ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಬಿಜೆಪಿಗೆ?
ಬೆಂಗಳೂರು, ಜನವರಿ 22 : ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಿಜೆಪಿ ಸೇರಲಿದ್ದಾರೆಯೇ?. ಹೌದು, ಇಂತಹ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹಬ್ಬಿದೆ. ಬಿಜೆಪಿ ಗಣೇಶ್ ಸೆಳೆಯಲು ಪ್ರಯತ್ನ ಆರಂಭಿಸಿದೆ.
ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಜೆ.ಎನ್.ಗಣೇಶ್ ಮೇಲಿದೆ. ಕಾಂಗ್ರೆಸ್ ಅವರನ್ನು ಪಕ್ಷದಿಂದ ಅಮಾತನುಗೊಳಿಸಿದ್ದು, ಘಟನೆ ಬಗ್ಗೆ ವಿಚಾರಣೆ ನಡೆಸಲು ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಕಂಪ್ಲಿ ಶಾಸಕರು ದಿಢೀರ್ ಪ್ರತ್ಯಕ್ಷ, ಆಪರೇಷನ್ ಕಮಲದ ಬಗ್ಗೆ ಹೇಳಿದ್ದೇನು?
ಜೆ.ಎನ್.ಗಣೇಶ್ ಅವರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಈಗಾಗಲೇ ಜನವರಿ 18ರಂದು ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾದ ನಾಲ್ವರು ಶಾಸಕರು ಬಿಜೆಪಿ ಜೊತೆಗಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾಂಗ್ರೆಸ್ನಿಂದ ಅಮಾನತು
ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಾಸಕರು ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಎಫ್ಐಆರ್
10ಕ್ಕೆ ಬಲ ಹೆಚ್ಚಿಸಲು ತಂತ್ರ
ಬಿಜೆಪಿ ಆಪರೇಷನ್ ಕಮಲದ ಪ್ರಕ್ರಿಯೆಯನ್ನು ಇನ್ನೂ ಕೈ ಬಿಟ್ಟಿಲ್ಲ. ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಜೊತೆ ಇದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾದ ನಾಲ್ಕು ಶಾಸಕರು ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಸೇರಿಸಿ ಬಿಜೆಪಿ ತನ್ನ ಬಲವನ್ನು 10ಕ್ಕೆ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸಿದೆ.
ಮುಂದಿನವಾರದಿಂದ ಮತ್ತೆ ಸಕ್ರಿಯ
ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ನಿಧನದಿಂದಾಗಿ ಕರ್ನಾಟಕದ ರಾಜಕೀಯ ಚಟುವಟಿಕೆಗಳಿಗೆ ತಡೆ ಬಿದ್ದಿದೆ. ರೆಸಾರ್ಟ್ನಲ್ಲಿದ್ದ ಕಾಂಗ್ರೆಸ್ ಶಾಸಕರು ಸೋಮವಾರದಿಂದ ಕ್ಷೇತ್ರಕ್ಕೆ ಹೋಗಿದ್ದಾರೆ. ಮುಂದಿನ ಸೋಮವಾರದಿಂದ ಬಿಜೆಪಿ ಶಾಸಕರನ್ನು ಸೆಳೆಯುವ ಕಾರ್ಯವನ್ನು ಮತ್ತೆ ಆರಂಭಿಸುವ ಸಾಧ್ಯತೆ ಇದೆ.
ಜೆ.ಎನ್.ಗಣೇಶ್ ಸೆಳೆಯುವುದು ಸುಲಭ
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಎನ್.ಗಣೇಶ್ ಅವರನ್ನು ಕಾಂಗ್ರೆಸ್ನಿಂದ ಅಮಾನತು ಮಾಡಲಾಗಿದೆ. ಈ ಸಮಯದಲ್ಲಿ ಅವರನ್ನು ಮನವೊಲಿಸಿ ಪಕ್ಷಕ್ಕೆ ಸೆಳೆಯುವುದು ಬಿಜೆಪಿ ತಂತ್ರವಾಗಿದೆ.
ಈಗಾಗಲೇ ಬಿಜೆಪಿ ಸಂಪರ್ಕದಲ್ಲಿ
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಎರಡು ದಿನಗಳ ಕಾಲ ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗದೇ ಅವರು ನಾಪತ್ತೆಯಾಗಿದ್ದರು. ಬಳಿಕ ದಿಢೀರ್ ಪ್ರತ್ಯಕ್ಷವಾಗಿ ಚಿಕ್ಕಮಗಳೂರಿನಲ್ಲಿದ್ದೆ ಎಂದು ಹೇಳಿಕೆ ನೀಡಿದ್ದರು. ಈಗ ಪುನಃ ಬಿಜೆಪಿ ಅವರನ್ನು ಸೆಳೆಯುವ ಸಾಧ್ಯತೆ ಇದೆ.