ಮಾಜಿ ಡಿಸಿಎಂ ಪರಮೇಶ್ವರ್ ಜೊತೆಗೆ ಕೋಲಾರದಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ ಡಿ.ಕೆ.ಶಿವಕುಮಾರ್
ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಶುಕ್ರವಾರದಿಂದ ಆರಮಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಲಾರದಿಂದ ದಂಡಯಾತ್ರೆ ಹೊರಟಿದ್ದಾರೆ. ಅವರ ಜೊತೆಗೆ ಸಾಥ್ ನೀಡಿರುವ ನಾಯಕರು ಇವರು.
ಕೋಲಾರ, ಫೆಬ್ರವರಿ. 03: ವಿಧಾನಸಭೆ ಚುನಾವಣೆಗೂ ಮುನ್ನ ಮೊದಲ ಹಂತದಲ್ಲಿ ಜಂಟಿ ಪ್ರಜಾಧ್ವನಿ ಯಾತ್ರೆ ಮುಗಿಸಿರುವ ಕಾಂಗ್ರೆಸ್, ಶುಕ್ರವಾರದಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ಪಕ್ಷದ ನಾಯಕರು ಎರಡು ತಂಡಗಳಲ್ಲಿ ಪ್ರವಾಸ ಆರಂಭಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತ್ಯೇಕ ಬಸ್ ಪ್ರವಾಸ ಕೈಗೊಂಡಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರ ತಂಡ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದು, ದಕ್ಷಿಣ ಜಿಲ್ಲೆಗಳಲ್ಲಿ ಡಿ.ಕೆ. ಶಿವಕುಮಾರ್ ತಂಡ ಪ್ರವಾಸ ಮಾಡಲಿದ್ದಾರೆ.
ವಿಧಾನಸಭಾ ಚುನಾವಣೆ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯ ಸಂಪೂರ್ಣ ವಿವರಗಳು
ಶುಕ್ರವಾರ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಯಾತ್ರೆಗೆ ಚಾಲನೆ ನೀಡಿದ್ದಾರೆ. ಯಾತ್ರೆ ಆರಂಭಕ್ಕೆ ಮೊದಲು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೂಡುಮಲೆ ಮಹಾಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇವರ ಜೊತೆಗೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್ ಮುನಿಯಪ್ಪ ಸಾಥ್ ನೀಡಿದ್ದಾರೆ.
"ಮುಳಬಾಗಿಲಿನ ಕುರುಡುಮಲೆ 'ಸಾಲಿಗ್ರಾಮ ಮೂರ್ತಿ ಕೂಡುಮಲೆ ಶ್ರೀ ಮಹಾಗಣಪತಿ ಸನ್ನಿಧಿ'ಗೆ ತೆರಳಿ ವಿಘ್ನನಿವಾರಕನಿಗೆ ಪೂಜೆ ಸಲ್ಲಿಸಿದೆ. ಕೋಲಾರದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆ ನಿರ್ವಿಘ್ನವಾಗಿ ನೆರವೇರಲಿ ಹಾಗೂ ನಾಡು ಸುಭಿಕ್ಷವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕೋಲಾರದಲ್ಲಿ ಡಿ.ಕೆ.ಶಿವಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ.
Paid tributes to Dr. B.R Ambedkar in Kolar during the course of #PrajaDhwaniYatra, seeking strength to fight for the rights and future of our people. pic.twitter.com/6EdMb2OZU6
— DK Shivakumar (@DKShivakumar) February 3, 2023
ಡಿ.ಕೆ. ಶಿವಕುಮಾರ್ ಫೆಬ್ರವರಿ 3 ಮತ್ತು 9 ರ ನಡುವೆ ಪಕ್ಷದ 54 ನಾಯಕರ ತಂಡದ ನೇತೃತ್ವ ವಹಿಸಲಿದ್ದಾರೆ. ಡಿ.ಕೆ.ಶಿವಕುಮಾರ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯಿಲಿ, ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕೆ.ಎಚ್. ಮುನಿಯಪ್ಪ ಸೇರಿ 54 ನಾಯಕರು ಸಾಥ್ ನೀಡಲಿದ್ದಾರೆ.
ಡಿ.ಕೆ ಶಿವಕುಮಾರ್ ನೇತೃತ್ವದ ತಂಡ, ಫೆ. 3 ರಂದು ಮುಳಬಾಗಿಲು, ಕೆಜಿಎಫ್ ಕ್ಷೇತ್ರಗಳಲ್ಲಿ, ಫೆ. 4ರಂದು ಮಾಲೂರು, ದೇವನಹಳ್ಳಿ, ಫೆ. 6 ಕ್ಕೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಫೆ. 7 ರಂದು ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಫೆ. 8ಕ್ಕೆ ಶಿಕಾರಿಪುರ, ಸೊರಬ, ಸಾಗರ ಮತ್ತು ಫೆ. 9ರಂದು ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಲಿದ್ದಾರೆ.