ಕರ್ನಾಟಕದಲ್ಲಿ ದರ್ಬಾರ್ ನಡೆಸುತ್ತಿರುವ ನಾರ್ತಿಗಳಿಗೆ ಕರವೇ ಕೊಟ್ಟ ಎಚ್ಚರಿಕೆ ಏನು?
ಕರ್ನಾಟಕ, ಕನ್ನಡ, ಕನ್ನಡಿಗರ ಬಗ್ಗೆ ಸದಾ ಕಾಳಜಿ ವಹಿಸುವ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ದೊಡ್ಡ ಸಮರ ಸಾರಿದೆ. ಇಲ್ಲಿವರೆಗೆ ಬೆಂಗಳೂರಿನಲ್ಲಿ ಮಾತ್ರವೇ ಹೊರರಾಜ್ಯದವರ ಹಾವಳಿ ಹೆಚ್ಚಾಗಿತ್ತು. ಆದರೆ, ಇದೀಗ ಬೆಂಗಳೂರು ಮಾತ್ರವಲ್ಲದೆ ಹೋಬಳಿ ಮಟ್ಟದಲ್ಲೂ ಉತ್ತರ ಭಾರತೀಯರ ದಬ್ಬಾಳಿಕೆ ಮಿತಿಮೀರಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯು ಆಕ್ರೋಶ ಹೊರಹಾಕಿದೆ. ಇದರ ವಿರುದ್ಧ ಫೆಬ್ರವರಿ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಹಾ ಸಂಘರ್ಷ ಯಾತ್ರೆಗೆ ಕರೆ ಕೊಟ್ಟಿದೆ.
ಬೇರೆ ರಾಜ್ಯಗಳ ಜನ ಪ್ರತಿದಿನವೂ ಕರ್ನಾಟಕಕ್ಕೆ ಬಂದು ಜನ ತುಂಬಿಕೊಳ್ಳುತ್ತಿದ್ದು, ಇದರಿಂದ ಕನ್ನಡಿಗರಿಗೆ ಸ್ವಂತ ನೆಲದಲ್ಲೇ ನೆಲೆ ಇಲ್ಲದಂತಾಗುತ್ತಿದೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ನಮ್ಮ ನೆಲದಲ್ಲಿಯೇ ನಮಗೆ ನೆಲೆ ಇಲ್ಲವಾದರೆ ಮತ್ತೆಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳೋಣ? ಸಹಿಸಿದ್ದು ಸಾಕು, ಈ ದೌರ್ಜನ್ಯದ ವಿರುದ್ಧ ಸಿಡಿದೇಳುವ ಸಮಯ ಬಂದಾಗಿದೆ ಏಳಿ ಕನ್ನಡಿಗರೇ ಏದ್ದೇಳಿ ಎಂದು ಅವರು ಕರೆ ನೀಡಿದ್ದಾರೆ.

ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ನೆಲೆಸಿರುವವರು ಈಗ ನಗರಗಳಿಂದ ಹೋಬಳಿ ಮಟ್ಟಕ್ಕೆ ನುಗ್ಗಿ ನಮ್ಮ ಅನ್ನ ಕಸಿದುಕೊಳ್ಳುತ್ತಿದ್ದಾರೆ ಎಂದು ಟಿ.ಎ.ನಾರಾಯಣಗೌಡರು ದೂರಿದ್ದಾರೆ. ನಮ್ಮ ಬ್ಯಾಂಕ್ಗಳಿಗೆ ನುಗ್ಗಿ, ನಮ್ಮ ಮೇಲೆಯೇ ಹಿಂದಿ ಹೇರುತ್ತಿರುವ ನಾರ್ತಿಗಳೇ ರಾಜ್ಯ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಅವರು ರಾಜ್ಯಾದ್ಯಂತ ಕರವೇ ಮಹಾ ಸಂಘರ್ಷ ಯಾತ್ರೆಗೆ ಕರೆ ನೀಡಿದ್ದಾರೆ.
