ಅಂಬಿಗೆ ಸಿಂಗಪುರದಲ್ಲಿ ಚಿಕಿತ್ಸೆ: ರಜನಿಕಾಂತ್ ಸಲಹೆ
ಬೆಂಗಳೂರು, ಫೆ. 28: ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಬೆಳಗ್ಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ, ಗೆಳೆಯ ಅಂಬರೀಷ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿರುವ ಅಂಬರೀಷ್ ಇದೀಗ ಗೆಲುವಾಗಿದ್ದನ್ನು ಕಂಡು ರಜನಿಕಾಂತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ವೈದ್ಯರು, ಹಿತೈಷಿಗಳು, ಪತ್ನಿ ಸುಮಲತಾ ಅವರ ಜತೆ ಮಾತುಕತೆ ನಡೆಸಿದ ರಜನಿ, ತಕ್ಷಣ ಅವರನ್ನು ಸಿಂಗಪುರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಅಂಬರೀಷ್ ಅವರು ಸದ್ಯಕ್ಕೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಬರೀಷ್ ಅವರ ಆರೋಗ್ಯವು ಸುಧಾರಣೆಗೊಂಡಿದ್ದು, ವಿಕ್ರಂ ಆಸ್ಪತ್ರೆಯ ವೈದ್ಯರ ಹಿಡಿತಕ್ಕೆ ಸಿಕ್ಕಿದೆ. ಈ ಹಂತದಲ್ಲಿ ಅಂಬರೀಷ್ ಅವರಿಗೆ ಹೆಚ್ಚಿನ ಚಿಕಿತ್ಸೆ ಕಲ್ಪಿಸುವ ಅನಿವಾರ್ಯತೆಯಿದೆ. ಹಾಗಾಗಿ ಅವರನ್ನು ವಿದೇಶಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಸಂಬಂಧ ಸಚಿವ ಅಂಬರೀಷ್ ಅವರ ಪತ್ನಿ, ನಟಿ ಸುಮಲತಾ ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದು, ಅಂಬಿಗೆ ವಿದೇಶದಲ್ಲಿ ಚಿಕಿತ್ಸೆಗೆ ಏರ್ಪಾಡು ಮಾಡಿ ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮನವಿಯನ್ನು ಕೇಂದ್ರ ಆರೋಗ್ಯ ಸಚಿವ ಗುಲಾಂ ನಭಿ ಅಜಾದ್ ಅವರ ಗಮನಕ್ಕೂ ತರಲಾಗಿದೆ.
ಈ ಬೆಳವಣಿಗೆಗಳ ಮಧ್ಯೆ, ದೆಹಲಿಯ AIIMS ವೈದ್ಯರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಇಂದು ಬೆಳಗ್ಗೆ ಆಗಮಿಸಲಿದ್ದು, ಅಂಬರೀಷ್ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ವಿದೇಶ ಪ್ರಯಾಣಕ್ಕೆ ಅವರನ್ನು ಕಳುಹಿಸಬಹುದಾ? ಎಂಬುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅವರ ವರದಿಯನ್ನು ಆಧರಿಸಿ, ಇಂದೇ ಅಂಬಿಯನ್ನು ಸಿಂಗಪುರದ ಮೌಂಟ್ ಎಲಿಜಬತ್ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ ದಿಟ್ಟವಾಗಿದೆ. (ಅಂಬರೀಷ್ ಪ್ರಜ್ಞೆ ತಪ್ಪಿಲ್ಲ, ಆರಾಮವಾಗಿದ್ದಾರೆ: ಸುಮಲತಾ)
ಅಂಬರೀಷ್ ಅವರ ಆತ್ಮೀಯ ಸ್ನೇಹಿತ, ಸೂಪರ್ ಸ್ಟಾರ್ ರಜನಿಕಾಂತ್ ಅವರೂ ಸಹ ಇತ್ತೀಚೆಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕ್ಷೇಮವಾಗಿ ಹಿಂದಿರುಗಿದ್ದರು. ಅಲ್ಲದೆ, ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್, ರಾಜಕಾರಣಿ ಅಮರ್ ಸಿಂಗ್ ಮುಂತಾದ ಗಣ್ಯ ವ್ಯಕ್ತಿಗಳು ಇಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ.












Click it and Unblock the Notifications