿಗ್ಗಾಂವಿ, ಹಿರೇಕೆರೂರಿನಲ್ಲಿ ತೀವ್ರ ಪೈಪೋಟಿ
ಹಾವೇರಿಯಲ್ಲಿ ಬೊಮ್ಮಾಯಿ ಹಿಡಿತದಿಂದ ಶಿಗ್ಗಾಂವಿಯನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ. ಅಲ್ಲದೆ, ಹಿರೇಕೆರೂರಿನಲ್ಲಿ, ಕೃಷಿ ಸಚಿವ ಬಿ ಸಿ ಪಾಟೀಲ್ ಅವರು 2019 ರಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡರು. 2018 ರಲ್ಲಿ ಅವರು ಸೋಲಿಸಿದ ಬಿಜೆಪಿ ಅಭ್ಯರ್ಥಿ ( ಈಗ ಕಾಂಗ್ರೆಸ್ನಲ್ಲಿದ್ದಾರೆ ) ಯು ಬಿ ಬಣಕಾರರಿಂದ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆ ಇದೆ. ಬಣಕಾರ ಕೆಲವು ತಿಂಗಳ ಹಿಂದೆ ಕಾಂಗ್ರೆಸ್ಗೆ ಪಕ್ಷಾಂತರಗೊಂಡರು.

ಜಾರಕಿಹೊಳಿ- ಹೆಬ್ಬಾಳ್ಕರ್ ಕದನ
2019 ರಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ‘ಆಪರೇಷನ್ ಕಮಲ'ದ ನೇತೃತ್ವ ವಹಿಸಿದ್ದು ರಮೇಶ ಜಾರಕಿಹೊಳಿ. ಅವರು ವಾಲ್ಮೀಕಿ ಸಮುದಾಯದ ನಾಯಕರೂ ಹೌದು. ಪ್ರಸ್ತುಪ ಗೋಕಾಕದ ಬಿಜೆಪಿ ಶಾಸಕರಾಗಿದ್ದಾರೆ. ಬೆಳಗಾವಿ ಗ್ರಾಮಾಂತರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಸಾಕಷ್ಟು ಶ್ರಮಪಡುತ್ತಿದ್ದಾರೆ. ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ಕ್ಷೇತ್ರದಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅವರ ವಿರುದ್ಧ ವಾಲ್ಮೀಕಿ ಸಮುದಾಯದವರೇ ಆದ ಅಶೋಕ್ ಪೂಜಾರ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಗೋಕಾಕ ಕ್ಷೇತ್ರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ.

ಯತ್ನಾಳ್ಗೆ ಗೆಲ್ಲುವ ವಿಶ್ವಾಸ
ಬಿಜಾಪುರ ನಗರದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ಗೆ ಗೆಲ್ಲುವ ವಿಶ್ವಾಸವಿದ್ದು, ಟಿಕೆಟ್ಗಾಗಿ ಪಕ್ಷದಲ್ಲಿ ಹಲವರು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದಾಗ್ಯೂ, ಈ ಪ್ರದೇಶದಲ್ಲಿ ಹಿಂದುತ್ವದ ಐಕಾನ್ ಆಗಿರುವ ಯತ್ನಾಳ್ ಅವರನ್ನು ಬಿಜೆಪಿ ಬದಲಿಸುವುದು ಕಷ್ಟಸಾಧ್ಯವೆಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 'ಇತ್ತೀಚೆಗೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಜಿಲ್ಲೆಯಲ್ಲಿ ನನ್ನ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿಯೇ ಪಕ್ಷದ ಹೈಕಮಾಂಡ್ ಈ ಭಾಗದ ಇತರ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ನನಗೆ ನೀಡಿದೆ' ಎಂದು ಯತ್ನಾಳ್ ಹೇಳಿದ್ದಾರೆ.

