ವಿಧೇಯಕ ಮಂಡನೆ: ಕಂಬಳ ನಡೆಸಲು ಇನ್ನೊಂದೇ ಹೆಜ್ಜೆ ಬಾಕಿ..
ಬೆಂಗಳೂರು, ಫೆಬ್ರವರಿ 10: ಹೇಳಿದಂತೆ ನಡೆದುಕೊಂಡಿರುವ ಸಿದ್ದರಾಮಯ್ಯ ಸರಕಾರ ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿದೆ. ಮುಖ್ಯವಾಗಿ ಕಂಬಳಕ್ಕೆ ಕಾನೂನಿನ ಮಾನ್ಯತೆ ನೀಡಲು ಈ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ. ವಿಶೇಷ ಎಂದರೆ ಕಂಬಳದ ಜತೆ ಉಳಿದ ಉಳಿದ ಗ್ರಾಮೀಣ ಕ್ರೀಡೆಗಳಿಗೂ ಕಾನೂನಿನಲ್ಲಿ ಅನುವು ಮಾಡಿಕೊಡಲು ಸರಕಾರ ಒತ್ತು ನೀಡಿದೆ.
'ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ವಿಧೇಯಕ, 2017' ಮಸೂದೆಯನ್ನು ಇಂದು (ಫೆ.10) ವಿಧಾನಸಭೆಯಲ್ಲಿ ಮಂಡಿಸಲಾಯಿತು. ಪಶು ಸಂಗೋಪನೆ ಸಚಿವ ಎ. ಮಂಜು ವಿಧೇಯಕ ಮಂಡಿಸಿದರು.
ಕಂಬಕ್ಕಿಲ್ಲ ಇನ್ನು ಅಡ್ಡಿ
ಕಂಬಳ, ಹೋರಿಗಳ ಓಟದ ಸ್ಪರ್ಧೆ, ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಸುವುದಕ್ಕೆ ಮಸೂದೆಯಲ್ಲಿ ಅನುಮತಿ ನೀಡಲಾಗಿದೆ. ಆದರೆ ಸ್ಪರ್ಧೆಗಳಲ್ಲಿ ಬಳಸುವ ಪ್ರಾಣಿಗಳ ಮಾಲಿಕ ಅವುಗಳಿಗೆ ಅನಗತ್ಯ ನೋವು ಮತ್ತು ಸಂಕಟವನ್ನು ಉಂಟು ಮಾಡವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.
ಸಂಪ್ರದಾಯ ಉಳಿಸಲು ಬದ್ಧ
ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದ ಈ ಕ್ರೀಡೆಗಳಿಗೆ ಅನುಮತಿ ನೀಡಲಾಗಿದೆ. ಅಷ್ಟೆ ಅಲ್ಲದೆ ದೇಸಿ ಕೋಣ ಮತ್ತು ಜಾನುವಾರು ತಳಿಯ ಸಂರಕ್ಷಣೆಗಾಗಿ ಈ ರೀತಿ ಅನುವು ಮಾಡಿಕೊಡುತ್ತಿದ್ದೇವೆ ಎಂದು ವಿಧೇಯಕದಲ್ಲಿ ಹೇಳಲಾಗಿದೆ.
ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ
ಪ್ರಾಣಿಯನ್ನು ನಿರ್ವೀರ್ಯಗೊಳಿಸುವಂತಿಲ್ಲ. ಯಾವುದೇ ಪ್ರಾಣಿಗಳಿಗೂ ಬರೆ ಹಾಕುವಂತಿಲ್ಲ ಎಮದು ಮಸೂದೆಯಲ್ಲಿ ಹೇಳಲಾಗಿದೆ. ಅಷ್ಟೆ ಅಲ್ಲದೆ ಪ್ರಾಣಿಗಳಿಗೆ ಮೂಗುದಾರ ಹಾಕಲು ಮಸೂದೆ ನಿರ್ಬಂಧ ವಿಧಿಸಿದೆ. ಇವುಗಳ ಜತೆಯಲ್ಲಿ ಬೀದಿ ನಾಯಿಗಳನ್ನು ವಧೆ ಮಾಡುವುದಕ್ಕೂ ಸರಕಾರ ನಿಷೇಧ ಹೇರಿದೆ.
ಕಾನೂನು ಉಲ್ಲಂಘಿಸುವಂತಿಲ್ಲ
ಈ ವಿಧೇಯಕದಲ್ಲಿ ಇಲ್ಲದ ಪ್ರಾಣಿಗಳ್ನು ಯಾವುದೇ ಆಟಗಳಿಗೆ ಬಳಸಿಕೊಳ್ಳುವಂತಿಲ್ಲ, ಮತ್ತು ಅದಕ್ಕಾಗಿ ತರಬೇತಿಯೂ ನೀಡುವಂತಿಲ್ಲ. ನಿಯಮಾನುಸಾರವೇ ಆಟಗಳನ್ನು ನಡೆಸಬೇಕು ಎಂದು ಈ ವಿಧೇಯಕದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಪೊಲೀಸ್ ಮಿಲಿಟರಿ ಕಾನೂನಿಂದ ಹೊರಗೆ
ಮಿಲಿಟರಿ ಮತ್ತು ಪೊಲೀಸ್ ಉದ್ದೇಶಕ್ಕಾಗಿ ತರಬೇತಿಗೊಳಿಸಿದ ಪ್ರಾಣಿಗಳನ್ನು ಪ್ರದರ್ಶಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಯಾವುದೇ ವೈಜ್ಞಾನಿಕ ಉದ್ದೇಶಗಳಿಗೂ ಪ್ರಾಣಿಗಳನ್ನು ಪ್ರದರ್ಶಿಸಬಹುದು. ಜತೆಗೆ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳ ಪ್ರದರ್ಶನಕ್ಕೂ ಅವಕಾಶವಿದೆ.
ಯಾವಾಗ ಅಂಗೀಕಾರ?
ಸದ್ಯ ವಿಧೇಯಕವನ್ನು ಮಂಡಿಸಲಾಗಿದೆ. ಅಧಿವೇಶನದ ಕೊನೆಯ ದಿನ ವಿಧೇಯಕವನ್ನು ಅಂಗೀಕಾರ ಮಾಡಲಾಗುತ್ತದೆ. ನಂತರ ಕಂಬಳ, ಎತ್ತಿನಗಾಡಿ ಓಟ, ಹೋರಿ ಓಟದ ಸ್ಪರ್ಧೆಗಳನ್ನು ಕಾನೂನಿನ ಭಯವಿಲ್ಲದೆ ನಡೆಸಬಹುದಾಗಿದೆ. ಆದರೆ ಹಿಂಸೆ ಮಾತ್ರ ನೀಡುವಂತಿಲ್ಲ.
(ಚಿತ್ರ ಕೃಪೆ: ಪಿಟಿಐ)