ಮತದಾರರು ಜಾಗ್ರತರಾಗದಿದ್ದರೆ ಸಂಕಷ್ಟ ತಪ್ಪಿದಲ್ಲ!

ಬೆಂಗಳೂರು: ಜುಲೈ 18: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂಬತ್ತು ತಿಂಗಳು ಬಾಕಿಯಿದೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ಮುಂದಿನ ಚುನಾವಣೆಗೆ ತಯಾರಿ ಭರದಿಂದ ಸಾಗಿದೆ. ಆಡಳಿತ ಪಕ್ಷ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಕಾಂಗ್ರೆಸ್ ಅಧಿಕಾರ ಪಡೆಯಲು ಕಸರತ್ತು ನಡೆಸುತ್ತಿದೆ. ಇದೆರಡು ಪಕ್ಷಗಳ ಹೋರಾಟದ ನಡುವೆ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವೇ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಜೆಡಿಎಸ್ ನಾಯಕರು ಆಡುತ್ತಿದ್ದಾರೆ.

ಮೂರು ಪಕ್ಷಗಳ ನಾಯಕರು ಏನೇ ಹೇಳಿದರೂ ಅಂತಿಮವಾಗಿ ಅವರನ್ನು ಅಧಿಕಾರಕ್ಕೆ ತರುವ ಬಿಡುವ ಅಧಿಕಾರ ಹೊಂದಿರುವ ಮತದಾರರು ಮಾತ್ರ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಉದ್ಧಾರವಾದ ಉದಾಹರಣೆಗಳಿಲ್ಲ. ಇದೀಗ ವಿವಾದ, ಹಗರಣ, ಬೆಲೆ ಏರಿಕೆ ಸುಳಿಯಲ್ಲಿ ಸಿಕ್ಕಿ ಹೈರಾಣವಾಗಿರುವ ಜನ ತುತ್ತು ಅನ್ನಕ್ಕೆ ಪ್ರತಿನಿತ್ಯ ಹೋರಾಡಬೇಕಾದ ಸ್ಥಿತಿಗೆ ಬಂದು ತಲುಪಿದ್ದಾರೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾದಿಂದಾಗಿ ಸರ್ಕಾರಿ ನೌಕರರನ್ನು ಹೊರತು ಪಡಿಸಿ ಖಾಸಗಿ ಉದ್ಯೋಗಿಗಳು, ಕಾರ್ಮಿಕರು, ರೈತರು, ವ್ಯಾಪಾರಿಗಳು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ. ಹೀಗಿರುವಾಗಲೇ ಕೊರೊನಾ ಸೋಂಕು ಕಡಿಮೆಯಾಗಿ ಬದುಕು ಸರಿಹೋಯಿತು ಎನ್ನುವಾಗಲೇ ಪ್ರವಾಹ ರೈತರ ಬದುಕಿಗೆ ಬರೆ ಎಳೆದಿದೆ. ಜತೆಗೆ ಬೆಲೆ ಏರಿಕೆ ಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ.

ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿದೆ ಅವರಿಗಾಗಿ ಏನಾದರೂ ಮಾಡೋಣ ಎಂಬ ಆಲೋಚನೆಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಬಂದಂತೆ ಕಾಣುತ್ತಿಲ್ಲ. ಬದಲಾಗಿ ಕೋಟ್ಯಂತರ ರೂ ಖರ್ಚು ಮಾಡಿ ಪಕ್ಷದ ಸಮಾವೇಶ, ಸಭೆ, ಮತ್ತಿತರ ಕಾರ್ಯಕ್ರಮಗಳ ಮೂಲಕ ಜನರ ಮೂಗಿಗೆ ಭರವಸೆಯ ತುಪ್ಪವನ್ನು ಸವರುವ ಕೆಲಸವನ್ನು ಮಾಡಲು ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ.

