'ನಿಜ ಹೇಳಿ ಮೋದಿ' ಎಂದು ಮತ್ತೆ ಪಂಚ ಪ್ರಶ್ನೆ ಎಸೆದ ಸಿದ್ದರಾಮಯ್ಯ
ಬೆಂಗಳೂರು, ಮೇ 6: ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ ದಿನದ ಪ್ರಚಾರದ ಬಳಿಕವೂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಖಾತೆಯಿಂದ ಪ್ರಶ್ನೆಗಳ ಸುರಿಮಳೆ ಸುರಿಯುತ್ತದೆ. ಮೋದಿ ಅವರ ಕೆಲವು ಪ್ರಮುಖ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರತಿ ಉತ್ತರ ಅಥವಾ ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳುತ್ತಿದ್ದಾರೆ.
ಪ್ರಧಾನಿ ಮೋದಿ ಶನಿವಾರ ಮಾಡಿದ ಪ್ರಚಾರ ಭಾಷಣದ ಕೆಲವು ಅಂಶಗಳಿಗೆ ಸಿದ್ದರಾಮಯ್ಯ ಅವರು ಟ್ವಟ್ಟರ್ನಲ್ಲಿ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.
ಮಹದಾಯಿ ವಿವಾದದ ಕುರಿತು ಕೊನೆಗೂ ಮೌನ ಮುರಿದಿದ್ದಕ್ಕೆ ಧನ್ಯವಾದ. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಹ್ವಾನಿಸಿ ಎಂದು ಕೋರಿ ಬರೆದಿದ್ದ ಪತ್ರಗಳಿಗೆ ನೀವು ಹಿಂದೆ ಪ್ರತಿಕ್ರಿಯೆ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ರೈತರ ಕುರಿತ ನಿಮ್ಮ ಕಾಳಜಿ ನಿಜವೇ ಅಥವಾ ಚುನಾವಣೆಯ ಸುಳ್ಳೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಡವರು ಮತ್ತು ಪ್ರಾಮಾಣಿಕರ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಚೆಕ್ನಲ್ಲಿ ಲಂಚ ಪಡೆದಿದ್ದರು, ನಿಮ್ಮ ರೆಡ್ಡಿ ಸ್ನೇಹಿತರಲ್ಲಿ ಒಬ್ಬರಾದ ಜನಾರ್ದನ ರೆಡ್ಡಿ ಅಪನಗದೀಕರಣದ ಸಂದರ್ಭದಲ್ಲಿಯೂ 500 ಕೋಟಿ ವ್ಯಯಿಸಿ ತಮ್ಮ ಮಗಳ ಮದುವೆ ಮಾಡಿಸಿದ್ದರು ಮತ್ತು ನಿಮ್ಮ ಪಕ್ಷದ ಅಧ್ಯಕ್ಷ ಮಗ ಜೇ ಶಾ ಅವರ ಕಂಪೆನಿ ಎರಡು ವರ್ಷಗಳಲ್ಲಿ 16,000 ಪಟ್ಟು ಆದಾಯವನ್ನು ಹೆಚ್ಚಿಸಿಕೊಂಡಿದೆ ಎಂದು ಮೂರು ಅಂಶಗಳನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಇದರ ಜತೆಯಲ್ಲೇ ಅವರು ಪ್ರಧಾನಿಗೆ ಮತ್ತೆ ಪಂಚಪ್ರಶ್ನೆಗಳ ಬಾಣ ಎಸೆದಿದ್ದಾರೆ.

1. ಪೆಟ್ರೋಲ್, ಡೀಸೆಲ್ ತುಟ್ಟಿ ಏಕೆ?
2014ರಲ್ಲಿ ಇದ್ದ ಬೆಲೆಗಿಂತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಆದರೂ ಡೀಸೆಲ್ ಮತ್ತು ಪೆಟ್ರೋಲ್ ಇಷ್ಟೊಂದು ದುಬಾರಿ ಆಗಿರುವುದು ಏಕೆ?

2. ಪಕೋಡ ಮಾರುವ ಸಲಹೆ ಬೇಡ
ಉದ್ಯೋಗ ಸಿಗದಿದ್ದರೆ ಪಕೋಡ ಮಾರಿ ಎಂದು ಯುವಜನರಿಗೆ ಸಲಹೆ ನೀಡುವ ಬದಲು ನೀವು ಏಕೆ ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನ ಹರಿಸಬಾರದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

3. ಮಹದಾಯಿ ಸಭೆ ಏಕೆ ಕರೆಯಲಿಲ್ಲ?
ಮಹದಾಯಿ ವಿವಾದ ಕುರಿತು ಗೋವಾದೊಂದಿಗೆ ಮಾತುಕತೆ ನಡೆಸಿ ಬಗೆಹರಿಸಲಾಗುವುದು ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ. ಮಹದಾಯಿ ವಿಚಾರದಲ್ಲಿ ಏಕೆ ಮಧ್ಯಪ್ರವೇಶ ಮಾಡಿಲ್ಲ? ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏಕೆ ಕರೆದಿಲ್ಲ ಎಂದು ಕೇಳಿದ್ದಾರೆ.

