ಕನ್ನಡ ನಾಮಫಲಕ: ಬಲವಂತದ ಕ್ರಮ ಬೇಡ ಎಂದ ಕೋರ್ಟ್
ಬೆಂಗಳೂರು, ಮಾರ್ಚ್ 19: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು, ಅವುಗಳಿಗೆ ಬೀಗ ಹಾಕಿ ಮುಚ್ಚಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಟೈಟಾನ್ ಕಂಪನಿ ಲಿಮಿಟೆಡ್, ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತಿತರ ಬೃಹತ್ ವಾಣಿಜ್ಯ ಸಂಸ್ಥೆಗಳು ರಾಜ್ಯದ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿ ಜಾರಿಗೊಳಿಸಿರುವ ' ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022' ಮತ್ತು ಶೇ.60ರಷ್ಟು ಕನ್ನಡ ಬಳಸದ ಸಂಸ್ಥೆಗಳನ್ನು ಮುಚ್ಚುವುದಾಗಿ ತಿಳಿಸಿ 2024ರ ಫೆ.28ರಂದು ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಿವೆ.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದಾಗಿ (ಸೀಲ್ಡ್ ಡೌನ್) ತಿಳಿಸಿರುವುದು ಕಠಿಣ ಕ್ರಮವಾಗಲಿದೆ. ದಂಡ ಹಾಕುವುದು ಅಥವಾ ಪರವಾನಗಿ ರದ್ದುಪಡಿಸುವು ಕ್ರಮವಾದರೆ ಯೋಜಿಸಬಹುದು ಎಂದು ಹೇಳಿದೆ.
ಆದರೆ, ಸಂಸ್ಥೆಯನ್ನೇ ಮುಚ್ಚುವುದು ಸರಿಯಾದ ಕ್ರಮವಲ್ಲ. ಕಾಯ್ದೆ ಮೂಲಕ ನಿಯಮಗಳನ್ನು ಸುತ್ತೋಲೆ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಸೀಲ್ ಡೌನ್ ಮಾಡುವಂತ ಬಲವಂತದ ಕ್ರಮ ಜರುಗಿಸಬಾರದು. ಉಳಿದಂತೆ ಸುತ್ತೋಲೆ ಉಲ್ಲೇಖಿಸಿರುವ ಇತರೆ ಅಂಶಗಳು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ಮಾಡಿತು.
ಅಲ್ಲದೆ, 'ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022' ಅನ್ನು ಯಾವ ದಿನದಿಂದ ಜಾರಿ ಮಾಡಲಾಗಿದೆ ಎಂಬ ಬಗ್ಗೆ ಗೆಜೆಟ್ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆ ಕುರಿತು ಸರ್ಕಾರ ಮಾಹಿತಿ ನೀಡಬೇಕು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಶೇ.60ರಷ್ಟು ಕನ್ನಡ ಬಳಕೆ ಮಾಡಲು ವಾಣಿಜ್ಯ ಸಂಸ್ಥೆಗಳಿಗೆ ಎಷ್ಟು ದಿನ ಕಾಲಾವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡಬೆಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮಾ.22ಕ್ಕೆ ಮುಂದೂಡಿತು.
ನಾಮಫಲಕ ಹಾಕುವುದರಲ್ಲಿ ತಪ್ಪೇನಿದೆ?; ಕರ್ನಾಟಕದಲ್ಲಿ ನೀವು ವ್ಯಾಪಾರ ಮಾಡುತ್ತಿದ್ದೀರಿ. ಕನ್ನಡ ಬಳಕೆ ಮಾಡುವುದರಿಂದ ನಿಮಗೆ ಏನು ತೊಂದರೆಯಾಗಲಿದೆ?. ಹೆಸರುಗಳನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಹೇಳುತ್ತಿಲ್ಲ. ಸಂಸ್ಥೆಯಲ್ಲಿ ಪ್ರತಿ ಉದ್ಯೋಗಿಯು ಕನ್ನಡಿಗನಾಗಿರಬೇಕು ಎಂದು ನಿಯಮ ಹೇರುತ್ತಿಲ್ಲ. ಕನ್ನಡದಲ್ಲಿ ನಾಮಫಲಕ ಹಾಕುವಂತಷ್ಟೇ ಹೇಳುತ್ತಿದೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಅರ್ಜಿದಾರ ಕಂಪನಿಗಳ ಪರ ವಕೀಲರು, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022ರ ಸೆಕ್ಷನ್ 17(6)ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ರಾಜ್ಯದ ವಾಣಿಜ್ಯ ಸಂಸ್ಥೆಗಳು ತನ್ನ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಸೂಚಿಸಿದೆ. ಈ ನಿಯಮವು ಸಂವಿಧಾನದ ಪರಿಚ್ಛೇದ 345ಕ್ಕೆ ವಿರುದ್ಧವಾಗಿದೆ. ಭಾಷಾ ನೀತಿಯನ್ನು ರೂಪಿಸಿ, ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಖಾಸಗಿ ವ್ಯಕ್ತಿಗಳ ಮೇಲೆ ಭಾಷೆಯನ್ನು ಹೇರಲು ಸಂವಿಧಾನದ ಪರಿಚ್ಛೇದ 345 ನಿರ್ಬಂಧ ಹೇರುತ್ತದೆ. ತಿದ್ದುಪಡಿ ಮಾಡುವ ಮುನ್ನ ಕನ್ನಡ ಬಳಕೆ ಶೇ.50ರಷ್ಟಿತ್ತು. ತಿದ್ದುಪಡಿ ನಂತರ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲಾಗಿದೆ. ಈ ತಿದ್ದುಪಡಿಯ ಸಮರ್ಥನೀಯತೆ ಮತ್ತು ಕಾನೂನುಬದ್ಧತೆಯನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ ಎಂದು ತಿಳಿಸಿದರು.
ಜೊತಗೆ, 2024ರ ಫೆ.28ರಂದು ಸರ್ಕಾರ ಸುತ್ತೋಲೆ ಹೊರಡಿಸಿ, ನಾಮಫಲಕಗಳಲ್ಲಿ ಶೇ.60ರಷ್ಟು ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಸೀಲ್ ಡೌನ್ (ಮುಚ್ಚಲಾಗುವುದು) ಎಂದು ಹೇಳಿದೆ. ಇದು ಅಸಮರ್ಥನೀಯವಾಗಿದ್ದು, ಸುತ್ತೋಲೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದು ಸರ್ಕಾರದ ಉದ್ದೇಶವಾಗಿಲ್ಲ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವ ನಿಯಮ ಜಾರಿಗೊಳಿಸುವುದಷ್ಟೇ ಸರ್ಕಾರದ ಉದ್ದೇಶವಾಗಿದೆ.
ಕಾಯ್ದೆಯನ್ನು ಜಾರಿಗೊಳಿಸಿ 2024ರ ಫೆ.26ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಕಾಯ್ದೆಯನ್ನು ಜಾರಿಗೊಳಿಸಿಲ್ಲ ಎಂಬ ಅರ್ಜಿದಾರರ ವಾದ ಸೂಕ್ತವಾಗಿಲ್ಲ. ಅರ್ಜಿದಾರ ಕಂಪನಿಗಳು ಕಾಯ್ದೆಯನ್ನು ಪ್ರಶ್ನಿಸಿರುವುದರಿಂದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದರು.












Click it and Unblock the Notifications