'ಕಾಮನ್ಮ್ಯಾನ್' ಸರ್ಕಾರದ ನಿದ್ದೆಗಣ್ಣಿನ ಆದೇಶದಲ್ಲಿ ಹಲವು ತಪ್ಪುಗಳು!
ಬೆಂಗಳೂರು, ಜು.16: ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಬಾಯಲ್ಲಿ ಹೇಳಿ, ಜನಸಾಮಾನ್ಯರ ಕಣ್ಣಿಗೆ ಬಟ್ಟೆ ಕಟ್ಟಿ ಆಡಳಿತ ನಡೆಸಲು ಮುಂದಾಗಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ತಡರಾತ್ರಿ ಎಚ್ಚೆತ್ತುಕೊಂಡಿದೆ. ಆದರೆ, ಸರ್ಕಾರ ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿ ಆದೇಶ ಹೊರಡಿರುವುದಕ್ಕೋ ಏನೋ ಆದೇಶದಲ್ಲಿ ಹಲವಾರು ತಪ್ಪುಗಳು ನುಸುಳಿ ನಗೆಪಾಟಲಿಗೆ ಈಡು ಮಾಡಿವೆ. ಸದ್ಯ ತಪ್ಪುಗಳನ್ನು ತಿದ್ದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಕೆಆರ್ಎಸ್ ಪಕ್ಷದ ರವಿಕೃಷ್ಣಾ ರೆಡ್ಡಿ ಅವರು ಲಂಚದ ಕುರಿತು ಲೈವ್ ಮಾಡಿದ್ದರು. ಶವಾಗಾರದಿಂದ ಹೆಣವನ್ನು ಬಿಡುಗಡೆ ಮಾಡಲೂ ಐನೂರು ರೂಪಾಯಿ ಲಂಚ ಪಡೆದಿದ್ದನ್ನು ಸ್ಥಳದಲ್ಲಿಯೇ ವಾಪಸು ಕೊಡಿಸಿದ್ದರು. ಆಗ ರವಿಕರಷ್ಣಾ ರೆಡ್ಡಿ ಮಾತನಾಡುತ್ತಾ " ಜನರನ್ನು ಈ ರೀತಿ ಸುಲಿಗೆ ಮಾಡುವ ನಿಮಗೆ ದೇವರು ಇದ್ದರೆ ಜೀವಂತ ನರಕ ಸೃಷ್ಟಿಸುತ್ತಾನೆ. ಹೀಗೆ ಮಾಡಬೇಡಿ" ಎಂದಿದ್ದರು.
ಪೊಲೀಸರು ಹೋಟೆಲ್ಗಳಿಂದ ಆಹಾರ ಸಂಗ್ರಹಿಸುವುದು ಮತ್ತು ನಿತ್ಯ ಹಫ್ತಾ ವಸೂಲು ಮಾಡುವುದರ ಬಗ್ಗೆ ನೇರ ಪ್ರಸಾರ ಮಾಡಿದಾಗ ಪೊಲೀಸರು ಸ್ಥಳದಲ್ಲೇ ಎಲ್ಲವನ್ನೂ ವಾಪಸು ಕೊಟ್ಟಿದ್ದರು. ಹೀಗೆ ಲಂಚ ರುಷುವತ್ತು ಪಡೆಯುತ್ತಿದ್ದ ಘಟನೆಗಳ ನೇರ ಪ್ರಸಾರ ನಡೆದಿದ್ದು, ಜಾಲತಾಣದಲ್ಲಿ ವೈರಲ್ ಆಗಿದ್ದವು.

ಸರ್ಕಾರಿ ನೌಕರರ ಲಂಚ ಪಡೆಯಲು ಅಡ್ಡಿಯಾಗುತ್ತಿರುವುದನ್ನು ಕಂಡು ಕೆಲವರು ತುಂಬಾ ಬೇಸತ್ತಿದ್ದರು. ಈ ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, "ಸರ್ಕಾರಿ ಕಚೇರಿಗಳಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಕಚೇರಿಯ ಫೋಟೊ ಮತ್ತು ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದು ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ, ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ಖಾಸಗಿ ವ್ಯಕ್ತಿಗಳು ಅನಧಿಕೃತ ಫೋಟೋ, ವಿಡಿಯೋ ತೆಗೆಯುವನ್ನು ನಿಷೇಧಿಸಬೇಕು ಎಂದು ಸರ್ಕಾರದ ಮುಂದೆ ಅಲವತ್ತುಕೊಂಡಿತ್ತು.
ಇಂತಹದ್ದೊಂದು ಪತ್ರ ಬಂದದ್ದೆ ತಡ ಸ್ವಯಂ ಘೋಷಿತ 'ಕಾಮನ್ಮ್ಯಾನ್' ಬಸವರಾಜ ಬೊಮ್ಮಾಯಿ ಸರ್ಕಾರ ತಡ ಮಾಡದೆ ಕಾರ್ಯಪ್ರವೃತ್ತವಾಯಿತು. 'ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೊ ವಿಡಿಯೋ ಮಾಡದಂತೆ ನಿಷೇಧಿಸಲಾಗಿದೆ' ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜು.15ರಂದು ಆದೇಶ ಹೊರಡಿಸಿತು.