4. ಹಣಕಾಸು ಆಯೋಗದಲ್ಲಿ ಕಡೆಗಣಿಸಿದ್ದೇಕೆ?
ಹಣಕಾಸು ಆಯೋಗದಲ್ಲಿನ ನಿಯಮಾವಳಿಗಳಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳೂ ವಿರೋಧ ವ್ಯಕ್ತಪಡಿಸಿದ್ದವು. ರಾಜ್ಯಗಳಿಗೆ ಹರಿದುಬರುವ ಅನುದಾನವನ್ನು ಕಡಿತಗೊಳಿಸುವ ಅಂಶಗಳಿಗೆ ತಿದ್ದುಪಡಿ ತರುವಂತೆ ಆಗ್ರಹಿಸಿದ್ದವು. ಈ ಸಂಬಂಧ ಚರ್ಚಿಸಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏಕೆ ಕರೆಯಲಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

5. ನಮಗೆ ನೆರವು ನೀಡಬಾರದೇಕೆ?
ಸಿದ್ದರಾಮಯ್ಯ ಸರ್ಕಾರ ಕೆರೆಗಳನ್ನು ಅಭಿವೃದ್ಧಿಪಡಿಸುವ ಬದಲು ಅವುಗಳನ್ನು ಬಿಲ್ಡರ್ಗಳಿಗೆ ಮಾರಾಟ ಮಾಡುತ್ತಿವೆ ಎಂದು ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಕೆರೆಗಳ ವಿಚಾರವನ್ನು ರಾಜಕೀಯಗೊಳಿಸುವ ಬದಲು ನಮಗೆ ಹಣಕಾಸಿನ ಮತ್ತು ತಜ್ಞರ ನೆರವು ನೀಡಬಾರದೇಕೆ ಎಂದು ಕೇಳಿದ್ದಾರೆ.

ವಿಧಾನಸಭೆಗೆ ದಾರಿ ಯಾವುದು?
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಲೇವಡಿ ಮಾಡುವ ಟ್ವೀಟ್, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರ ಸಾರ ಹೀಗಿದೆ,
ಪ್ರಧಾನಿ: ಕರ್ನಾಟಕ ವಿಧಾನಸಭೆಗೆ ದಾರಿ ಯಾವುದು?
ಚಾಣಕ್ಯ: ಬಿಎಸ್ವೈ ರಸ್ತೆಯಲ್ಲಿ ನೇರ ಹೋಗಿ. ಅಲ್ಲಿ ಬಿಎಸ್ವೈ ಅವರನ್ನು ವರುಣಾದಲ್ಲಿ ಬಿಟ್ಟುಬಿಡಿ. ದೇವೇಗೌಡ ಸರ್ಕಲ್ನಲ್ಲಿ ಬಲಕ್ಕೆ ತಿರುಗಿ. ಬಳಿಕ ಯು ಟರ್ನ್ ತೆಗೆದುಕೊಂಡು ದೇವೇಗೌಡ ಅವರನ್ನು ಬಿಟ್ಟುಬಿಡಿ. ಮುಂದೆ ಕಾರಿಯಪ್ಪ ವೃತ್ತ. ಅಲ್ಲಲ್ಲ, ಅದು ತಿಮ್ಮಯ್ಯ ವೃತ್ತ. ಅಲ್ಲಿಂದ ಮತ್ತೆ ಯು ಟರ್ನ್ ತೆಗೆದುಕೊಳ್ಳಿ.
ಪ್ರಧಾನಿ: ಕರ್ನಾಟಕ ತುಂಬಾ ಗೊಂದಲಕಾರಿಯಾಗಿದೆ!
|
ಪ್ರಿಸನ್, ಪ್ರೈಸ್ ರೈಸ್, ಪಕೋಡ!
ಕರ್ನಾಟಕ ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ 'ಪಿ.ಪಿ.ಪಿ' ಆಗಲಿದೆ. ಅಂದರೆ 'ಪಂಜಾಬ್, ಪುದುಚೆರಿ ಮತ್ತು ಪರಿವಾರ' ಕಾಂಗ್ರೆಸ್ ಎಂದು ಮೋದಿ ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಾವು ಪ್ರಜಾಪ್ರಭುತ್ವದ ಮೂರು 'ಪಿ'ಗಳನ್ನು ಯಾವಾಗಲೂ ಬೆಂಬಲಿಸುತ್ತೇವೆ. 'ಜನರು, ಜನರಿಂದ, ಜನರಿಗಾಗಿ' ಎಂದು ಹೇಳಿದ್ದರು. ನಿಮ್ಮ ಪಕ್ಷ 'ಪ್ರಿಸನ್, ಪ್ರೈಸ್ ರೈಸ್ ಮತ್ತು ಪಕೋಡ' ಪಾರ್ಟಿ (ಜೈಲು, ಬೆಲೆ ಏರಿಕೆ ಮತ್ತು ಪಕೋಡ ಮಾರಾಟ) ಅಲ್ಲವೇ? ಎಂದು ಕಿಚಾಯಿಸಿದ್ದಾರೆ.












Click it and Unblock the Notifications