 ನೀಡಿರುವ ಭರವಸೆಗಳನ್ನು ಮರೆತ ಶಾಸಕರು

ನೀಡಿರುವ ಭರವಸೆಗಳನ್ನು ಮರೆತ ಶಾಸಕರು

ಬೆಲೆ ಏರಿಕೆ, ನಿರುದ್ಯೋಗದ ನಡುವೆ ಹೊತ್ತಿನ ಕೂಳನ್ನು ಸಂಪಾದಿಸಿ ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿರುವಾಗ ರಾಜಕೀಯ ನಾಯಕರು ಮುಂದಿನ ಚುನಾವಣೆಯ ಚಿಂತೆಯಲ್ಲಿದ್ದಾರೆ. ಬಹಳಷ್ಟು ನಾಯಕರಿಗೆ ಕ್ಷೇತ್ರದ ಚಿಂತೆಗಿಂತಲೂ ಮುಂದಿನ ಚುನಾವಣೆಯಲ್ಲಿ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ಟಿಕೆಟ್ ಸಿಗುತ್ತಾ? ಸಿಕ್ಕಿದರೆ ಮತ್ತೆ ಗೆಲ್ಲುತ್ತೇವಾ? ಎಂಬ ಚಿಂತೆಯೂ ಕಾಡಲಾರಂಭಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬಹಳಷ್ಟು ಶಾಸಕರು ತಮ್ಮ ಕ್ಷೇತ್ರವನ್ನೇ ಮರೆತಂತಿದೆ. ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿದೆ. ಸಾರ್ವಜನಿಕವಾಗಿ ಮಾಡಬೇಕಾದ ಕೆಲಸಗಳನ್ನು ಮಾಡಿದ್ದೇವೆಯಾ? ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆಯಾ? ಇಂತಹ ಪ್ರಶ್ನೆಗಳನ್ನು ಅವರು ಕೇಳಿಕೊಳ್ಳುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ತಾವು ಹಿಂದೆ ನೀಡಿದ ಭರವಸೆಗಳೇನು ಎಂಬುದನ್ನೇ ಮರೆತು ಬಿಟ್ಟಿದ್ದಾರೆ.

 ಮತದಾನದ ಬಗ್ಗೆ ಉದಾಸೀನ ಭ್ರಷ್ಟರು ಅಧಿಕಾರ ಹಿಡಿಯಲು ದಾರಿ

ಮತದಾನದ ಬಗ್ಗೆ ಉದಾಸೀನ ಭ್ರಷ್ಟರು ಅಧಿಕಾರ ಹಿಡಿಯಲು ದಾರಿ

ಇಷ್ಟಕ್ಕೂ ನಾವು ಮತದಾರರು ನಮ್ಮ ಕ್ಷೇತ್ರದ ನಾಯಕರನ್ನು ಆಯ್ಕೆ ಮಾಡುವಲ್ಲಿ ಎಡವುತ್ತಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ ಬಗೆಗಿನ ನಿರಾಸಕ್ತಿ. ಅಯ್ಯೋ ಮತನೀಡಿ ಏನಾಗಬೇಕೆಂಬ ಉದಾಸೀನ ಭಾವನೆ, ಅಕ್ಷರಸ್ಥರು, ಬುದ್ಧಿವಂತರು ಎನಿಸಿಕೊಂಡವರು ಚುನಾವಣೆ ವೇಳೆ ಮತದಾನ ಮಾಡದೆ ಮನೆಯಲ್ಲಿ ಉಳಿಯುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುತ್ತಿದೆ. ಪರಿಣಾಮ ಭ್ರಷ್ಟರು ಅಧಿಕಾರ ಹಿಡಿಯಲು ದಾರಿ ಮಾಡಿಕೊಡುತ್ತಿದೆ. ಹಣ ಕೊಟ್ಟು ಮತ ಪಡೆಯುವ ಭ್ರಷ್ಟ ವ್ಯವಸ್ಥೆ ಸೃಷ್ಟಿಯಾಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಮತಚಲಾವಣೆಯಾಗುವಷ್ಟು ನಗರ ಪ್ರದೇಶಗಳಲ್ಲಿ ಆಗುತ್ತಿಲ್ಲ. ಹೀಗಾಗಿಯೇ ರಾಜಕಾರಣಗಳು ಗ್ರಾಮೀಣ ಪ್ರದೇಶಗಳ ಜನರ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡು ಸುಲಭವಾಗಿ ಅಧಿಕಾರಕ್ಕೇರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಮತದಾರರಿಗೆ ಭರವಸೆಗಳ ಸುರಿಮಳೆಗೈದು, ಹಣದ ಆಮಿಷವೊಡ್ಡಿ ಸುಲಭವಾಗಿ ಮತ ಪಡೆಯುತ್ತಾರೆ. ಮತ್ತೆ ಅತ್ತ ಮುಖ ಹಾಕುವುದಿಲ್ಲ.

