ರಾಜಕೀಯ ಭರಾಟೆ ಅಂತ್ಯ: ಇನ್ನೇನಿದ್ದರೂ ಮತದಾರರದ್ದೇ ಹವಾ..!
ಬೆಂಗಳೂರು, ಮೇ 08: ಚುನಾವಣೆಗೆ ಮಂಗಳವಾರ ಒಂದು ದಿನ ಬಾಕಿಯಿದೆ. ರಾಜಕೀಯ ಪಕ್ಷಗಳ ನಾಯಕರು ಏನೇ ಸರ್ಕಸ್ ಮಾಡಿದರೂ, ಈಗ ಅಭ್ಯರ್ಥಿಗಳ ಭವಿಷ್ಯ ಮತದಾರರ ಕೈಯ್ಯಲ್ಲಿ ಅಡಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಹೀಗಾಗಿ ಪ್ರತಿಯೊಬ್ಬ ಮತದಾರರೂ ತಮ್ಮ ಅಮೂಲ್ಯ ಮತವನ್ನು ತಪ್ಪದೆ ಚಲಾಯಿಸುವುದು ಕಡ್ಡಾಯವಾಗಿದೆ.
ಕಳೆದ ಒಂದೆರಡು ವರ್ಷಗಳಿಂದ ರಾಜಕೀಯ ಪಕ್ಷಗಳು ಮತ್ತು ನಾಯಕರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರ ಪಡೆಯಲು ಹೋರಾಟ ಮಾಡುತ್ತಾ ಬಂದಿದ್ದರೆ, ಬಿಜೆಪಿ ನಾಯಕರು ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಮತದಾರರನ್ನು ಸೆಳೆಯುವ ಸಲುವಾಗಿ ಮೂರು ಪಕ್ಷಗಳು ಹತ್ತು ಹಲವು ಕಸರತ್ತುಗಳನ್ನು ಮಾಡುತ್ತಾ ಬಂದಿದ್ದು, ಭಾರೀ ದೊಡ್ಡ ಮಟ್ಟದ ಭರವಸೆಗಳನ್ನು ಮೂರು ಪಕ್ಷಗಳು ನೀಡಿವೆ.

ಅಧಿಕಾರದಲ್ಲಿರುವ ಯಾವುದೇ ಪಕ್ಷವಾಗಲೀ ಒಂದೊಳ್ಳೆಯ ಯೋಜನೆಗಳನ್ನು ನೀಡಿದ್ದರೆ, ಜನಹಿತವಾಗಿದ್ದರೆ ಮತಕ್ಕಾಗಿ ಮತದಾರರನ್ನು ಗೋಗರೆಯುವ ಪ್ರವೇಯವೇ ಬರುತ್ತಿರಲಿಲ್ಲ. ಮತಕ್ಕಾಗಿ ಮತದಾರರ ಮುಂದೆ ಭರವಸೆಗಳ ಪ್ರಣಾಳಿಕೆಯನ್ನು ಪ್ರಕಟಿಸಿ ಸೆಳೆಯುವ ಪ್ರಯತ್ನ ಮಾಡಬೇಕಾಗಿರಲಿಲ್ಲ.
ರಾಜಕೀಯದಲ್ಲಿ ತಲ್ಲೀನರಾದ ನಾಯಕರು
ಚುನಾವಣೆ ಹಿನ್ನಲೆಯಲ್ಲಿ ಇದುವರೆಗೆ ನಡೆಯುತ್ತಿದ್ದ ರಾಜಕಾರಣಿಗಳ ಪ್ರತಿನಿತ್ಯದ ಭಾಷಣ, ಸಮಾವೇಶ, ರೋಡ್ ಶೋ ಮುಂತಾದವುಗಳಿಂದ ಜನರು ಕೂಡ ಬೇಸತ್ತು ಹೋಗಿದ್ದಾರೆ. ಆದಷ್ಟು ಬೇಗ ಚುನಾವಣೆ ಮುಗಿದು ಹೋಗಲಿ ಎಂಬ ನಿರ್ಧಾರಕ್ಕೂ ಬಂದಿದ್ದಾರೆ. ಚುನಾವಣೆ ಒಂದೆರಡು ವರ್ಷವಿರುವಾಗಲೇ ರಾಜಕೀಯ ಪಕ್ಷಗಳ ನಾಯಕರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದರು. ತಮ್ಮ ಮಾತು, ಕಾರ್ಯ ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಿದ್ದರು.