ಹೆಚ್ಕೆ ಪಾಟೀಲ್ ಸೋಲಿಸಲು ಬಿಜೆಪಿ ಕಸರತ್ತು
ಗದಗದಲ್ಲಿ 2018ರಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಹೆಚ್ಕೆ ಪಾಟೀಲ್ 1,600 ಮತಗಳ ಅಂತರದಿಂದ ಅನಿಲ್ ಮೆಣಸಿನಕಾಯಿ ವಿರುದ್ಧ ಗೆಲುವು ಸಾಧಿಸಿದ್ದರು. ಪಾಟೀಲರನ್ನು ತಮ್ಮ ಭದ್ರಕೋಟೆಯಲ್ಲಿ ಸೋಲಿಸಲು ಬಿಜೆಪಿ ಈ ಬಾರಿ ಎಲ್ಲ ಕಸರತ್ತು ನಡೆಸುತ್ತಿದೆ. ಲಿಂಗಾಯತರು ಮತ್ತು ಒಬಿಸಿಗಳ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಲಿವೆ.

ಬಾದಾಮಿಯಲ್ಲಿ ಆಕಾಂಕ್ಷಿಗಳಿಂದ ಅರ್ಜಿಗಳ ಮಹಾಪೂರ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಾದಾಮಿಯಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ಗಾಗಿ ಆಕಾಂಕ್ಷಿಗಳಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ. ಈ ಸ್ಥಾನವನ್ನು ಗೆಲ್ಲಲು, 2018 ರಲ್ಲಿ ತಟಸ್ಥವಾಗಿ ಉಳಿದಿದ್ದ ಲಿಂಗಾಯತ ಮತಗಳನ್ನು ಬಿಜೆಪಿ ಕ್ರೋಢೀಕರಿಸಬೇಕಾಗಿದೆ. ಲಿಂಗಾಯತ ಮುಖಂಡರೊಬ್ಬರನ್ನು ಕಣಕ್ಕಿಳಿಸುವುದು ಮತ್ತು ಕುರುಬರನ್ನು ಓಲೈಸುವುದು ಈ ಕ್ಷೇತ್ರದಲ್ಲಿ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ. 2018ರಲ್ಲಿ ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಕಿರಿಯ ಸಹೋದರ ಸಂಗಮೇಶ್ ಅವರು ಅಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿ ಮತಗಳನ್ನು ಕಿತ್ತುಕೊಂಡಿದ್ದರು.

ಹಾಟ್ ಸ್ಪಾಟ್ ಆಗಿರುವ ಕಲಘಟಗಿ ಕ್ಷೇತ್ರ
ಕಲಘಟಗಿ ಕ್ಷೇತ್ರ ಈ ಬಾರಿ ಹಾಟ್ ಸ್ಪಾಟ್ ಆಗಲಿದೆ. ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಶಾಸಕ ಸಂತೋಷ್ ಲಾಡ್ ಹಾಗೂ ಮಾಜಿ ಎಂಎಲ್ಸಿ ನಾಗರಾಜ್ ಚೆಬ್ಬಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಲಾಡ್ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. 'ಇದು ಮಾಧ್ಯಮದ ಪ್ರಚಾರ. ಕಳೆದ 20 ವರ್ಷಗಳಿಂದ ಇಲ್ಲಿನ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ಕೆಲಸ ಹೈಕಮಾಂಡ್ಗೆ ತೃಪ್ತಿ ನೀಡಿದೆ. ಏತನ್ಮಧ್ಯೆ, 75 ವರ್ಷ ದಾಟಿದ ಕಲಘಟಗಿ ಶಾಸಕ ಸಿ ಎಂ ನಿಂಬಣ್ಣನವರ್ ಅವರನ್ನು ಬದಲಾಯಿಸಲು ಬಿಜೆಪಿ ಚಿಂತನೆ ನಡೆಸಿದೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೆ ಲಾಡ್ ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.












Click it and Unblock the Notifications