kannada rajyotsava: ಮಧ್ಯರಾತ್ರಿಯಿಂದಲೇ ಅದ್ಧೂರಿ ರಾಜ್ಯೋತ್ಸವ, ಎಲ್ಲೆಲ್ಲೂ ಕನ್ನಡ...ಕನ್ನಡ!
ಇಂದು ಎಲ್ಲೆಡೆ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಇನ್ನು ಗಡಿ ಜಿಲ್ಲೆ ಬೆಳಗಾವಿ ಹಾಗೂ ಕನ್ನಡಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದ್ದು, ಕನ್ನಡದ ವಿಚಾರದಲ್ಲಿ ಈ ಜಿಲ್ಲೆಯು ಹೆಚ್ಚು ಗಮನ ಸೆಳೆಯುತ್ತಿರುತ್ತದೆ. ಈ ಬಾರಿ ಬೆಳಗಾವಿಯಲ್ಲಿ ನಿನ್ನೆ ತಡರಾತ್ರಿಯಿಂದಲೇ ಅದ್ಧೂರಿ ಕನ್ನಡ ರಾಜ್ಯೋತ್ಸವ ನೆರವೇರಿದೆ.
ಬೆಳಗಾವಿಯ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಬಹಳ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಸಾವಿರಾರು ಮಂದಿ ರಾತ್ರಿಯೇ ಜಮಾಯಿಸಿ, ಕನ್ನಡದ ಗುಣಗಾನ ಮಾಡಿ, ಭಾಷಾಭಿಮಾನ ಮೆರೆದಿದ್ದಾರೆ. ಕನ್ನಡ ಭಾಷೆಗೆ ಸಂಬಂಧಿಸಿದ ಹಾಡುಗಳು ಹಾಕಿ, ಕುಣಿದು ಕುಪ್ಪಳಿಸಿದ್ದಾರೆ. ಹಾಡಿಗೆ ಧ್ವನಿಗೂಡಿಸಿ ಕಣ ಕಣವೂ ಕನ್ನಡ ಎಂದು ಸಾರಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ಹಲವು ಕನ್ನಡಪರ ಹೋರಾಟಗಾರರು, ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ತಡರಾತ್ರಿಯೂ ಕನ್ನಡದ ಬಾವುಟಗಳು ರಾರಾಜಿಸಿದವು. ಚೆನ್ನಮ್ಮನ ವೃತ್ತದಲ್ಲೆಡೆ ಕನ್ನಡ ಕನ್ನಡ ಪ್ರತಿಧ್ವನಿಸಿತು. ಕಲಿಯೋಕೆ ಕೋಟಿ ಭಾಷೆ...ಆಡೋಕೆ ಒಂದೇ ಭಾಷೆ ಎಂದು ಎಲ್ಲರೂ ಜೋರಾಗಿ ಘೋಷಣೆ ಕೂಗುವ ಮೂಲಕ ಕನ್ನಡವನ್ನು ಮುಗಿಲೆತ್ತರಕ್ಕೆ ತಲುಪಿಸಿದರು.
ಚೆನ್ನಮ್ಮನ ವೃತ್ತದಲ್ಲಿ ಸಾವಿರಾರು ಯುವಕ, ಯುವತಿಯರು ಆಗಮಿಸಿ, ರಾಜ್ಯೋತ್ಸವದ ಕೇಕ್ ಕತ್ತರಿಸಿದರು. ಪಟಾಕಿ ಸಿಡಿಸುವ ಮೂಲಕ ಕನ್ನಡ ವೈಭವವನ್ನು ಸಾರಿದರು. ಎಲ್ಲೆಡೆಯೂ ಕೆಂಪು, ಹಳದಿ ಬಣ್ಣವೇ ಕಣ್ಣಿಗೆ ರಾಚುತ್ತಿತ್ತು. ಒಟ್ಟಾರೆ ಈ ಬಾರಿ ಮಧ್ಯರಾತ್ರಿಯೇ ರಾಜ್ಯೋತ್ಸವ ಆಚರಿಸಿ ಬೆಳಗಾವಿ ಮಂದಿ ಗಮನ ಸೆಳೆದಿದ್ದಾರೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿರುವ ಶಕ್ತಿಕೇಂದ್ರ ವಿಧಾನಸೌಧವನ್ನು ಸಹ ಕೆಂಪು, ಹಳದಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು ಗಮನ ಸೆಳೆದಿದೆ. ನಿನ್ನೆಯಿಂದಲೇ ಹಲವೆಡೆ ಕನ್ನಡ ರಾಜ್ಯೋತ್ಸವಕ್ಕೆ ವೇದಿಕೆಗಳು ಸಜ್ಜಾಗಿವೆ. ಇಂದು ಅದ್ಧೂರಿ ರಾಜ್ಯೋತ್ಸವ ಹಲವೆಡೆ ನಡೆಯಲಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತಿದ್ದು, ಇಂದು ಧ್ವಜಾರೋಹಣದ ಮೂಲಕ ಕನ್ನಡ ರಾರಾಜಿಸಲಿದೆ.
ಅಬ್ಬಾ...ಅದ್ಬುತ 💛❤️
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 31, 2024
ಬೆಳಗಾವಿ ಚೆನ್ನಮ್ಮ ವೃತ್ತ.. 💛❤️💪🏻
ಏನ್ ಗುರು ಇದು ಕನ್ನಡಿಗರ ಹಾವಳಿ.. 💪🏻
ಇಂದು ಬೆಳಗಾವಿಯಲ್ಲಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡ ಕ್ಷಣಗಳು..pic.twitter.com/qAsM3r2LIO
ಇನ್ನು ರಾಜ್ಯೋತ್ಸವಕ್ಕೆ ಜೆಡಿಎಸ್ ಪಕ್ಷ ಕೂಡ ಶುಭಾಶಯ ಕೋರಿದೆ. ಕರುನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕಸ್ತೂರಿ ಕನ್ನಡವನ್ನು ಬಳಸಿ,ಕಲಿಸಿ. ಕನ್ನಡ ನೆಲ, ಜಲ, ನುಡಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಕನ್ನಡವೇ ನಮ್ಮ ಉಸಿರಾಗಲಿ ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಕೂಡ ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಎಂದರೆ ಕೇವಲ ಭಾಷೆಯಲ್ಲ, ಅದು ನಮ್ಮ ತಾಯ್ನುಡಿ, ನಮ್ಮ ಅಸ್ಮಿತೆ, ನಮ್ಮ ಹೆಮ್ಮೆ. ಪ್ರತಿಕ್ಷಣವೂ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡಾಂಬೆಯನ್ನು ಹೃದಯದಲ್ಲಿ ಆರಾಧಿಸೋಣ. ಕಲಿಯೋಕೆ ಕೋಟಿ ಭಾಷೆ ಇದ್ದರೂ ಮಾತೃಭಾಷೆಯನ್ನೇ ಬಳಸಿ ಭಾಷಾಭಿಮಾನ ಮೆರೆಯೋಣ ಎಂದಿದ್ದಾರೆ.












Click it and Unblock the Notifications