ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆಗೆ ಹೆಚ್ಚಿದ ಒತ್ತಡ: ಪಂಚಮಸಾಲಿ ಸಮುದಾಯದ ಬಿಗಿಪಟ್ಟು- Inside Report
ಈಗ ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧ ಮಾಡುವಂತೆ ಪಂಚಮಸಾಲಿ ಸಮುದಾಯದ ಮುಖಂಡರು ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಒತ್ತಡ ಹೇರುತ್ತಿದ್ದಾರೆ. Inside Report ಇಲ್ಲಿದೆ ಓದಿ
ಬೆಂಗಳೂರು, ಫೆಬ್ರವರಿ 15: ಕರ್ನಾಟಕ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಬೆಳಗಾವಿ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಡಿ ವಿಚಾರವಾಗಿ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವ್ಯಾಪಕ ಟೀಕೆ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ 'ವಿಷಕನ್ಯೆ' ಎಂಬ ಪದವನ್ನು ಬಳಸಿದ್ದಾರೆ. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧವು ಜಾರಕಿಹೊಳಿ ಹರಿಹಾಯ್ದಿದ್ದಾರೆ. ತಮಗೆ ಸಂಬಂಧಿಸಿದ ಸಿಡಿ ಪ್ರಕರಣದ ಸೂತ್ರದಾರರೇ ಡಿಕೆಶಿ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೂ ಸೋಲಿಸಿಯೇ ತಿರುವುದಾಗಿ ರಮೇಶ್ ಹೇಳಿದ್ದಾರೆ. ಇದಕ್ಕಾಗಿ ಹತ್ತು ಕೋಟಿ ಖರ್ಚು ಮಾಡಲು ತಾವು ಸಿದ್ದರಿರುವುದಾಗಿ ಅವರು ಸಾರ್ವಜನಿಕ ಸಭೆಯಲ್ಲೇ ಘೋಷಿಸಿದ್ದಾರೆ. ಈಗ ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧ ಮಾಡುವಂತೆ ಪಂಚಮಸಾಲಿ ಸಮುದಾಯದ ಮುಖಂಡರು ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಪಂಚಮಸಾಲಿ ಸಮುದಾಯದ ಮುಖಂಡರಿಂದ ಜಯಮೃತ್ಯುಂಜಯ ಶ್ರೀ ಭೇಟಿ
ಗೋಕಾಕ, ಅರಬಾವಿ ಹಾಗೂ ಬೆಳಗಾವಿಯ ಪಂಚಮಸಾಲಿ ಮುಖಂಡರು ಜಯಮೃತ್ಯುಂಜಯ ಶ್ರೀಗಳು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಗೋಕಾಕದಿಂದ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ನಿಲ್ಲಲಿ. ಅವರಿಗೆ ನಾವೆಲ್ಲರೂ ಸೇರಿ ಸಹಾಯ ಮಾಡೋಣ ಎಂದು ಹೇಳಿದ್ದಾರೆ.
ಗೋಕಾಕದಲ್ಲಿ ಕಾಂಗ್ರೆಸ್ನಿಂದ ಹಲವಾರು ಆಕಾಂಕ್ಷಿಗಳಿದ್ದಾರೆ. ಆದರೂ, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಲ್ಲಿಸೋಣ. ಈ ಹಿಂದೆ ಎಷ್ಟೋ ಸಾಮ್ರಾಜ್ಯಗಳು ಹೆಣ್ಣುಮಕ್ಕಳಿಂದಲೇ ನಾಶವಾಗಿವೆ. ಗೋಕಾಕದ ದುಷ್ಟ ಸಾಮ್ರಾಜ್ಯವನ್ನು ಮುಗಿಸಲು ಕಿತ್ತೂರ ರಾಣಿ ಚೆನ್ನಮ್ಮಳಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ನಿಲ್ಲಸಿ ಗೆಲ್ಲಿಸೋಣ. ಶ್ರೀಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು. ಪಂಚಮಸಾಲಿ ಸಮುದಾಯದವರೇ ಆದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೀವೆ ಮನವಿ ಮಾಡಬೇಕು. ಇದೆಲ್ಲವನ್ನೂ ನಿಮ್ಮ ಪಾದಕ್ಕೆ ಹಾಕಿದ್ದೆವೆ ಎಂದು ಶ್ರೀಗಳಿಗೆ ಪಂಚಮಸಾಲಿ ಮುಖಂಡರು ಕೇಳಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯ್ತು ವಿಡಿಯೊ
ರಮೇಶ ಜಾರಕಿಹೊಳಿ ವಿರುದ್ಧ ಬೆಳಗಾವಿ (ಗ್ರಾಮೀಣ) ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸುವ ಕುರಿತು ಲಿಂಗಾಯತ ಪಂಚಮಸಾಲಿ ಮುಖಂಡರೊಬ್ಬರು ಮಾಡಿರುವ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿಗಳ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಗೋಕಾಕ ಕ್ಷೇತ್ರದ ಜೆಡಿಎಸ್ ಮುಖಂಡ ಚಂದ್ರಣ್ಣ ಗಿಡ್ಡಣ್ಣನವರ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರೆತಂದು ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸುವುದು ಉತ್ತಮ ಎಂದು ಮನವಿ ಮಾಡಿಕೊಂಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವಿಗೆ ಶ್ರಮ
ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದರೆ ಪಂಚಮಸಾಲಿಗಳು ಅವರ ಗೆಲುವಿಗೆ ಶ್ರಮಿಸುತ್ತಾರೆ ಎಂದು ಗಿಡ್ಡಣ್ಣನವರ್ ಹೇಳಿದ್ದಾರೆ. ಗೋಕಾಕದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಹೆಬ್ಬಾಳ್ಕರ್ ಸೂಕ್ತ ಅಭ್ಯರ್ಥಿ ಎಂದು ಗಿಡ್ಡಣ್ಣನವರ್ ಸಲಹೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಂಚಮಸಾಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಗ್ಗಟ್ಟಾಗಬೇಕು ಎಂದು ಕರೆಯನ್ನೂ ನೀಡಿದ್ದಾರೆ ಈ ವಿಡಿಯೊಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಥವಾ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಾರಕಿಹೊಳಿ ಹೇಳಿಕೆಗೆ ಪಂಚಮಸಾಲಿಗಳ ಬೇಸರ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ರಮೇಶ್ ಜಾರಕಿಹೊಳಿ ಕ್ಷಮೆ ಯಾಚಿಸಬೇಕು ಎಂದು ಪಂಚಮಸಾಲಿ ಸಮುದಾಯ ಒತ್ತಾಯಿಸಿತ್ತು. ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ ನಡೆದ ಸಮಾವೇಶದಲ್ಲಿ ನಮ್ಮ ಸಮಾಜದ ಮುಖಂಡರಾದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಾರಕಿಹೊಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಮಾನತೆ ಭೇದವಿಲ್ಲದೆ ಮಹಿಳೆಯರನ್ನು ಅವಮಾನಿಸುವುದನ್ನು ನಾವು ಖಂಡಿಸುತ್ತೇವೆ. ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಅವರು ಬಳಸಿರುವ ಈ ಮಾತು ಖಂಡನೀಯ ಎಂದು ಪಂಚಮಸಾಲಿ ಸಮುದಾಯ ಹೇಳಿತ್ತು.












Click it and Unblock the Notifications