 ಯೋಗ್ಯರಿಗೆ ಮತದಾನ ಅನಿವಾರ್ಯ

ಯೋಗ್ಯರಿಗೆ ಮತದಾನ ಅನಿವಾರ್ಯ

ವರ್ಷದಿಂದ ವರ್ಷಕ್ಕೆ ರಾಜಕಾರಣಿಗಳ ಆಸ್ತಿಗಳ ಮೌಲ್ಯ ದುಪ್ಪಟ್ಟು ಆಗುತ್ತಾ ಹೋಗುತ್ತಿದೆ. ಅವರನ್ನು ಮತ್ತೆ ನಾವು ಗೆಲ್ಲಿಸಿ ಕಳುಹಿಸುತ್ತಲೇ ಇದ್ದೇವೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಶ್ರೀಮಂತರಾಗಿಯೇ ಮುಂದುವರೆಯುತ್ತಿದ್ದಾರೆ. ಮಧ್ಯಮವರ್ಗದವರ ಬದುಕು ಅತಂತ್ರವಾಗುತ್ತಿದೆ. ಇನ್ನು ಮುಂದಿನ ಒಂಬತ್ತು ತಿಂಗಳ ಕಾಲ ರಾಜಕಾರಣಿಗಳು ಚುನಾವಣೆಯ ಜಪ ಮಾಡಲಿದ್ದು, ಮತ ಸೆಳೆಯಲು ಹೊಸ ತಂತ್ರಗಳನ್ನು ಹೂಡಲಿದ್ದಾರೆ.

ಆದರೆ ಮತದಾರರು ಎಚ್ಚೆತ್ತುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಒಳಿತು ಕೆಡಕುಗಳ ಬಗ್ಗೆ ನಮ್ಮೊಳಗೆ ನಾವು ಮಂಥನ ಮಾಡಬೇಕಾಗಿದೆ. ನಮ್ಮ ಮತದಾನದ ಹಕ್ಕನ್ನು ಯೋಗ್ಯರಿಗೆ ಚಲಾಯಿಸಬೇಕಾಗಿದೆ. ಇಲ್ಲದೆ ಹೋದರೆ ಮತ್ತೆ ಸಂಕಷ್ಟವನ್ನು ಅನುಭವಿಸುವುದು ಖಚಿತ. ಆಡಳಿತ ಪಕ್ಷಕ್ಕೆ ಎಷ್ಟು ಜವಬ್ದಾರಿ ಇದೆಯೋ ಅಷ್ಟೇ ಜವಬ್ದಾರಿ ಪ್ರತಿಪಕ್ಷಗಳಿಗೂ ಇದೆ. ಆದರೆ ಎಲ್ಲ ಪಕ್ಷಗಳು ಕೇವಲ ಚುನಾವಣೆಯತ್ತ ಕೇಂದ್ರೀಕೃತವಾಗಿ ಜನ ಸಾಮಾನ್ಯರನ್ನು ಮರೆಯುತ್ತಿರುವುದು ಬೇಸರದ ಸಂಗತಿಯಾಗಿದೆ.

 ಮತದಾರ ಪ್ರಜಾಪ್ರಭುತ್ವದ ದೊರೆ ಎಂದು ತೋರಿಸುವ ಕಾಲ

ಮತದಾರ ಪ್ರಜಾಪ್ರಭುತ್ವದ ದೊರೆ ಎಂದು ತೋರಿಸುವ ಕಾಲ

ಮುಂದಿನ ಚುನಾವಣೆ ವೇಳೆಗೆ ಯಾರನ್ನು ಅಧಿಕಾರದಲ್ಲಿ ಉಳಿಸಬೇಕು? ಯಾರನ್ನು ಮನೆಗೆ ಕಳಿಸಬೇಕು ಎಂಬ ಅಧಿಕಾರವಿರುವುದು ಮತದಾರರಿಗೆ ಮಾತ್ರ. ಹೀಗಾಗಿ ಪ್ರಜ್ಞಾವಂತ ಮತದಾರರು ಯೋಚಿಸಲೇ ಬೇಕಾದ ಸಮಯ ಬಂದಿದೆ. ರಾಜಕೀಯ ನಾಯಕರು ಗೆಲುವಿಗೆ ಏನೇ ಸರ್ಕಸ್ ಮಾಡಿದರೂ ಅಂತಿಮ ತೀರ್ಮಾನ ಮಾಡುವವರು ಮತದಾರರೇ.. ಆದ್ದರಿಂದ ಮತದಾರರ ಪ್ರಜಾಪ್ರಭುತ್ವದ ದೊರೆಗಳು ಎಂಬುದನ್ನು ತೋರಿಸುವ ಕಾಲ ಈಗ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+