ಲಿಂಗಾಯತ ಧರ್ಮ ವಿವಾದ : ಎಸ್ಎಲ್ ಭೈರಪ್ಪ ಸಂದರ್ಶನ
ಬೆಂಗಳೂರು, ಜುಲೈ 26: 'ಇದು ಶುದ್ಧ ಅವಿವೇಕ' ಎಂದೇ ಮೊದಲ ಪ್ರತಿಕ್ರಿಯೆ ನೀಡಿದರು ಹಿರಿಯ ಸಾಹಿತಿಗಳಾದ ಎಸ್.ಎಲ್.ಭೈರಪ್ಪ. ನಾವು ಆರಾಧಿಸುವ ಶಿವ-ಪಾರ್ವತಿ, ಗಣಗಳನ್ನೇ ಅವರು ಆರಾಧನೆ ಮಾಡ್ತಾರೆ. ಎಷ್ಟೋ ವೀರಶೈವ ಮಠಗಳಲ್ಲಿ ವೇದ ಪಾಠಶಾಲೆಗಳಿವೆ. ವೇದ-ಪುರಾಣ ಅಂದರೆ ಹಿಂದೂಗಳದಲ್ವಾ? ಎಂದು ತರ್ಕ ಮುಂದಿಟ್ಟರು.
ಲಿಂಗಾಯತ ಸ್ವತಂತ್ರ ಧರ್ಮ ಎಂಬ ಚರ್ಚೆ ಕಾವು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯ ಕೇಳುವ ಸಲುವಾಗಿ ಒನ್ ಇಂಡಿಯಾ ಕನ್ನಡ ಫೋನ್ ಮೂಲಕ ಸಂದರ್ಶನ ನಡೆಸಿದೆ. ಅದರ ವಿವರಗಳು ಇಲ್ಲಿವೆ.

ಪ್ರಶ್ನೆ: ಲಿಂಗಾಯತ ಸ್ವತಂತ್ರ ಧರ್ಮ ಎಂಬ ಚರ್ಚೆ ಶುರುವಾಗಿದೆಯಲ್ಲಾ, ಈ ಬಗ್ಗೆ ನಿಮ್ಮ ಅಭಿಪ್ರಾಯ
ಉತ್ತರ: ಇದೊಂದು ಶುದ್ಧ ಅವಿವೇಕ. ಮನೆಹಾಳು ಕೆಲಸ. ಇಲ್ಲಿ ಮನೆಹಾಳು ಅಂದರೆ ಹಿಂದೂ ಧರ್ಮ ಎಂಬ ಮನೆಯನ್ನು ಹಾಳು ಮಾಡುವಂಥ ಕೆಲಸ ಅಂತ.

ಪ್ರಶ್ನೆ: ಈ ಹಿಂದೆ ಇಂಥ ವಾದವನ್ನು ನೀವು ಕೇಳಿದ್ರಾ?
ಉತ್ತರ: ಈಗ ಹುಟ್ಟಿಕೊಂಡಿರುವ ಕೂಗಿನ ಹಿಂದೆ ರಾಜಕೀಯ ಲಾಭ ಪಡೆಯುವ ಉದ್ದೇಶ ಇದೆ ಅಷ್ಟೇ.
ಕರ್ನಾಟಕದಲ್ಲಿರುವ ಎಷ್ಟೋ ವೀರಶೈವ ಮಠಗಳಲ್ಲಿ ವೇದ ಪಾಠಶಾಲೆಗಳಿವೆ. ವೇದ ಹೇಳಿಕೊಡ್ತಾರೆ. ವೇದ-ಪುರಾಣ ಅಂದರೆ ಅವೇನು ಹಿಂದೂ ಧರ್ಮಕ್ಕೆ ಸೇರಿದ್ದಲ್ಲವಾ?

