25ವರ್ಷಗಳ ಹಿಂದೆ ಜನತಾದಳದ ಕಡೆಯಿಂದ ಬಂದಿದ್ದ ಆಫರ್ ನೆನಪಿಸಿಕೊಂಡ ಸಚಿವ ಸಿ.ಟಿ.ರವಿ
ಬೆಂಗಳೂರು, ಫೆ 14: ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ ಹಾಗು ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ, 25ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡು, ತಮಗೆ ಅಂದು ಬಂದಿದ್ದ ಆಫರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ನೂತನವಾಗಿ ನಾನು ಜವಾಬ್ದಾರಿ ವಹಿಸಿಕೊಂಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಪಡೆಯಲು ಇಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದೇನೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಮುಂದುವರಿಯುತ್ತಾ,"25ವರ್ಷಗಳ ನಂತರ ಯುವಜನ ಮತ್ತು ಕ್ರೀಡಾ ಇಲಾಖೆಯ ಸಚಿವನಾಗಿ ಜವಾಬ್ದಾರಿ ಸ್ವೀಕರಿಸಿದೆ. ಯುವನಿಕಾಕ್ಕೆ ಹೋದಾಗ ಹಳೆಯ ನೆನಪುಗಳು ಒಮ್ಮೆ ಮೆಲುಕು ಹಾಕಿದೆ. ಅಂದು ಪಕ್ಷ ಭ್ರಷ್ಟನಾಗದೇ ಪಕ್ಷ ನಿಷ್ಠೆಯನ್ನು ತೋರಿಸಿದ ಕಾರಣಕ್ಕೆ ಇಂದು ಸಚಿವನಾಗಿ ಬಂದಿದ್ದೇನೆ".
"ಅಂದು ಹೆದರದೆ ಜನರ ನಡುವೆ ನಿಂತು ಹೋರಾಟ ಮಾಡಿದ ಕಾರಣಕ್ಕೆ ಅದೇ ಇಲಾಖೆಯ ಸಚಿವನಾಗಿರುವುದು ಎಷ್ಟು ಸಂತೋಷದ ಸಂಗತಿ. ಅಂದು ದಾರಿ ತಪ್ಪಿದರೆ, ಆಗಲೇ ಕಳೆದು ಹೋಗುತ್ತಿದ್ದೆ ಪಕ್ಷನಿಷ್ಠೆ, ಪರಿಶ್ರಮಕ್ಕೆ ಬೆಲೆ ಸಿಕ್ಕಿಯೇ ಸಿಗುತ್ತದೆ. ಇದನ್ನು ನಿಮ್ಮ ನಡುವೆ ಹಂಚಿಕೊಳ್ಳುವ ಎಂದೆನಿಸಿತು". ಬಂದಿದ್ದ ಆಫರ್ ಏನು?

ಪಕ್ಷನಿಷ್ಠೆ, ಪರಿಶ್ರಮಕ್ಕೆ ಬೆಲೆ ಸಿಕ್ಕಿಯೇ ಸಿಗುತ್ತದೆ
"ಇಂದು ಯವನಿಕಾಕ್ಕೆ ಹೋದಾಗ ಹಳೆಯ ನೆನಪುಗಳು ಒಮ್ಮೆ ಮೆಲುಕು ಹಾಕಿದೆ. 'ರಾಜ್ಯ ಯುವ ಪರಿಷತ್ತಿನ ಅಧ್ಯಕ್ಷನನ್ನಾಗಿ ಮಾಡುತ್ತೇವೆ, ಬಿಜೆಪಿ ಬಿಟ್ಟು ಬಾ' ಎಂದವರ ನಡುವೆ 25 ವರ್ಷದ ನಂತರ ಯುವಜನ ಮತ್ತು ಕ್ರೀಡಾ ಇಲಾಖೆಯ ಸಚಿವನಾಗಿದ್ದೇನೆ" ಎಂದು ಅಂದಿನ ಆಫರ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಬಿ.ಎಲ್.ಶಂಕರ್ ಕಡೆಯಿಂದ ಬಂದ ಆಫರ್
"1996 ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಬಿ.ಎಲ್.ಶಂಕರ್ ಕಡೆಯಿಂದ ನನಗೊಂದು ಆಫರ್ ಬಂದಿತ್ತು. ನಿನ್ನನ್ನು ರಾಜ್ಯ ಯುವ ಪರಿಷತ್ತಿನ ಅಧ್ಯಕ್ಷನನ್ನಾಗಿ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಜನತಾದಳವನ್ನು ಬೆಂಬಲಿಸು. ಬಿಜೆಪಿ ಬಿಟ್ಟು ಬಾ ಎಂದು ಕರೆದಿದ್ದರು - ಸಚಿವ ರವಿ ಮಾಡಿರುವ ಟ್ವೀಟ್

ನಾನು ಬಿಜೆಪಿಗೆ ಬಂದಿರುವುದು ಸಿದ್ದಾಂತಕ್ಕಾಗಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ
"ಆಗ ನಾನು, ಬಿಜೆಪಿಗೆ ಬಂದಿರುವುದು ಸಿದ್ದಾಂತಕ್ಕಾಗಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ನಯವಾಗಿ ತಿರಸ್ಕರಿಸಿ, ನನ್ನ ಪಕ್ಷದ ಅಭ್ಯರ್ಥಿ ಅತ್ತಿಕಟ್ಟೆ ಜಗನ್ನಾಥ್ ಪರವಾಗಿ ಹೋರಾಟ ಮಾಡಿದೆ. ನಾನು ಆಗ ಪಕ್ಷದ ಜವಾಬ್ದಾರಿಯ ಯುವಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿದ್ದೆ" - ರವಿ ಟ್ವೀಟ್.

ಯುವಕರನ್ನು ಕಟ್ಟಿಕೊಂಡು ಬೀದಿ ಹೋರಾಟ
"ಯುವಕರನ್ನು ಕಟ್ಟಿಕೊಂಡು ಬೀದಿ ಹೋರಾಟ ಮಾಡುತ್ತಿದ್ದ ನನ್ನನ್ನು ಪೊಲೀಸ್ ಸಂಕೋಲೆಯಲ್ಲಿ ಸಿಲುಕಿಸಿ, ಹೋರಾಟದಿಂದ ಹಿಂದೆ ಸರಿಯುವಂತೆ ಹಲವು ಷಡ್ಯಂತ್ರಗಳನ್ನು ಮಾಡಿದ್ದರು. ಅ ಸಮಯದಲ್ಲಿ ಹಲವು ಅಪವಾದಗಳನ್ನು ನನ್ನ ಪಕ್ಷ ನಿಷ್ಟೆಯ ಕಾರಣ ಎದುರಿಸಬೇಕಾಯಿತು" - ಎಂದು ಸಿ.ಟಿ.ರವಿ ಟ್ವೀಟ್ ಮಾಡಿ, ಅಂದು ಜನತಾದಳದ ಕಡೆಯಿಂದ ಬಂದಿದ್ದ ಆಫರ್ ಬಗ್ಗೆ ಈಗ ಬಾಯಿಬಿಟ್ಟಿದ್ದಾರೆ.












Click it and Unblock the Notifications