ರಾಜಕೀಯ ಪಕ್ಷಗಳು ಸಂಘಟನೆ, ಚುನಾವಣಾ ಯಾತ್ರೆ, ಸಮಾವೇಶಗಳನ್ನು ಮಾಡುತ್ತಾ ಬಂದಿದ್ದವು. ಎಲ್ಲ ವರ್ಗದ, ಜಾತಿಯ ಮತಗಳನ್ನು ಸೆಳೆಯುವ ಸಲುವಾಗಿ ಓಲೈಕೆ ರಾಜಕಾರಣಕ್ಕೂ ಮುಂದಾಗಿದ್ದರು. ಚಿಕ್ಕ ಚಿಕ್ಕ ವಿಚಾರಗಳು ದೊಡ್ಡದಾಗಿ ಪ್ರಚಾರ ಪಡೆಯತೊಡಗಿದವು. ಮಾತುಗಳು ಕೂಡ ಎಲ್ಲೆ ಮೀರಲಾರಂಭಿಸಿದವು. ಆರೋಪ ಪ್ರತ್ಯಾರೋಪಗಳು ನಿತ್ಯವೂ ಕೇಳಿ ಬರಲಾರಂಭಿಸಿದವು. ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿದ್ದರು. ಅಭಿವೃದ್ಧಿ ಮಾಡುವುದಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಕೆಲಸಗಳ ಕ್ರೆಡಿಟ್ ಪಡೆಯಲು ಹೋರಾಟ ಮಾಡಲಾರಂಭಿಸಿದರು.
ಒಂದೇ ಅವಧಿಯಲ್ಲಿ ಮೂರು ಪಕ್ಷಗಳ ಆಡಳಿತ
ಇನ್ನು ಆಡಳಿತರೂಢರು ಏನೇನು ಮಾಡಬಹುದಿತ್ತು? ಎಷ್ಟನ್ನು ಮಾಡಿದರು? ಎಂಬ ಪ್ರಶ್ನೆಗಳು ಮುಂದೆ ಸುಳಿಯುತ್ತಿವೆ. ಇದರ ಜತೆಗೆ ಕಳೆದ(2018) ಚುನಾವಣೆ ಬಳಿಕ ಕಳೆದ ಐದು ವರ್ಷದಲ್ಲಿ ಮೂರು (ಕಾಂಗ್ರೆಸ್-ಜೆಡಿಎಸ್, ಬಿಜೆಪಿ) ಪಕ್ಷದ ಆಡಳಿತವನ್ನು ನೋಡಿದ್ದೇವೆ. ಈ ರೀತಿಯ ಪರಿಸ್ಥಿತಿ ಎದುರಾಗುವುದು ಅಪರೂಪವೇ. ಆದರೆ ಕರ್ನಾಟಕದ ಜನ ಮೂರು ಪಕ್ಷಗಳ ಆಡಳಿತವನ್ನು ನೋಡುವ ಭಾಗ್ಯ ಲಭಿಸಿತ್ತು. ಹೀಗಾಗಿ ನಮ್ಮ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಮತ್ತು ವಿರೋಧ ಪಕ್ಷದಲ್ಲಿ ಕುಳಿತಿರುವವರು ನಮ್ಮನ್ನು ಆಳಿದವರೇ ಎನ್ನುವುದನ್ನು ತಳ್ಳಿ ಹಾಕಲಾಗದು.

ಚುನಾವಣೆ ಬಳಿಕ ಬಹುಮತವಿಲ್ಲದಿದ್ದರೂ ಒಟ್ಟಾಗಿ ಆಡಳಿತ ನಡೆಸುವ ವಾಗ್ದಾನ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ವೇಳೆ ಒಳ್ಳೆಯ ಆಡಳಿತ ನೀಡಿದ್ದರೆ ಅವರು 18 ತಿಂಗಳಿಗೆ ಆಡಳಿತ ಕಳೆದುಕೊಂಡು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಹೇಗ ಆದವು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಾರದೆ ಹೋದರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಕೂಡ ಜನರ ಅರಿವಿಗೆ ಬಂದಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು
ಇಲ್ಲಿ ತನಕ ಹಠಕ್ಕೆ ಬಿದ್ದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಹಲವು ಆಕರ್ಷಣೀಯ ಭರವಸೆಗಳನ್ನು ನೀಡಿವೆ. ಜತೆಗೆ ಕಾಲಿಗೆ ಚಕ್ರಕಟ್ಟಿಕೊಂಡು ಚುನಾವಣಾ ಪ್ರಚಾರಗಳನ್ನು ಮಾಡಿದ್ದಾರೆ. ಆದರೆ ರಾಜಕೀಯ ಪಕ್ಷಗಳು ನಾಯಕರು ಏನೇ ಕಸರತ್ತು ಮಾಡಿದರೂ ಕೊನೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎಂದು ನಿರ್ಧಾರ ಮಾಡುವವರು ಮತದಾರರೇ... ಹೀಗಾಗಿ ಮತದಾರರು ಮತದಾನದ ವಿಚಾರದಲ್ಲಿ ಉದಾಸೀನತೆ ತೋರದೆ ತಮ್ಮ ಮತವನ್ನು ಚಲಾಯಿಸುವ ಅಗತ್ಯತೆಯಿದೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಗೂ ಐದು ವರ್ಷಕ್ಕೊಮ್ಮೆ ಸಿಗುವ ಬಹುದೊಡ್ಡ ಅಧಿಕಾರ ಮತದಾನವಾಗಿದೆ. ಹಾಗಾಗಿ ಒಂದೊಂದು ಮತವೂ ಎಷ್ಟೊಂದು ಮಹತ್ವ ಎನ್ನುವುದನ್ನು ನಾವು ಅರಿಯಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳಲಾಗುತ್ತಿದೆ. ಇದೀಗ ಅದನ್ನು ಸಾಬೀತು ಮಾಡುವ ಸಮಯ ಬಂದಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಿ ಕರ್ತವ್ಯ ಮೆರೆಯೋಣ.












Click it and Unblock the Notifications