ಪ್ರಶ್ನೆ: ನಿಮ್ಮ ಬಾಲ್ಯವನ್ನು ಕಳೆದಿದ್ದು ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರದೇಶದಲ್ಲಿ, ಆಗ ಈ ರೀತಿಯ ಆಲೋಚನೆಯನ್ನು ಕಂಡಿದ್ರಾ?
ಉತ್ತರ: ನಾವು ಪೂಜೆ ಮಾಡುವ ಶಿವ-ಪಾರ್ವತಿ-ಗಣಗಳ ಆರಾಧನೆಯನ್ನೇ ಅವರೂ ಮಾಡೋದಲ್ವಾ? ರಾಮೇಶ್ವರದಲ್ಲಿ ಸ್ವತಃ ರಾಮನೇ ಈಶ್ವರನ ಪೂಜೆ ಮಾಡಿದ ಬಗ್ಗೆ ಉಲ್ಲೇಖ ಇದೆ. ನಮ್ಮ ಮಹಾಭಾರತದಲ್ಲಿ ಅರ್ಜುನ ಈಶ್ವರನ ತಪಸ್ಸು ಮಾಡಿದ ಬಗ್ಗೆ ಇದೆ. ಅಂದರೆ ಅದ್ಯಾವ ಕಾಲದಿಂದಲೋ ನಮ್ಮ ನಂಬಿಕೆ ಒಂದೇ.
ಲಿಂಗಾಯತ ಸ್ವತಂತ್ರ ಧರ್ಮ ಅನ್ನೋದನ್ನು ನಾನಂತೂ ಈ ಹಿಂದೆ ಕೇಳಿಲ್ಲ.

ಪ್ರಶ್ನೆ: ಆದರೆ, ಈಗ ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭವಾಗಿದೆಯಲ್ಲಾ?
ಉತ್ತರ: ಸ್ವತಂತ್ರ ಧರ್ಮ ಅಂತಾಗಿ, ಅಲ್ಪಸಂಖ್ಯಾತರು ಎಂದಾದರೆ ಸರಕಾರದಿಂದ ಹಲವು ಸೌಕರ್ಯ ಸಿಕ್ಕಿಬಿಡತ್ತೆ ಎಂಬ ಲೆಕ್ಕಾಚಾರ ಅಷ್ಟೇ. ಇದರ ಬದಲು ಸ್ವಂತ ಕಾರ್ಖಾನೆ, ವ್ಯಾಪಾರ ಶುರು ಮಾಡಲಿ. ಆ ಮೂಲಕ ಮೇಲೆ ಬರಲಿ.
ಪ್ರಾಮಾಣಿಕವಾಗಿ ವ್ಯಾಪಾರ ಮಾಡಿ, ಮೇಲೆ ಬಂದಿರುವ ಉದ್ಯಮಿ ವಿಜಯ ಸಂಕೇಶ್ವರಂಥವರ ಉದಾಹರಣೆ ನಮ್ಮೆದುರು ಇದೆ. ಆ ರೀತಿ ಮೇಲೆ ಬಂದ ಅವರ ಬಳಿ ಎಲ್ಲ ಧರ್ಮ, ಜಾತಿಯವರು ಕೆಲಸ ಮಾಡುತ್ತಿದ್ದಾರೆ.

ಪ್ರಶ್ನೆ: ಈ ವಿವಾದದ ಬಗ್ಗೆ ಹಿಂದೆ ಚರ್ಚೆ ಆಗಿದ್ದರ ನೆನಪು ನಿಮಗಿದೆಯಾ?
ಉತ್ತರ: ಈ ವಿಚಾರದಲ್ಲಿ ಚಿದಾನಂದ ಮೂರ್ತಿ ಅವರನ್ನು ಮಾತನಾಡಿಸಿ. ಅವರು ಮಾತ್ರ ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತಾರೆ. ಅವರೇ ಬರೆದ ಲೇಖನವೊಂದರಲ್ಲಿ ಓದಿದ ನೆನಪು ನನಗೆ. ಧಾರವಾಡದಲ್ಲಿ ನಡೆದ ಸಮಾವೇಶವೊಂದರಲ್ಲಿ ವೀರಶೈವ ಪಂಡಿತರು ಸೇರಿರುತ್ತಾರೆ. ಎಲ್ಲ ಸೇರಿ ಹಿಂದೂ ಧರ್ಮದ ಭಾಗವಾಗಿ ಉಳಿಯುವ ನಿರ್ಧಾರ ಕೈಗೊಳ್ಳುತ್ತಾರೆ.
ಇದನ್ನು ಚಿಮೂ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಈಗಿನ ಚರ್ಚೆ ಬಗ್ಗೆ ಸಮರ್ಥವಾಗಿ ಯಾರಾದರೂ ಮಾತನಾಡಬಲ್ಲವರಿದ್ದರೆ ಅದು ಚಿದಾನಂದ ಮೂರ್ತಿಯವರು ಮಾತ್ರ.












Click it and Unblock the Notifications