ನಮ್ಮ ನೆಲದ ಮಕ್ಕಳ ಉಜ್ವಲ ಭವಿಷ್ಯದ ಸಲುವಾಗಿ ಕರವೇ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಈ ಮಹಾ ಸಂಘರ್ಷ ಯಾತ್ರೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ. ಉತ್ತರ ಭಾರತೀಯರ ಸೊಕ್ಕು ಮುರಿಯಲು ಕರವೇ ಸೇನಾನಿಗಳ ತಂಡ ಸನ್ನದ್ಧವಾಗುತ್ತಿದೆ. ನಮ್ಮ ಸಹನೆಯ ಕಟ್ಟೆ ಒಡೆಯುವ ಮೊದಲು ಬದಲಾಗಿ ಇಲ್ಲವೇ ಪರಿಣಾಮವನ್ನು ಎದುರಿಸಲು ಸಿದ್ಧರಾಗಿ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕನ್ನಡಿಗರ ಅನ್ನ ಕುಸಿಯುತ್ತಿರುವ ಉತ್ತರ ಭಾರತೀಯರ ಗ್ರಹಚಾರ ಬಿಡಿಸಲು ಕನ್ನಡಿಗರು ಸಿದ್ಧವಾಗಿದ್ದಾರೆ ಫೆಬ್ರವರಿ 1ರಂದು ಎಲ್ಲ ಕನ್ನಡಿಗರು ಜೊತೆಯಾಗಿ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ವಲಸೆ ಬಂದಂತಹ ಜನರು ಮೊದಲಿಗೆ ವ್ಯಾಪಾರ ಬೆಳೆಸಿಕೊಂಡರು. ಬಳಿಕ ಜಿಲ್ಲೆ, ತಾಲ್ಲೂಕು ಮಟ್ಟ ತಲುಪಿ ಇದೀಗ ಹೋಬಳಿ ಮಟ್ಟದಲ್ಲೂ ತಮ್ಮ ಅಧಿಪತ್ಯ ಸಾಧಿಸುತ್ತಿದ್ದಾರೆ. ಕನ್ನಡಿಗರಿಗೆ ಸಿಗಬೇಕಾದ ಉದ್ಯಮ, ವ್ಯಾಪಾರಗಳನ್ನು ಉತ್ತರ ಭಾರತೀಯರು ಕಸಿಯುತ್ತಿದ್ದಾರೆ. ಇದನ್ನು ನಾವು ಈಗಲೇ ಹತ್ತಿಕ್ಕದಿದ್ದರೆ ನಾಳೆ ನಮಗೆ ಎಲ್ಲಿಯೂ ನೆಲೆ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕನ್ನಡಿಗರ ಬದುಕನ್ನು ಹೊರರಾಜ್ಯದಿಂದ ಬಂದವರು ಕಸಿಯುತ್ತಿದ್ದಾರೆ. ಕರ್ನಾಟಕದ ಉದ್ಯಮಗಳು, ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿವೆ. ಇದನ್ನೆಲ್ಲ ನಿಗ್ರಹಿಸಲು ಸಮರ್ಪಕವಾದ ಕಾಯ್ದೆ ರೂಪಿಸಿಬೇಕು ಎಂದು ರಾಜ್ಯ ಸರ್ಕಾರಕ್ಕೂ ಕರವೇ ಅಧ್ಯಕ್ಷ ಮನವಿ ಮಾಡಿದ್ದಾರೆ. ಕನ್ನಡನಾಡು ಸಿದ್ದರಾಮಯ್ಯನವರಿಂದ ಇನ್ನಷ್ಟು ನಿರೀಕ್ಷಿಸುತ್ತಿದೆ. ಇನ್ನಷ್ಟು ಕನ್ನಡದ ಕೆಲಸಗಳು ಅವರಿಂದ ಆಗಬೇಕಿದೆ ಎಂದಿದ್ದಾರೆ.












Click it and Unblock the Notifications