ತೀವ್ರ ಆಕ್ಷೇಪ:
ಪಾರದರ್ಶಕ ಆಡಳಿತ ನೀಡುತ್ತೇನೆ, ಇದು ಕಾಮನ್ ಮ್ಯಾನ್ ಸರ್ಕಾರ ಎಂದು ಭಾಷಣಗಳಲ್ಲಿ ಪದೇ ಪದೇ ಹೇಳುವ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಇಂತಹದ್ದೊಂದು ಆದೇಶ ಬಂದಿರುವುದಕ್ಕೆ ಎಲ್ಲೆಡೆ ಆಕ್ಷೇಪ ಕೇಳಿಬಂದಿತ್ತು. ಅಕ್ಷರವಂತರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಹಿಗ್ಗಾಮುಗ್ಗ ಜಾಡಿಸಿದ್ದರು. ಶುಕ್ರವಾರ ಮಾಧ್ಯಾಹ್ನ ಹೊರಬಿದ್ದ ಆದೇಶಕ್ಕೆ ರಾತ್ರಿ ವೇಳೆಗೆ ಆಕ್ರೋಶ ಮಡುಗಟ್ಟಿತ್ತು. ಇದರಿಂದ ಎಚ್ಚೆತ್ತುಕೊಂಡು ಮಧ್ಯರಾತ್ರಿ ಕುಳಿತು ಆದೇಶವನ್ನು ವಾಪಸ್ ಪಡೆದಿರುವ ಬಗ್ಗೆ ಮತ್ತೊಂದು ಆದೇಶ ಮಾಡಿ ಜನಾಕ್ರೋಶದಿಂದ ಪಾರಾಗುವ ಪ್ರಯತ್ನ ಮಾಡಿದೆ.
ಆದೇಶದ ತುಂಬಾ ತಪ್ಪುಗಳೇ?
ರಾಜ್ಯ ಸರ್ಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೊ/ವಿಡಿಯೋ ಮಾಡದಂತೆ ನಿಷೇಧಿಸಿರುವ ಕುರಿತು ಹೊರಡಿಸಿರುವ ಆದೇಶದಲ್ಲಿ ತಪ್ಪುಗಳೇ ತುಂಬಿಕೊಂಡಿವೆ. ಕನ್ನಡದಲ್ಲಿ ಹೊರಡಿಸಿರುವ ಆ ಆದೆಶದಲ್ಲಿ ಪ್ರತಿ ಸಾಲುಗಳಲ್ಲಿಯೂ ತಪ್ಪುಗಳಿದ್ದು, ಅದಕ್ಕೂ ಸಹ ಜನರು ಜಾಡಿಸುತ್ತಿದ್ದಾರೆ. ಇದು ಮಧ್ಯರಾತ್ರಿ ಆದೇಶವೇ ಅಥವಾ ಮದ್ಯರಾತ್ರಿ ಆದೇಶವೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಕರ್ನಾಟಕ ಸರ್ಕಾರದ ನಡಾವಳಿಗಳು ಬದಲಿಗೆ 'ನಡವಳಿಗಳು', ಪ್ರಸ್ತಾವನೆ ಬದಲಿಗೆ 'ಪ್ರಸತ್ತಾವನೆ', ಮೇಲೆ ಎಂಬಲ್ಲಿ 'ಮೇಲೇ', ಭಾಗ-1 ಎಂದು ಇರುವಲ್ಲಿ 'ಬಾಗ-1' ಎಂದಾಗಿದೆ. ದುರಂತ ಎಂದರೆ ಕರ್ನಾಟಕ ಎಂಬ ಶಬ್ಧವೂ ಸಹ ಕರ್ಣಕಠೋರವಾಗಿದೆ. ಕರ್ನಾಟಕ ಎಂದು ಇರಬೇಕಾದಲ್ಲಿ 'ಕರ್ನಾಟಾ' ಎಂದಾಗಿದ್ದಾರೆ, ಇದೇ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಾ ಆದೇಶ ಮಾಡಿದ ಅಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಂದು ಇರಬೇಕಾದಲ್ಲಿ 'ಆಡಳಿದ' ಎಂದು ಬರೆದು ಆದೇಶ ಮಾಡಿದ್ದಾರೆ. ಅದಕ್ಕೆ ಸರ್ಕಾರದ ಉಪಕಾರ್ಯರ್ಶಿ ಆನಂದ.ಕೆ ಎಂಬುವರು ಸಹಿ ಮಾಡಿ ಮಾಡಿದ್ದಾರೆ.












Click it and Unblock the Notifications