ಹಿಜಾಬ್ ವಿವಾದ; ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಅರ್ಜಿ ವರ್ಗಾವಣೆ
ಬೆಂಗಳೂರು, ಫೆಬ್ರವರಿ 09; ಕರ್ನಾಟಕದ ಹಿಜಾಬ್ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ಬುಧವಾರ ಮತ್ತೆ ಆರಂಭವಾಗಿದೆ. ಕೆಲವು ಹೊತ್ತು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಬಳಿಕ ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವಂತೆ ರಿಜಿಸ್ಟ್ರಾರ್ಗೆ ಸೂಚಿಸಿತು. ತಕ್ಷಣ ಎಲ್ಲಾ ಕಡತಗಳನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಕಳಿಸುವಂತೆ ನಿರ್ದೇಶನ ನೀಡಿತು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಬುಧವಾರ ವಿಚಾರಣೆ ಆರಂಭವಾಯಿತು. ವಕೀಲ ಸಂಜಯ್ ಹೆಗಡೆ ಅರ್ಜಿದಾರರ ಪರವಾಗಿ ಬುಧವಾರ ವಾದ ಮಂಡನೆ ಮಾಡುತ್ತಿದ್ದಾರೆ.
ಈ ಪ್ರಕರಣದ ಸಮಸ್ಯೆ ಬಗೆಹರಿಯಬೇಕು. ಇದು ನನ್ನ ಸ್ವಂತ ಊರು ಮತ್ತು ನನ್ನ ಕಾಲೇಜಿನ ಪ್ರಕರಣ. ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿದೆಯೇ? ಎಂದು ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿದರು.

ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ವಿವರವಾಗಿ ನಡೆಸಲಿ. ಆದರೆ ಮಧ್ಯಂತರ ಆದೇಶವೊಂದನ್ನು ನೀಡಲಿ ಎಂದು ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ ಕೋರ್ಟ್ಗೆ ಮನವಿ ಮಾಡಿದರು.
ಸಮವಸ್ತ್ರದ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಕಾಲೇಜು ಅಭಿವೃದ್ಧಿ ಸಮಿತಿಗೆ ನೀಡಿದೆ. ಆದ್ದರಿಂದ ಅರ್ಜಿಯ ವಿಚಾರಣೆ ವೇಳೆ ಮಧ್ಯಂತರ ಆದೇಶದ ಅಗತ್ಯವಿಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.
ಹಿಬಾಜ್ ಕಡ್ಡಾಯ ಎಂಬುದಕ್ಕೆ ಖುರಾನ್ನಲ್ಲಿನ ಒಂದೆರಡು ವಾಕ್ಯ ಬಿಟ್ಟರೆ ಬೇರೆ ಸಮರ್ಥನೆಗಳಿಲ್ಲ. ಸರ್ಕಾರ ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರ ನೀಡಿದೆ. ಸಮವಸ್ತ್ರದ ಬಗ್ಗೆ ನಿರ್ಧರಿಸುವುದಕ್ಕೆ ಶಾಲೆ, ಕಾಲೇಜು ಸಮಿತಿಗೆ ಅಧಿಕಾರವಿದೆ ಎಂದು ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿದರು.
ಬುಧವಾರ ಸುಮಾರು ಒಂದು ಗಂಟೆಗಳ ಕಾಲ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಗೊಳಿಸಿ ಆದೇಶ ನೀಡಿದರು. ಇಷ್ಟು ದಿನ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿತ್ತು.
ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಲು ಇದು ಅರ್ಹ ಪ್ರಕರಣವಾಗಿದೆ. ಸಾಂವಿಧಾನಿಕ ಹಾಗೂ ವೈಯಕ್ತಿಕ ಹಕ್ಕುಗಳು ಮತ್ತು ಕಾನೂನು, ಹಲವು ಕೋರ್ಟ್ಗಳ ತೀರ್ಪು ಗಂಭೀರ ವಿಚಾರ ಎಂದು ಹೇಳಿದರು.
ಅರ್ಜಿ ವಿಚಾರಣೆ ವಿಳಂಬ; ಹಿಜಾಬ್ ಕುರಿತ ಅರ್ಜಿಯ ವಿಚಾರಣೆ ವಿಸ್ತೃತ ಪೀಠಕ್ಕೆ ವರ್ಗಾವಣೆಗೊಂಡಿದೆ. ಇದರಿಂದಾಗಿ ಅರ್ಜಿಯ ವಿಚಾರಣೆ ವಿಳಂಬವಾಗಲಿದೆ. ಅರ್ಜಿಯ ವಿಚಾರಣೆ ಹೊಸ ಪೀಠ ರಚನೆ ಮಾಡಬೇಕೆ? ಅಥವ ತಮ್ಮ ಪೀಠದಲ್ಲಿಯೇ ವಿಚಾರಣೆ ನಡೆಸಬೇಕೆ? ಎಂದು ಮುಖ್ಯ ನ್ಯಾಯಮೂರ್ತಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಹೈಸ್ಕೂಲ್ ಮತ್ತು ಕಾಲೇಜುಗಳಿಗೆ ಫೆಬ್ರವರಿ 9ರಿಂದ ಮೂರು ದಿನಗಳ ಕಾಲ ರಜೆ ನೀಡಿ ಆದೇಶ ಹೊರಡಿಸಿದೆ. ಹಿಜಾಬ್ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಮಧ್ಯಂತರ ಆದೇಶವನ್ನು ಸಹ ನೀಡಿಲ್ಲ.
ಸೋಮವಾರ ರಾಜ್ಯದಲ್ಲಿ ಕಾಲೇಜುಗಳು ಮತ್ತೆ ಆರಂಭವಾಗಲಿವೆ. ಆಗ ಹಿಜಾಬ್ ವಿವಾದ ಮತ್ತೆ ಭುಗಿಲೇಳಿದೆಯೇ? ಎಂದು ಕಾದು ನೋಡಬೇಕಿದೆ. ಮಂಗಳವಾರ ಪ್ರತಿಭಟನೆ ನಡೆದಿದ್ದ ಶಿವಮೊಗ್ಗ, ದಾವಣಗೆರೆ ನಗರಗಳಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಎರಡು ವಾರ ನಿಷೇಧಾಜ್ಞೆ; ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಶಾಲೆ, ಪಿಯು ಕಾಲೇಜು, ಡಿಗ್ರಿ ಕಾಲೇಜು ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವುದು, ಪ್ರತಿಭಟನೆ ಮಾಡುವುದನ್ನು ಎರಡು ವಾರಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.












Click it and Unblock the Notifications