ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ: ವಿಚಾರಣೆಯಿಂದ ಹಿಂದೆ ಸರಿದ ಸಿಜೆ
ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಹಿಂದೆ ಸರಿದಿದ್ದಾರೆ. ಮುಖರ್ಜಿ, ಪ್ರಕರಣದಿಂದ ಹಿಂದಕ್ಕೆ ಸರಿದ ಏಳನೇ ನ್ಯಾಯಮೂರ್ತಿಗಳಾಗಿದ್ದಾರೆ
ಬೆಂಗಳೂರು, ಜೂ 30: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಹಿಂದೆ ಸರಿದಿದ್ದಾರೆ.
ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಕೋರಿ ಎದುರ್ಕುಳ ಈಶ್ವರ ಭಟ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ರಾಘವೇಶ್ವರ ಶ್ರೀಗಳ ಪ್ರಕರಣದಿಂದ ಹಿಂದಕ್ಕೆ ಸರಿಯುವ ಮೂಲಕ ನ್ಯಾ.ಮುಖರ್ಜಿ, ಪ್ರಕರಣದಿಂದ ಹಿಂದಕ್ಕೆ ಸರಿದ ಏಳನೇ ನ್ಯಾಯಮೂರ್ತಿಗಳಾಗಿದ್ದಾರೆ.
ರಾಮಚಂದ್ರಾಪುರ ಮಠದವರು ನಾನು ಪೂರ್ವಾಗ್ರಹ ಭಾವನೆ ಹೊಂದಿದ್ದೇನೆಂದು ಹೇಳಿರುವುದರಿಂದ, ಈ ವಿಚಾರಣೆಯಿಂದ ಹಿಂದಕ್ಕೆ ಸರಿಯುತ್ತಿದ್ದೇನೆಂದು ನ್ಯಾ. ಮುಖರ್ಜಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಈ ಹಿಂದೆ ನ್ಯಾ.ಮುಖರ್ಜಿ ಅವರು ವಿಚಾರಣೆ ನಡೆಸಿದ ರೀತಿಯನ್ನು ಅವಲೋಕಿಸುವುದಾದರೆ ನಮಗೆ ನ್ಯಾಯಸಿಗುವ ಸಾಧ್ಯತೆ ಕಮ್ಮಿ. ಹಾಗಾಗಿ, ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದಕ್ಕೆ ಸರಿಯಬೇಕೆಂದು ಹವ್ಯಕ ಮಹಾಸಭಾ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿತ್ತು.
ಹಲವಾರು ಪುರಾವೆಗಳೊಂದಿಗೆ ಮಹಾಸಭಾ ಸಿಜೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಪ್ರಮಾಣಪತ್ರ ಸಲ್ಲಿಸಿದ್ದರು. ಗೋಕರ್ಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ಸಿಜೆ ಹಿಂದೆ ಸರಿದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ನ್ಯಾಯಮೂರ್ತಿ ರಾಮಮೋಹನ ರೆಡ್ಡಿ, ಎನ್ ಕುಮಾರ್, ಕೆ.ಎನ್.ಫಣೀಂದ್ರ ಸೇರಿದಂತೆ ಇದುವರೆಗೆ ಏಳು ನ್ಯಾಯಮೂರ್ತಿಗಳು ಈ ಕೇಸಿನಿಂದ ಹಿಂದಕ್ಕೆ ಸರಿದಿದ್ದಾರೆ.











Click it and Unblock the Notifications