ಕರ್ನಾಟಕ ಬಜೆಟ್: ಚರ್ಚೆಯೇ ಇಲ್ಲದೆ ಸದನದಲ್ಲಿ ಅಂಗೀಕಾರ
ಬೆಂಗಳೂರು, ಫೆಬ್ರವರಿ 14: ಬಿಜೆಪಿ ಸದಸ್ಯರ ಗದ್ದಲದ ನಡುವೆ, ಕರ್ನಾಟಕ ಬಜೆಟ್ 2019-20ಕ್ಕೆ ಯಾವುದೇ ಚರ್ಚೆ ಇಲ್ಲದೆ ಸದನದ ಧ್ವನಿ ಮತದ ಅಂಗೀಕಾರ ದೊರೆತಿದೆ.
ಬಿಜೆಪಿಯ ಸದಸ್ಯರು, ಶಾಸಕ ಪ್ರೀತಂಗೌಡ ಮನೆಯ ಮೇಲೆ ಕಲ್ಲು ತೂರಾಟ ಹಾಗೂ ಆಪರೇಷನ್ ಆಡಿಯೋ ಪ್ರಕರಣ ಎಸ್ಐಟಿ ತನಿಖೆಗೆ ನೀಡದಂತೆ ಸದನದಲ್ಲಿ ಇಂದು ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡುವೆಯೇ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಧನವಿನಿಯೋಗ ವಿಧೇಯಕವನ್ನು ಮಂಡಿಸುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿದರು. ಅಂತೆಯೇ ಕುಮಾರಸ್ವಾಮಿ ಅವರು 2019-20 ನೇ ಸಾಲಿಗೆ 14,85,142 ಕೋಟಿ ರೂಪಾಯಿಯ ಬಜೆಟ್ ವಿಧೇಯಕವನ್ನು ಸದನಕ್ಕೆ ಮಂಡಿಸುತ್ತಿರುವುದಾಗಿ ಹೇಳಿದರು.

ವಿಧೇಯಕವನ್ನು ಹಾಕುತ್ತಿರುವುದಾಗಿ ಹೇಳಿದ ಸ್ಪೀಕರ್ ಅವರು, ವಿಧೇಯಕದ ಪರವಾಗಿರುವವರು ಹೌದು ಎಂದು ವಿರುದ್ಧವಾಗಿ ಇಲ್ಲದವರು ಇಲ್ಲವೆಂದು ಹೇಳಲು ಹೇಳಿದರು. ಆಡಳಿತ ಪಕ್ಷದ ಸದಸ್ಯರು ಹೌದು ಎಂದರು. ಬಿಜೆಪಿಯವರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಸದನವು ವಿಧೇಯಕವನ್ನು ಧ್ವನಿ ಮತದ ಮೂಲಕ ಅಂಗೀಕರಿಸಿದೆ ಎಂದು ರಮೇಶ್ ಕುಮಾರ್ ಹೇಳಿದರು.
ಆ ಮೂಲಕ ಯಾವುದೇ ಚರ್ಚೆ ಇಲ್ಲದೆ ಬಜೆಟ್ ಅನುಮೋದನೆ ಪಡೆದುಕೊಂಡಿದೆ. ಇದರ ಜೊತೆಗೆ ಮೂರು ತಿಂಗಳ ಲೇಖಾನುದಾನಕ್ಕೂ ಒಪ್ಪಿಗೆ ದೊರೆತಿದೆ. ಬಜೆಟ್ ಜೊತೆಗೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಸಹ ಯಾವುದೇ ಚರ್ಚೆಯೇ ಇಲ್ಲದೆ ಒಪ್ಪಿಗೆ ದೊರೆತಿದೆ.












Click it and Unblock the Notifications